ಕೈಗಾರಿಕಾ ಇಲಾಖೆಯ ಸೂಚನೆ ಉಲ್ಲಂಘಿಸಿ ಮಾರಾಟ: ಸರಕಾರಕ್ಕೆ 137 ಕೋ.ರೂ. ನಷ್ಟ

Update: 2022-01-17 02:49 GMT

ಬೆಂಗಳೂರು, ಜ.17: ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆ ಉದ್ದೇಶಕ್ಕೆ ದೇವನಹಳ್ಳಿಯ ಹರಳೂರು ಲೇಔಟ್ ಬಳಿ ಎಕರೆಯೊಂದಕ್ಕೆ 1.61 ಕೋ. ರೂ.ಗೆ ಸೆಂಟರ್ ಫಾರ್ ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸ್ಟಡೀಸ್ ಸಂಸ್ಥೆಗೆ ಹಂಚಿಕೆ ಮಾಡಲು ಅನುಮೋದಿಸಬಹುದು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಟಿಪ್ಪಣಿ ಕಂಡಿಕೆಯನ್ನು ರಾಜ್ಯ ಬಿಜೆಪಿ ಸರಕಾರವು ಬದಿಗಿರಿಸಿರುವುದು ಇದೀಗ ಬಹಿರಂಗವಾಗಿದೆ.

ಅಲ್ಲದೆ, ಸಗಟು ಹಂಚಿಕೆ ಹೆಸರಿನಲ್ಲಿ 116.16 ಎಕರೆಯನ್ನು 50 ಕೋ.ರೂ.ಗೆ ಹಂಚಿಕೆ ಮಾಡಲು ನಿರ್ಣಯಿಸಿದ್ದ ಸಚಿವ ಸಂಪುಟವು ಪ್ರತಿ ಎಕರೆಗೆ 1.18 ಕೋಟಿ ರೂ. ಕಡಿಮೆ ಮೊತ್ತಕ್ಕೆ ಜಮೀನನ್ನು ಹಂಚಿಕೆ ಮಾಡಿದಂತಾಗಿದೆ. ಮತ್ತೊಂದು ವಿಶೇಷವೆಂದರೆ ಕೋವಿಡ್ 2ನೇ ಅಲೆ ತೀವ್ರವಾಗಿದ್ದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದಾಗಲೇ ಸೆಸ್ ಸಂಸ್ಥೆಗೆ ಅತ್ಯಂತ ಬೆಲೆ ಬಾಳುವ ಜಮೀನು ಹಂಚಿಕೆಯಾಗಿದೆ.

ಆರೆಸ್ಸೆಸ್ ಬೆಂಗಳೂರು ಮಹಾನಗರದ ಸಂಘ ಚಾಲಕ್ ಮತ್ತು ಎಬಿವಿಪಿ ರಾಷ್ಟ್ರೀಯ ಘಟಕದ ಮಾಜಿ ಉಪಾಧ್ಯಕ್ಷರಾಗಿದ್ದ ಎಂ.ಕೆ.ಶ್ರೀಧರ್ ಅಧ್ಯಕ್ಷರಾಗಿರುವ ಸೆಂಟರ್ ಫಾರ್ ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸ್ಟಡೀಸ್ ಸಂಸ್ಥೆಯು ಸ್ಥಾಪಿಸಲು ಹೊರಟಿರುವ ಚಾಣಕ್ಯ ವಿವಿಗೆ ಜಮೀನು ಹಂಚಿಕೆ ಮಾಡಿರುವ ಸಂಬಂಧ 'The-File' ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತ ವನ್ನು ಪಡೆದಿದೆ.

ಸೆಸ್ ಸಂಸ್ಥೆಯು ಜಮೀನು ಮಂಜೂರು ಮಾಡಿಸಿ ಕೊಳ್ಳುವ ಸಲುವಾಗಿ 2021ರ ಮಾರ್ಚ್ 25ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಗೆ ಪತ್ರ ಬರೆದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ್ದ ಯಡಿಯೂರಪ್ಪ ‘ಸೆಸ್ ಸಂಸ್ಥೆಗೆ ಜಮೀನು ಮಂಜೂರು ಮಾಡಲು ತ್ವರಿತವಾಗಿ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ತರಲು ಅಗತ್ಯ ಕ್ರಮ ವಹಿಸಲು ಸೂಚಿಸಿದೆ’ ಎಂದು ಸೆಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ ರೆಡ್ಡಿ ಬರೆದಿದ್ದ ಪತ್ರದ ಮೇಲೆಯೇ ಟಿಪ್ಪಣಿ ಹಾಕಿದ್ದರು. ಆ ನಂತರ ಈ ಪತ್ರವನ್ನಾಧರಿಸಿ ಅತ್ಯಂತ ಕ್ಷಿಪ್ರಗತಿಯಲ್ಲಿ 3-4 ತಿಂಗಳೊಳಗೇ ಜಮೀನು ಹಂಚಿಕೆ ಪ್ರಕ್ರಿಯೆ ಪೂರ್ಣ ಗೊಂಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
 
► 137 ಕೋಟಿ ರೂ. ನಷ್ಟ:?

ಇಲಾಖೆ ಅನುಮೋದಿಸಿರುವಂತೆ ಎಕರೆಗೆ 1.16 ಕೋ.ರೂ.ನಂತೆ ಹಂಚಿಕೆ ಮಾಡಿದ್ದರೆ 187.01 ಕೋ. ರೂ. ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಆದಾಯ ಸಂದಾಯವಾಗುತ್ತಿತ್ತು. ಆದರೆ, ಇದನ್ನು ಬದಿಗಿರಿಸಿರುವ ಸಚಿವ ಸಂಪುಟವು 116.16 ಎಕರೆಗೆ ಕೇವಲ 50 ಕೋ.ರೂ.ಷ್ಟೇ ವಿಧಿಸಿದ್ದರಿಂದ ಮಂಡಳಿಗೆ 137 ಕೋ.ರೂ. ನಷ್ಟವಾಗಿದೆ.

ಹಾಗೆಯೇ ಸಗಟು ಹಂಚಿಕೆ ಹೆಸರಿನಲ್ಲಿ ಪ್ರತಿ ಎಕರೆಗೆ 43 ಲಕ್ಷ ರೂ.ಗೆ ಹಂಚಿಕೆ ಮಾಡಿದಂತಾಗಿದೆ. ಕೆಐಎಡಿಬಿ ಭೂಮಿಯನ್ನು ಹಂಚಿಕೆಗೆ ನಿಗದಿಪಡಿಸಿರುವ ದರಕ್ಕೆ ಹೋಲಿಸಿದರೆ ಪ್ರತಿ ಎಕರೆಗೆ 1.18 ಕೋ.ರೂ. ಕಡಿಮೆ ಮೊತ್ತಕ್ಕೆ ಹಂಚಿಕೆ ಮಾಡಿದಂತಾಗಿದೆ. ಅದೇ ರೀತಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಪ್ರಸ್ತಾಪಿಸಿದ್ದ 116.16 ಎಕರೆ ಸಂಸ್ಥೆಗೆ ಅವಶ್ಯಕತೆ ಇದೆಯೇ ಅಥವಾ ಕಡಿಮೆಗೊಳಿಸಬಹುದೇ ಎಂಬ ಬಗ್ಗೆ ಮರು ಪರಿಶೀಲಿಸಬೇಕು. ಹಂಚಿಕೆಗೆ ನಿಗದಿಪಡಿಸಿದ್ದ ದರವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ನಷ್ಟವುಂಟಾಗುವುದಿಲ್ಲವೇ ಎಂದು ಆರ್ಥಿಕ ಇಲಾಖೆಯು ಪ್ರಶ್ನಿಸಿತ್ತು.‘ಕೆಐಎಡಿಬಿಗೆ ಯಾವುದೇ ಆರ್ಥಿಕ ನಷ್ಟವಾಗದಂತೆ ಹೈಟೆಕ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್’ ಈ ಹಂತ-2 ಹರಳೂರು ದೇವನಹಳ್ಳಿ ತಾಲೂಕಿನಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಬಲ್ಕ್ ಲ್ಯಾಂಡ್ ಆಗಿ ಹಂಚಿಕೆ ಮಾಡಬಹುದು’ ಎಂದು ಪ್ರಸ್ತಾಪಿಸಿತ್ತು.

ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಇದಕ್ಕೆ ಸಮರ್ಥನೀಯ ಕಾರಣಗಳನ್ನು ಒದಗಿಸಿರಲಿಲ್ಲ ಎಂಬುದು ಟಿಪ್ಪಣಿ ಮೂಲಕ ಗೊತ್ತಾಗಿದೆ’. ಸಿಇಎಸ್‌ಎಸ್ ಸಂಸ್ಥೆಯು ಒಂದು ಲಾಭರಹಿತ ಸಂಸ್ಥೆಯಾಗಿದ್ದು, ವಿವಿ ಸ್ಥಾಪನೆಗೆ ಕೆಐಎಡಿಬಿ ಭೂಮಿಯನ್ನು ಹಂಚಿಕೆ ವೆಚ್ಚ ದಲ್ಲಿ ಹಂಚಿಕೆ ಮಾಡಿದಲ್ಲಿ ವಿವಿ ಸ್ಥಾಪನೆಯು ಕಾರ್ಯ ಸಾಧ್ಯವಾಗುವುದಿಲ್ಲ’ ಎಂಬ ವಾದವನ್ನು ಮುಂದೊಡ್ಡಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಬಲ್ಕ್ ಲ್ಯಾಂಡ್ ಹೆಸರಿನಲ್ಲಿ ಪ್ರತಿ ಎಕರೆಗೆ ಕೇವಲ 43 ಲಕ್ಷ ರೂ.ಗೆ ಮಾರಾಟ ಮಾಡಿ ಮಂಡಳಿಗೆ ನಷ್ಟದ ಹೊರೆ ಹೊರಿಸಲಾಗಿದೆ.

ವಿಶೇಷವೆಂದರೆ ಇದೇ ಇಲಾಖೆಯು ಪ್ರತಿ ಎಕರೆಗೆ 1.61 ಕೋ.ರೂ.ಗೆ ಹಂಚಿಕೆ ಮಾಡಲು ಸಚಿವ ಸಂಪುಟದ ಅನುಮೋದನೆ ಕೋರಿತ್ತು. ಬಲ್ಕ್ ಲ್ಯಾಂಡ್ ಹೆಸರಿನಲ್ಲಿ ಒಟ್ಟಾರೆ 116.16 ಎಕರೆಯನ್ನು ಕೇವಲ 50 ಕೋ.ರೂ.ಗೆ ಹಂಚಿಕೆ ಮಾಡಲು ಸಂಪುಟ ನಿರ್ಧ ರಿಸಿದರೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ತಕರಾರು ಎತ್ತಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಇಲಾಖೆ ಟಿಪ್ಪಣಿ ಬದಿಗಿರಿಸಿದ ಸಂಪುಟ ‘ಹೈಟೆಕ್, ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್, ಹಂತ-2ರ ಕೈಗಾರಿಕೆ ಪ್ರದೇಶದ ಹರಳೂರು ಲೇಔಟ್ ಪಕ್ಕದಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಎನ್‌ಎಚ್ 207 (ಯಾವುದೇ ಮೂಲಸೌಕರ್ಯಗಳಿಲ್ಲದೆ)ನಿಂದ ಪ್ರತ್ಯೇಕ ರಸ್ತೆಯಿರುವ ಬಲ್ಕ್ ಲ್ಯಾಂಡ್‌ನ್ನು ಸ್ವಾಧೀನ ವೆಚ್ಚ, ಮಂಡಳಿಯ ಸೇವಾ ಶುಲ್ಕ ಮತ್ತು ಬಡ್ಡಿಯನ್ನೊಳಗೊಂಡಂತೆ ಪ್ರತಿ ಎಕರೆಗೆ 1.61 ಕೋ.ರೂ.ಗೆ ಹಂಚಿಕೆ ಮಾಡಲು’ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್ ಖತ್ರಿ ಸಂಪುಟದ ಅನುಮೋದನೆಗೆ ಮಂಡಿಸಿದ್ದರು ಎಂದು ತಿಳಿದು ಬಂದಿದೆ.

 ಸೆಂಟರ್ ಫಾರ್ ಎಜುಕೇಶನಲ್ ಆ್ಯಂಡ್ ಸೋಶಿ ಯಲ್ ಸ್ಟಡೀಸ್‌ಗೆ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಜಮೀನು ಮಂಜೂರು ಮಾಡುವ ಸಂಬಂಧ 2021ರ ಎಪ್ರಿಲ್ 26ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಮಂಡಿಸಿತ್ತು. ಇದಕ್ಕೆ ಅಂದಿನ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅನುಮೋದಿಸಿದ್ದರು.

ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದ ನಂತರ ‘ಹರಳೂರು ಲೇಔಟ್ ಪಕ್ಕದಲ್ಲಿ ಸುಮಾರು 116.16 ಎಕರೆ ಭೂಮಿಯನ್ನು ಎನ್‌ಎಚ್ 207 ನಿಂದ ಪ್ರತ್ಯೇಕ ರಸ್ತೆಯಿರುವ ಬಲ್ಕ್ ಲ್ಯಾಂಡ್‌ನ್ನು ಸ್ವಾಧೀನ ವೆಚ್ಚ, ಮಂಡಳಿಯ ಸೇವಾ ಶುಲ್ಕ ಮತ್ತು ಬಡ್ಡಿ ಸಹಿತ ಒಟ್ಟಾರೆಯಾಗಿ 50 ಕೋಟಿ ರೂ.ಗಳನ್ನು ವಿಧಿಸಿ ಮಂಜೂರು ಮಾಡಲು ಸಚಿವ ಸಂಪುಟವು ನಿರ್ಧ ರಿಸಿತು’ ಎಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟ ನಿರ್ಣಯದ ಪ್ರತಿಗೆ ಸಹಿ ಹಾಕಿರುವುದು ದಾಖಲೆಯಿಂದ ಗೊತ್ತಾಗಿದೆ.

ಸಂಪುಟವು ಅನುಮೋದಿಸಿದ ನಂತರ ಎರಡೇ ದಿನದಲ್ಲಿ ಅಂದರೆ 2021ರ ಎಪ್ರಿಲ್ 28ರಂದು ನಡವಳಿ ಯನ್ನು ದಾಖಲಿಸಿ ಆದೇಶವನ್ನೂ ಹೊರಡಿಸಿತ್ತು. ಆದೇಶ ಹೊರಬಿದ್ದ ಒಂದೇ ತಿಂಗಳ ಅಂತರದಲ್ಲಿ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು 2021ರ ಮೇ 5ರಂದು ಹಂಚಿಕೆ ಪತ್ರವನ್ನು ಸಂಸ್ಥೆಗೆ ನೀಡಿತ್ತು.

ಲೀಸ್ ಬದಲು ಕ್ರಯಪತ್ರ:

ಅಲ್ಲದೆ ಕೆಐಎಡಿಬಿ ಜಮೀನನ್ನು 99 ವರ್ಷಗಳ ಅವಧಿಗೆ ಲೀಸ್ ಆಧಾರದ ಮೇಲೆ ತೆಗೆದುಕೊಳ್ಳಲು ಸೆಂಟರ್ ಫಾರ್ ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸ್ಟಡೀಸ್ ಸಂಸ್ಥೆ ಆರಂಭದಲ್ಲಿ ಒಪ್ಪಿಗೆ ಸೂಚಿಸಿತ್ತು ಎಂದು ಅಂದಿನ ಸಿಎಂ ಯಡಿಯೂರಪ್ಪರ ಕಾರ್ಯದರ್ಶಿ ಯಾಗಿದ್ದ ಗಿರೀಶ್ ಹೊಸೂರ್ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದರು. ಬಳಿಕ ಇದನ್ನು ಸರಕಾರದ ಮುಖ್ಯ ಕಾರ್ಯದರ್ಶಿ ಗಮನಕ್ಕೂ ತರಲಾಗಿತ್ತು ಎನ್ನಲಾಗಿದೆ. ಆದರೆ ಇದೇ ಸಂಸ್ಥೆಯು 99 ವರ್ಷಗಳ ಲೀಸ್ ಕರಾರಿನ ಬದಲಾಗಿ ಶುದ್ಧ ಕ್ರಯಪತ್ರ ಮಾಡಿಕೊಡಲು 2021ರ ಜೂನ್ 10ರಂದು ಕೋರಿತ್ತು. ಈ ಮನವಿ ಪತ್ರದ ಮೇಲೆ ಪ್ರಸ್ತಾವವನ್ನು ಸಿಎಸ್ ಕಮಿಟಿ ಮುಂದೆ ಮಂಡಿಸಿ ಲೀಸ್ ಅವಧಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಯಡಿಯೂರಪ್ಪ ಸೂಚಿಸಿದ್ದರು ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020ರಂತೆ ಜಾಗತಿಕ ಗುಣ ಮಟ್ಟಗಳನ್ನು ಅನ್ವಯಿಸಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸ ಲಾಗುತ್ತಿದೆ ಎಂದು ಪ್ರಸ್ತಾವದಲ್ಲಿ ವಿವರಿಸಿದ್ದ ಸೆಂಟರ್ ಫಾರ್ ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸ್ಟಡೀಸ್ ಸಂಸ್ಥೆಯು ವಿವಿಯ ಮೂಲಸೌಲಭ್ಯ ಸೇರಿದಂತೆ ಒಟ್ಟಾರೆ 600 ಕೋ.ರೂ. ಹೂಡಿಕೆ ಮಾಡಲಿದೆ ಎಂದು ತಿಳಿಸಿತ್ತು.

ಜಾಗತಿಕ ಸಂಸ್ಥೆಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಉದ್ದೇಶ ಇರುವುದರಿಂದ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಿದರೆ ವಿವಿಯ ಈ ಎಲ್ಲ ಚಟುವಟಿಕೆ ಗಳಿಗೆ ತೊಡಕಾಗಲಿದೆ ಎಂದು ವಾದಿಸಿದ್ದ ಸಂಸ್ಥೆಯು ತಕ್ಷಣವೇ ಶುದ್ಧ ಕ್ರಯ (ಸೇಲ್ ಡೀಡ್) ಪತ್ರ ಮಾಡಿ ಕೊಡಬೇಕು ಎಂದು ಮತ್ತೊಂದು ಮನವಿ ಸಲ್ಲಿಸಿತ್ತು ಎಂಬ ವಿಚಾರ ಸಂಸ್ಥೆ ಕಾರ್ಯದರ್ಶಿ ನಾಗರಾಜ ರೆಡ್ಡಿ 2021ರ ಜೂ.14 ರಂದು ಸಲ್ಲಿಸಿದ್ದ ಮನವಿ ಪತ್ರದಿಂದ ತಿಳಿದು ಬಂದಿದೆ.

ರೈತರಿಂದ ಪ್ರತಿ ಎಕರೆಗೆ 1.5 ಕೋಟಿ ರೂ.ಗೆ ಈ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ ಈ ಜಮೀನನ್ನು 50 ಕೋಟಿಗೆ ಸೆಸ್ ಸಂಸ್ಥೆಗೆ ನೀಡಿ ದ್ದಾರೆ. ರೈತರಿಗೆ 175 ಕೋಟಿ ರೂ. ಪರಿಹಾರ ನೀಡಲಾ ಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದನ್ನು ಸ್ಮರಿಸಬಹುದು.

ಕರ್ನಾಟಕ ಜ್ಞಾನ ಆಯೋಗದ ಸದಸ್ಯರಾಗಿದ್ದ ಡಾ.ಎಂ.ಕೆ.ಶ್ರೀಧರ್ ಸೆಸ್ ಸಂಸ್ಥೆಗೆ ಅಧ್ಯಕ್ಷರಾಗಿದ್ದರೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ವಿಶೇಷ ಪ್ರತಿನಿಧಿ ಡಾ.ಟಿ.ವಿ.ರಾಜು ಉಪಾಧ್ಯಕ್ಷ ಮತ್ತು ನಾಗರಾಜರೆಡ್ಡಿ ಕಾರ್ಯದರ್ಶಿಯಾಗಿದ್ದಾರೆ. ಬೆಂಗಳೂರು ವಿವಿಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್.ಆರ್.ಕೇಶವ, ನಿಮಾನ್ಸ್‌ನ ಸಹ ಪ್ರಾಧ್ಯಾಪಕ ಡಾ.ಪಿ.ಎನ್.ರವೀಂದ್ರ, ಎಂ.ಎಸ್.ರಾಮಯ್ಯ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ಮಾನಸಾ ನಾಗಭೂಷಣ, ಬೆಂಗಳೂರು ವಿವಿ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಆರ್.ರಾಜೇಶ್, ನಿಮ್ಹಾನ್ಸ್‌ನ ಆಯುರ್ವೇದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕಿಶೋರ್ ಕುಮಾರ್. ಆರ್ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರಾಧ್ಯಾಪಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಹೊರರಾಜ್ಯದ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರು ಈ ಸಂಸ್ಥೆಯ ಸದಸ್ಯರಾಗಿದ್ದಾರೆ.

Writer - ಜಿ. ಮಹಾಂತೇಶ್

contributor

Editor - ಜಿ. ಮಹಾಂತೇಶ್

contributor

Similar News