ಕುಂದಾಪುರ ಅರಣ್ಯಾಧಿಕಾರಿಗಳ ಕಾರ್ಯಾಚರಣೆ: ಚಿರತೆ ಮರಿಯ ರಕ್ಷಣೆ

Update: 2022-01-15 17:08 GMT

ಕುಂದಾಪುರ, ಜ.15: ಕಂದಾವರ ಗ್ರಾಪಂ ವ್ಯಾಪ್ತಿಯ ಜಪ್ತಿ ಎಂಬಲ್ಲಿರುವ ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಶುದ್ಧೀಕರಣ ಯೋಜನೆ ಘಟಕದ ಆವರಣದಲ್ಲಿ ಓಡಾಡುತ್ತಿದ್ದ ಚಿರತೆ ಮರಿಯನ್ನು ಕುಂದಾಪುರ ಅರಣ್ಯ ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ.

ಘಟಕದ ಆವರಣದಲ್ಲಿ ಚಿರತೆಗಳ ಓಡಾಟ ಕಂಡ ಘಟಕದ ಸಿಬ್ಬಂದಿ ಜ.14 ರಾತ್ರಿ ಪುರಸಭೆ ಮುಖ್ಯಾಧಿಕಾರಿ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿತು. ಆದರೆ ಇಂದು ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ, ಕೆಲವೇ ಗಂಟೆಯಲ್ಲಿ ಅಂದಾಜು ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯೊಂದನ್ನು ರಕ್ಷಣೆ ಮಾಡಿತು. ಇದರೊಂದಿಗೆ ಇದ್ದ ಇನ್ನೊಂದು ಮರಿ ತಪ್ಪಿಸಿಕೊಂಡಿದೆ ಎನ್ನಲಾಗಿದೆ.

ಸ್ಥಳದಲ್ಲಿ ಮಾಂಸದ ತುಂಡುಗಳು ಸಿಕ್ಕಿದ್ದು, ಅಲ್ಲೇ ಸಮೀಪ ದೊಡ್ಡ ಚಿರತೆ ಓಡಾಟದ ಬಗ್ಗೆ ಪುರಾವೆಗಳು ದೊರೆತಿವೆ. ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಪರ್ಡ್ ಲೋಬೋ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬಿ.ಉದಯ್, ಶರತ್ ಗಾಣಿಗ, ಹಸ್ತಾ, ಅರಣ್ಯ ರಕ್ಷಕರಾದ ಉದಯ್ ಕುಮಾರ್ ಶೆಟ್ಟಿ, ಅಶೋಕ್, ಅರಣ್ಯ ವೀಕ್ಷಕರಾದ ಸತೀಶ್, ರೋಶನ್ ಈ ಕಾರ್ಯಾಚರಣೆ ನಡೆಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News