×
Ad

ಕಾಂಗ್ರೆಸ್ ನಗರ ನಕ್ಸಲರ ಹಿಡಿತದಲ್ಲಿದೆ, ಅವರು ಅದರ ಚಿಂತನೆಗಳು, ಸಿದ್ಧಾಂತವನ್ನು ನಿಯಂತ್ರಿಸುತ್ತಿದ್ದಾರೆ: ಮೋದಿ

Update: 2022-02-08 22:25 IST

ಹೊಸದಿಲ್ಲಿ,ಫೆ.8: ಕಾಂಗ್ರೆಸ್ ವಿರುದ್ಧ ಮಂಗಳವಾರ ಇನ್ನೊಮ್ಮೆ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿಯವರು,ಅದು ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುತ್ತಿದೆ, ಭ್ರಷ್ಟಾಚಾರವನ್ನು ಉತ್ತೇಜಿಸುತ್ತಿದೆ, ಕುಟುಂಬವೊಂದರ ಹಿತಾಸಕ್ತಿಯನ್ನು ಎಲ್ಲರ ಮೇಲೆ ಹೇರುತ್ತಿದೆ ಮತ್ತು ವಾಕ್ ಸ್ವಾತಂತ್ರವನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಿದರು. 

ಕಾಂಗ್ರೆಸ್ ಪಕ್ಷವು ನಗರ ನಕ್ಸಲರ ಹಿಡಿತದಲ್ಲಿದೆ ಮತ್ತು ಅವರು ಅದರ ಚಿಂತನೆಗಳನ್ನು,ಸಿದ್ಧಾಂತಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದು ಕುಟುಕಿದರು.
ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗಳಿಗೆ ರಾಜ್ಯಸಭೆಯಲ್ಲಿ ಮೋದಿ ಉತ್ತರಿಸುತ್ತಿದ್ದ ಸಂದರ್ಭ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದರು. ಸೋಮವಾರ ಲೋಕಸಭೆಯಲ್ಲಿಯೂ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ದಾಳಿಯನ್ನು ನಡೆಸಿದ್ದರು.

ವಂಶಪಾರಂಪರ್ಯವನ್ನು ಹೊರತುಪಡಿಸಿ ಬೇರೆಯದನ್ನು ಕಾಂಗ್ರೆಸ್ ಎಂದೂ ಯೋಚಿಸಿರಲಿಲ್ಲ ಎನ್ನುವುದು ಅದು ಎದುರಿಸುತ್ತಿರುವ ಸಮಸ್ಯೆಯಾಗಿದೆ. ವಂಶ ರಾಜಕಾರಣದ ಪಕ್ಷಗಳು ಭಾರತದ ಪ್ರಜಾಪ್ರಭುತ್ವಕ್ಕೆ ಬಹು ದೊಡ್ಡ ಬೆದರಿಕೆಯಾಗಿವೆ. ಯಾವುದೇ ಪಕ್ಷದಲ್ಲಿ ಕುಟುಂಬವೊಂದು ಪರಮೋಚ್ಚವಾದರೆ ಪ್ರತಿಭೆಯು ಮೊದಲ ಬಲಿಪಶುವಾಗುತ್ತದೆ ಎಂದರು. ಕಾಂಗ್ರೆಸ್ ದೇಶದಲ್ಲಿಯ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿದೆ ಎಂದ ಮೋದಿ,ತನ್ನ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವಂತೆ ಮತ್ತು ಪಕ್ಷದೊಳಗೆ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಂತೆ ಅದಕ್ಕೆ ಸೂಚಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಹೆಸರಿಸದೆ ದೇಶದ ಒಕ್ಕೂಟ ಸ್ವರೂಪವನ್ನು ಮುಖ್ಯವಾಗಿಟ್ಟುಕೊಂಡು ಅವರು ಕಳೆದ ವಾರ ಲೋಕಸಭೆಯಲ್ಲಿ ಮಾಡಿದ್ದ ಭಾಷಣವನ್ನು ಪ್ರಸ್ತಾಪಿಸಿದ ಮೋದಿ, ಪ್ರಗತಿಯತ್ತ ದೇಶದ ಮುನ್ನಡೆಗೆ ಪ್ರತಿಪಕ್ಷವು ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅದು ದೇಶದ ಅಭಿವೃದ್ಧಿಗೆ ಅವಕಾಶ ನೀಡಿರಲಿಲ್ಲ. ಈಗ ಪ್ರತಿಪಕ್ಷದಲ್ಲಿದ್ದಾಗಲೂ ಅವರು ದೇಶದ ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಈಗ ಅವರು ದೇಶದ ಪರಿಕಲ್ಪನೆಯನ್ನೇ ಆಕ್ಷೇಪಿಸುತ್ತಿದ್ದಾರೆ. ದೇಶದ ಪರಿಕಲ್ಪನೆಯು ಅಸಾಂವಿಧಾನಿಕವಾಗಿದ್ದರೆ ನಿಮ್ಮ ಪಕ್ಷವು ಭಾರತೀಯ ನ್ಯಾಷನಲ್ ಕಾಂಗ್ರೆಸ್ ಎಂದೇಕೆ ಕರೆದುಕೊಂಡಿತ್ತು? ಅದನ್ನು ಫೆಡರೇಷನ್ ಆಫ್ ಕಾಂಗ್ರೆಸ್ ಗೆ ಬದಲಿಸಿ ಎಂದರು.

ಕಾಂಗ್ರೆಸ್ ಪಕ್ಷವು ಇರದಿದ್ದರೆ ದೇಶಕ್ಕೆ ಏನಾಗುತ್ತಿತ್ತು ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ,ದೇಶವು ಸ್ವಾತಂತ್ರ ಗಳಿಸಿದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂದು ಮಹಾತ್ಮಾ ಗಾಂಧಿಯವರೂ ಬಯಸಿದ್ದರು ಎಂದ ಮೋದಿ,ಕಾಂಗ್ರೆಸ್ ಪಕ್ಷವು ಇಲ್ಲದಿದ್ದರೆ ಪ್ರಜಾಪ್ರಭುತ್ವವು ವಂಶ ರಾಜಕಾರಣದಿಂದ ಮುಕ್ತವಾಗಿರುತ್ತಿತ್ತು. ತುರ್ತು ಪರಿಸ್ಥಿತಿಯ ಕಳಂಕ ಇರುತ್ತಿರಲಿಲ್ಲ. ದೇಶವು ದಶಕಗಳ ಭ್ರಷ್ಟಾಚಾರವನ್ನು ಎದುರಿಸಬೇಕಿರಲಿಲ್ಲ. ಜಾತೀಯತೆಯ ಕೆಡುಕುಗಳಿಂದ ಅದು ಮುಕ್ತವಾಗಿರುತ್ತಿತ್ತು. ಸಿಕ್ಖರ ನರಮೇಧ ನಡೆಯುತ್ತಿರಲಿಲ್ಲ. ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ತೊರೆಯುತ್ತಿರಲಿಲ್ಲ ಮತ್ತು ಪಂಜಾಬ್ ವರ್ಷಗಳ ಕಾಲ ಹೊತ್ತಿ ಉರಿಯುತ್ತಿರಲಿಲ್ಲ ಎಂದರು.

ಕಾಂಗ್ರೆಸ್ ಇಲ್ಲದಿದ್ದರೆ ಈ ದೇಶದ ಪುತ್ರಿಯರನ್ನು ತಂದೂರ್ನಲ್ಲಿ ಸುಡುತ್ತಿರಲಿಲ್ಲ ಮತ್ತು ವಸತಿ,ರಸ್ತೆಗಳು,ವಿದ್ಯುತ್,ನೀರು ಹಾಗೂ ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಗಾಗಿ ಜನರು ವರ್ಷಗಟ್ಟಲೆ ಕಾಯಬೇಕಿರಲಿಲ್ಲ ಎಂದೂ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News