ಬಿಜೆಪಿಗೆ ಮಣಿಯದ್ದಕ್ಕೆ ಲಾಲುಗೆ ಕಿರುಕುಳ ನೀಡಲಾಗುತ್ತಿದೆ:ಪ್ರಿಯಾಂಕಾ ಗಾಂಧಿ ಆರೋಪ
Update: 2022-02-18 17:50 GMT
ಹೊಸದಿಲ್ಲಿ,ಫೆ.18: ಮೇವು ಹಗರಣದಲ್ಲಿ ದೋಷನಿರ್ಣಯಕ್ಕೆ ಗುರಿಯಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಬೆಂಬಲವನ್ನು ವ್ಯಕ್ತಪಡಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು,ಪಕ್ಷದ ಎದುರು ಮಣಿಯದವರಿಗೆ ಕಿರುಕುಳ ನೀಡುವುದು ಬಿಜೆಪಿಯ ರಾಜಕೀಯದ ವೈಶಿಷ್ಟವಾಗಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿಯ ರಾಜಕೀಯದ ಬ್ರಾಂಡ್ನ ಎದುರು ಬಗ್ಗದವರು ಕಿರುಕುಳವನ್ನು ಎದುರಿಸಬೇಕಾಗುತ್ತದೆ ಎಂದು ಶುಕ್ರವಾರ ಟ್ವೀಟಿಸಿರುವ ಪ್ರಿಯಾಂಕಾ,ರಾಜಕೀಯದಲ್ಲಿ ರಾಜಿ ಮಾಡಿಕೊಳ್ಳದ ತನ್ನ ನಿಲುವಿಗಾಗಿ ಲಾಲು ಪ್ರಸಾದರಿಗೆ ಕಿರುಕುಳ ನೀಡಲಾಗುತ್ತಿದೆ. ಯಾದವ ಅವರಿಗೆ ಅಂತಿಮವಾಗಿ ನ್ಯಾಯ ದೊರೆಯುತ್ತದೆ ಎಂದು ತಾನು ಆಶಿಸಿದ್ದೇನೆ ಎಂದಿದ್ದಾರೆ.
ಮಂಗಳವಾರ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು ಡೋರಂಡ ಖಜಾನೆಯಿಂದ ವಂಚನೆಯಿಂದ ಹಣವನ್ನು ಹಿಂದೆಗೆದುಕೊಂಡಿದ್ದ ಪ್ರಕರಣದಲ್ಲಿ ಲಾಲು ಪ್ರಸಾದ ತಪ್ಪಿತಸ್ಥರೆಂದು ಘೋಷಿಸಿತ್ತು.