7 ವರ್ಷಗಳ ಜೈಲು ಶಿಕ್ಷೆ ಅಮಾನತುಗೊಳಿಸಬೇಕೆಂಬ ಅನ್ಸಾಲ್ ಸಹೋದರರ ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2022-02-16 05:46 GMT

ಹೊಸದಿಲ್ಲಿ: 1997ರಲ್ಲಿ 59 ಜನರ ಸಾವಿಗೆ ಕಾರಣವಾದ ದಿಲ್ಲಿಯ ಉಪಹಾರ್ ಚಿತ್ರಮಂದಿರದಲ್ಲಿ ಸಂಭವಿಸಿದ ಅಗ್ನಿ ದುರಂತಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ತಿರುಚಿದ ಆರೋಪದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಹಾಗೂ  ಗೋಪಾಲ್ ಅನ್ಸಾಲ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಇಂದು ತಿರಸ್ಕರಿಸಿದೆ.

ವಿಚಾರಣಾ ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ  2.25-ಕೋಟಿ ರೂ. ದಂಡ ವಿಧಿಸಿದ ನಂತರ ನವೆಂಬರ್ 2021 ರಿಂದ ಸಹೋದರರು ಜೈಲಿನಲ್ಲಿದ್ದಾರೆ. ಈ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವರಿಗೆ ಇನ್ನೂ ಅವಕಾಶವಿದೆ.

1997 ರ ಉಪಹಾರ್ ಅಗ್ನಿ ದುರಂತ ಪ್ರಕರಣದಲ್ಲಿ ನಿರ್ಣಾಯಕ ಸಾಕ್ಷ್ಯವನ್ನು ತಿರುಚಿದ ಪ್ರಕರಣದಲ್ಲಿ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಹಾಗೂ  ಗೋಪಾಲ್ ಅನ್ಸಾಲ್ ಮತ್ತು ಅವರ ಇಬ್ಬರು ಉದ್ಯೋಗಿಗಳನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಅನ್ಸಾಲ್ ಸಹೋದರರ ಜೊತೆಗೆ ನ್ಯಾಯಾಲಯ  ಸಿಬ್ಬಂದಿ ದಿನೇಶ್ ಚಂದ್ ಶರ್ಮಾ ಹಾಗೂ ಇತರರಾದ ಪಿ.ಪಿ. ಬಾತ್ರಾ, ಹರ್ ಸ್ವರೂಪ್ ಪನ್ವಾರ್, ಅನೂಪ್ ಸಿಂಗ್ ಹಾಗೂ ಧರಂವೀರ್ ಮಲ್ಹೋತ್ರಾ ಅವರ ವಿರುದ್ಧ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.

1997 ರಲ್ಲಿ ಬಾಲಿವುಡ್ ಚಲನಚಿತ್ರ 'ಬಾರ್ಡರ್' ಪ್ರದರ್ಶನದ ವೇಳೆ ಚಿತ್ರಮಂದಿರದಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 59 ಮಂದಿ ಸಾವನ್ನಪ್ಪಿದ್ದು,100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News