ಹತ್ಯಾಕಾಂಡಕ್ಕೆ ಪರೋಕ್ಷ ಕರೆ ನೀಡಿದ ಬ್ಯಾಂಕ್ ಅಧಿಕಾರಿ ವಿಷ್ಣುಪ್ರಸಾದ್ ನಿಡ್ಡಾಜೆ ವಿರುದ್ಧ ಎಫ್.ಐ.ಆರ್. ದಾಖಲು

Update: 2022-01-14 17:05 GMT

ಮಂಗಳೂರು, ಜ.14: ಫೇಸ್ ಬುಕ್ ಪೋಸ್ಟ್ ಮೂಲಕ ಮಂಗಳೂರಿನಲ್ಲಿ ಮುಸ್ಲಿಮರ ನರಮೇಧಕ್ಕೆ ಪರೋಕ್ಷ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಫೆಡರಲ್ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿರುವ ವಿಷ್ಣುಪ್ರಸಾದ್ ನಿಡ್ಡಾಜೆ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

ಸಾಲೆತ್ತೂರಿನಲ್ಲಿ ಮದುಮಗನೊಬ್ಬ ವೇಷ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಬ್ಯಾಂಕ್‌ನಲ್ಲಿ ಅಧಿಕಾರಿ ಎಂದು ತನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿರುವ ವಿಷ್ಣುಪ್ರಸಾದ್ ನಿಡ್ಡಾಜೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿದ್ದ. ಇದರ ವಿರುದ್ಧ ಪಿ.ಎಫ್.ಐ. ಸಂಘಟನೆ ವಿಟ್ಲ ಠಾಣೆಗೆ ದೂರು ನೀಡಿತ್ತು. ಈ ದೂರಿನಂತೆ ಇದೀಗ ಐಪಿಸಿ ಸೆಕ್ಷನ್ 505ರಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಡರಲ್ ಬ್ಯಾಂಕ್‌ನ ಮುಖ್ಯಸ್ಥರು ಕೂಡಾ ಆರೋಪಿ ವಿಷ್ಣುಪ್ರಸಾದ್ ನಿಡ್ಡಾಜೆ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದಾಗಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

 ಏನಿದು ಪ್ರಕರಣ?

ಸಾಲೆತ್ತೂರಿನಲ್ಲಿ ಮದುಮಗನೊಬ್ಬ ವೇಷ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಡರಲ್ ಬ್ಯಾಂಕ್‌ನಲ್ಲಿ ಅಧಿಕಾರಿ ಎಂದು ತನ್ನ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿರುವ  ವಿಷ್ಣು ಪ್ರಸಾದ್ ನಿಡ್ಡಾಜೆ ಪ್ರಚೋದನಕಾರಿ ಪೋಸ್ಟ್ ಗಳನ್ನು ಹಾಕಿದ್ದರು. 

ತನ್ನ ಫೇಸ್‌ಬುಕ್ ಖಾತೆಯಲ್ಲಿ "ನಮ್ಮದು ಕೃಷ್ಣನ ತತ್ವ, ಶಿಶುಪಾಲನ ನೂರು ಪೆಟ್ಟುಗಳನ್ನು ಸಹಿಸೋದು,  ನೂರ ಒಂದನೇ ಪೆಟ್ಟಿಗೆ ಢಿಮ್ ... ಬಾಂಧವರ ಸಾವಿರ ಪೆಟ್ಟು ಸಹಿಸೋದು , ನಂತರ ಗೋಧ್ರಾ ತರದ ಒಂದು ಪೆಟ್ಟಿನಲ್ಲಿ 20 ವರ್ಷ ಗಪ್ ಚುಪ್... ಗುಜರಾತಿನ ಕೊನೆಯ ಕೋಮು ಗಲಭೆ ಯಾವಾಗ ಎಲ್ಲಿ ಹೇಗೆ ನಡೆಯಿತು ಅನ್ನೋದನ್ನ ಸ್ವಲ್ಪ ಯೋಚಿಸಿ ನೋಡಿದರೆ ಇದು ಅರ್ಥವಾದೀತು ... ಬಹುಶಃ ವಿಟ್ಲ, ಮಂಗಳೂರು ಕಡೆ ಇನ್ನೂ ಅವುಗಳ ಕೌನ್ಟ್ ಪೂರ್ತಿ ಆಗಿಲ್ಲ ಅನ್ಸುತ್ತೆ... ಬಂದೂ ಬಂದೂ ಕೆಣಕುತ್ತಿವೆ ..." ಎಂದು  ಪೋಸ್ಟ್ ಮಾಡಿದ್ದ. ಇನ್ನೊಂದು ಪೋಸ್ಟ್ ನಲ್ಲಿ " ಮದುಮಗನ ಕಾರು, ಅಂಗಡಿ, ಮನೆ ಇತ್ಯಾದಿಗಳಿಗೆ ಹಾನಿ ಮಾಡಬೇಕು ಎಂಬರ್ಥದಲ್ಲಿ ಬರೆದಿದ್ದ.

ಇದರ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ವಿಷ್ಣು ಪ್ರಸಾದ್ ನಿಡ್ಡಾಜೆಯ ಫೇಸ್ ಬುಕ್ ಖಾತೆ ಡಿಲೀಟ್ ಆಗಿದೆ. ಇದನ್ನು ಯಾರು ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News