ಪಿಎಂಸಿ ಬ್ಯಾಂಕ್ ಹಗರಣದಲ್ಲಿ ಬಿಜೆಪಿ ನಾಯಕ, ಆತನ ಪುತ್ರ ಶೀಘ್ರವೇ ಜೈಲಿಗೆ: ಸಂಜಯ್ ರಾವತ್
ಮುಂಬೈ: ಪಿಎಂಸಿ ಬ್ಯಾಂಕ್ ಹಗರಣದ ಆರೋಪಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡ ಕಿರಿತ್ ಸೋಮೈಯಾ ಅವರ ಪುತ್ರ ನೀಲ್ ಸೋಮೈಯಾ ಅವರನ್ನು ಬಂಧಿಸಿರುವ ಕುರಿತು ಉಲ್ಲೇಖಿಸಿರುವ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್, ತಂದೆ ಹಾಗೂ ಮಗನನ್ನು ಶೀಘ್ರದಲ್ಲೇ ಜೈಲಿಗಟ್ಟಲಾಗುವುದು ಎಂದು ಹೇಳಿದ್ದಾರೆ.
"ನನ್ನ ಮಾತುಗಳನ್ನು ಗುರುತು ಮಾಡಿ...ನಾನು ಪುನರಾವರ್ತಿಸುತ್ತೇನೆ: ಬಾಪ್ ಬೇಟಾ ಜೈಲ್ ಜಾಯೆಂಗೆ. ಅಪ್ಪ-ಮಗ ಹೊರತುಪಡಿಸಿ ಮೂವರು ಕೇಂದ್ರೀಯ ಏಜೆನ್ಸಿ ಅಧಿಕಾರಿಗಳು ಹಾಗೂ ಅವರ ವಸೂಲಿ ಏಜೆಂಟ್ಗಳು ಕೂಡ ಕಂಬಿಗಳ ಹಿಂದೆ ಹೋಗುತ್ತಾರೆ. ಮಹಾರಾಷ್ಟ್ರ ಜುಕೆಗಾ ನಹೀ !" ಎಂದು ಶಿವಸೇನೆ ನಾಯಕ ಹೇಳಿದರು.
ಸೋಮೈಯಾ ಅವರು ನೀರವ್ ಡೆವಲಪರ್ಸ್ನಲ್ಲಿ ರೂ. 260 ಕೋಟಿ ಹೂಡಿಕೆ ಮಾಡಿದ್ದಾರೆ ಹಾಗೂ ಅವರ ಮಗ ನೀಲ್ ಸೋಮೈಯಾ ಮತ್ತು ಅವರ ಪತ್ನಿ ಮೇಧಾ ಅವರು ಪಾಲ್ಘರ್ ಜಿಲ್ಲೆಯ ನಿಕಾನ್ ಗ್ರೀನ್ ವಿಲ್ಲೆ ಪ್ರಾಜೆಕ್ಟ್ನ ನಿರ್ದೇಶಕರಾಗಿದ್ದಾರೆಯೇ ಎಂದು ಕಳೆದ ವಾರ ರಾವತ್ ಪ್ರಶ್ನಿಸಿದ್ದರು.