ಕೆನಡಾ ಗಡಿಭಾಗದಲ್ಲಿ ಹೆಪ್ಪುಗಟ್ಟಿ ಮೃತಪಟ್ಟ ಭಾರತೀಯ ಕುಟುಂಬದ ಗುರುತು ಪತ್ತೆ

Update: 2022-01-28 15:59 GMT
photo:PTI

ಒಟ್ಟಾವ, ಜ.28: ಅಮೆರಿಕ-ಕೆನಡಾ ಗಡಿಭಾಗದ ಎಮರ್ಸನ್ ಬಳಿ ಕಳೆದ ವಾರ ಹಿಮಪಾತಕ್ಕೆ ಸಿಲುಕಿ ಹೆಪ್ಪುಗಟ್ಟಿ ಮೃತಪಟ್ಟ ಭಾರತೀಯ ಕುಟುಂಬದವರ ಗುರುತನ್ನು ಪತ್ತೆಹಚ್ಚಲಾಗಿದೆ ಎಂದು ಕೆನಡಾದ ಅಧಿಕಾರಿಗಳು ಹೇಳಿದ್ದಾರೆ.

ಮೃತಪಟ್ಟವರನ್ನು ಭಾರತೀಯರಾದ ಜಗದೀಶ್ ಕುಮಾರ್ ಪಟೇಲ್(39 ವರ್ಷ), ವೈಶಾಲಿ ಬೆನ್ ಪಟೇಲ್ (37 ವರ್ಷ), ವಿಹಾಂಗಿ ಪಟೇಲ್(11 ವರ್ಷ) ಮತ್ತು ಧಾರ್ಮಿಕ್ ಪಟೇಲ್(3 ವರ್ಷ) ಎಂದು ಗುರುತಿಸಲಾಗಿದೆ. ಗುಜರಾತ್ ನ ದಿಂಗುಚಾ ಗ್ರಾಮದ ಈ ಕುಟುಂಬ ಕೆನಡಾಕ್ಕೆ ವಲಸೆ ಹೋಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

2022ರ ಜನವರಿ 12ರಂದು ಪಟೇಲ್ ಕುಟುಂಬ ಕೆನಡಾದ ಟೊರಂಟೋಗೆ ಆಗಮಿಸಿದೆ. ಜನವರಿ 18ರಂದು ಎಮರ್ಸನ್‌ನತ್ತ  ತೆರಳಿರುವುದು ದೃಢಪಟ್ಟಿದೆ ಎಂದು ಕೆನಡಾದ ಪೊಲೀಸ್ ಇಲಾಖೆಯ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಈ ಪ್ರದೇಶದಲ್ಲಿ ಯಾವುದೇ ವಾಹನ ಪತ್ತೆಯಾಗಿಲ್ಲ. ಆದ್ದರಿಂದ ಇವರನ್ನು ವಾಹನದ ಮೂಲಕ ಗಡಿಭಾಗಕ್ಕೆ ತಲುಪಿಸಿದವರು ವಾಪಾಸು ತೆರಳಿದ್ದಾರೆ. ಬಳಿಕ ಈ ಕುಟುಂಬ ಗಡಿದಾಟಿ ಅಮೆರಿಕಕ್ಕೆ ತೆರಳುವ ಪ್ರಯತ್ನದಲ್ಲಿದ್ದಾಗ ತೀವ್ರ ಹಿಮಪಾತಕ್ಕೆ ಸಿಲುಕಿ ಹೆಪ್ಪುಗಟ್ಟಿ ಹೋಗಿರುವ ಸಾಧ್ಯತೆಯಿದೆ . ಇದೊಂದು ಮಾನವ ಕಳ್ಳಸಾಗಾಣಿಕೆಯ ಪ್ರಕರಣವಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News