ರಶ್ಯಾ-ಉಕ್ರೇನ್ ಸಂಘರ್ಷ: ಪ್ರಧಾನಿ ಕಚೇರಿ ಹೆಸರಿನಲ್ಲಿ ಕರೆ ಮಾಡಿ ವಂಚನೆ!

Update: 2022-02-25 03:36 GMT

ಭೋಪಾಲ್: ಉಕ್ರೇನ್ ಮೇಲಿನ ರಶ್ಯಾ ದಾಳಿಯಿಂದಾಗಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‍ನಲ್ಲಿ ಅತಂತ್ರರಾಗಿರುವುದರಿಂದ ಪೋಷಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಈ ಪರಿಸ್ಥಿತಿಯನ್ನೂ ದುರುಪಯೋಗಪಡಿಸಿಕೊಂಡು ವಂಚಕರು ಇಂಥ ಪೋಷಕರನ್ನು ವಂಚಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು newindianexpress.com ವರದಿ ಮಾಡಿದೆ.

ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ತಮ್ಮ ಮಗಳನ್ನು ಸುರಕ್ಷಿತವಾಗಿ ಕರೆ ತರುವುದಾಗಿ ಭರವಸೆ ನೀಡಿ 42 ಸಾವಿರ ರೂಪಾಯಿ ವಂಚಿಸಿದ್ದಾಗಿ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಮಹಿಳಾ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ. ಕರೆ ಮಾಡಿದ ವ್ಯಕ್ತಿ ಪ್ರಧಾನಿ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ದೂರು ನೀಡಲಾಗಿದೆ.

ವಿದಿಶಾ ಜಿಲ್ಲಾ ಆಸ್ಪತ್ರೆಯ ರಕ್ತನಿಧಿಯಲ್ಲಿ ಲ್ಯಾಬ್ ಟೆಕ್ನೀಶಿಯನ್ ಆಗಿರುವ ವೈಶಾಲಿ ವಿಲ್ಸನ್ ಈ ಸಂಬಂಧ ದೂರು ನೀಡಿದ್ದಾರೆ. 42 ಸಾವಿರ ರೂಪಾಯಿಯನ್ನು ತಕ್ಷಣ ಬ್ಯಾಂಕ್ ಖಾತೆಗೆ ಜಮಾ ಮಾಡಿದರೆ, ತುರ್ತಾಗಿ ವಿಮಾನ ಟಿಕೆಟ್ ಕಾಯ್ದಿರಿಸಿ, ಫೆಬ್ರವರಿ 27ರಂದೇ ಸುರಕ್ಷಿತವಾಗಿ ಮಗಳನ್ನು ಕರೆ ತರುವುದಾಗಿ ವಂಚಕ ನಂಬಿಸಿದ್ದಾನೆ ಎನ್ನಲಾಗಿದೆ.

"ನಾವು ಪ್ರಾಮಾಣಿಕವಾಗಿ 42,000 ರೂಪಾಯಿಗಳನ್ನು ಬುಧವಾರ ಆತ ವಿವರ ನೀಡಿದ ಖಾತೆಗೆ ವರ್ಗಾಯಿಸಿದ್ದೇವೆ. ಆದರೆ ಮಗಳಿಗೆ ಉಕ್ರೇನಿಂದ ಭಾರತಕ್ಕೆ ಬರುವ ಯಾವ ವಿಮಾನ ಟಿಕೆಟ್ ಕೂಡಾ ಸಿಕ್ಕಿಲ್ಲ" ಎಂದು ವೈಶಾಲಿ ವಿವರಿಸಿದ್ದಾರೆ.

ಪದೇ ಪದೇ ಕರೆ ಮಾಡಿದ ಬಳಿಕ ವಂಚಕ 5000 ರೂಪಾಯಿ ಹಿಂದಿರುಗಿಸಿದ್ದು, ಇಡೀ ಮೊತ್ತವನ್ನು ವಾಪಾಸು ಕೊಡುವ ಭರವಸೆ ನೀಡಿದ್ದಾನೆ. ಆದರೆ ನಾವು ಆತನನ್ನು ನಂಬುವುದಿಲ್ಲ. ಆದ್ದರಿಂದ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ. ಮಹಿಳೆಗೆ ಕರೆ ಬಂದ ಸಂಖ್ಯೆಯನ್ನು ಟ್ರೂಕಾಲರ್ ಐಡಿಯಲ್ಲಿ ಪರಿಶೀಲಿಸಿದಾಗ, "ಸೆಂಟ್ರಲ್ ಗವರ್ನ್‍ಮೆಂಟ್ ಆಫ್ ಇಂಡಿಯಾ" ಮತ್ತು "ಪ್ರಿನ್ಸ್ ಜಿ ಪಿಎಂಓ ಸಿವಿಸಿ" ಎಂಬ ಮಾಹಿತಿ ಸಿಕ್ಕಿದೆ ಎಂದು ವರದಿಯಾಗಿದೆ.

ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿರುವ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ವಿದಿಶಾ ಸಿಟಿ ಕೋತ್ವಾಲಿ ಇನ್‍ಸ್ಪೆಕಟ್ಟರ್ ಅಶುತೋಷ್ ಸಿಂಗ್ ರಜಪೂತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News