ಬಿಜೆಪಿ ಗೆಲುವಿಗೆ ಇವಿಎಂ ಕಾರಣವೇ?

Update: 2022-03-12 03:09 GMT

 ಭಾಗ-1

ಹಿಂದೂ ರಾಷ್ಟ್ರದ ಹೆಸರಿನಲ್ಲಿ ಕಾರ್ಪೊರೇಟ್-ಬ್ರಾಹ್ಮಣ್ಯದ ಆಳ್ವಿಕೆಯನ್ನು ನೆಲೆಗೊಳಿಸಲೆಂದೇ ಅಧಿಕಾರಕ್ಕೆ ಬಂದಿರುವ ಆರೆಸ್ಸೆಸ್-ಬಿಜೆಪಿಗರು ಚುನಾವಣೆಯಲ್ಲಿ ಗೆಲ್ಲಲು ಮತ್ತು ಅಧಿಕಾರದಲ್ಲಿರಲು ಏನೂ ಬೇಕಾದರೂ ಮಾಡಬಲ್ಲರು ಎನ್ನುವುದು ನಿಜ. ಅವರು ಚುನಾವಣೆಯಲ್ಲಿ ಗೆಲ್ಲಲು ಇವಿಎಂ ಅಡ್ಡಿಯಾಗಿದ್ದರೆ ಅಥವಾ ಅದರ ದುರ್ಬಳಕೆಯ ಅಗತ್ಯವಿದ್ದರೆ ಅದನ್ನೂ ಮಾಡುತ್ತಾರೆ. ಅಥವಾ ಚುನಾವಣೆಯೇ ಒಂದು ಅಡ್ಡಿಯಾದರೆ ಇಂದಿರಾಗಾಂಧಿಯವರಿಗಿಂತಲೂ ದೀರ್ಘ ಕಾಲ ಚುನಾವಣೆಯನ್ನೇ ಬರ್ಖಾಸ್ತು ಮಾಡಬಲ್ಲರು. ಅಥವಾ ಹಿಂದೂ ರಾಷ್ಟ್ರ ಜಾರಿಗೆ ಸಂವಿಧಾನವೇ ಅಡ್ಡಿಯಾದರೆ ಅದನ್ನು ಬದಲಿಸಬಲ್ಲರು. ಈ ದಿಕ್ಕಿನಲ್ಲಿ ಅವರು ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಗಮನಿಸಿದವರಿಗೆ ಬಿಜೆಪಿ ಗೆಲುವಿಗೆ ಇವಿಎಂ ಕಾರಣವಿರಬಹುದೇ ಎಂಬ ಅನುಮಾನ ಬರುವುದು ತಪ್ಪೇನಲ್ಲ.

ಆದರೆ ಇಂದಿನ ವಾಸ್ತವವೆಂದರೆ ಸದ್ಯಕ್ಕಂತೂ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟ ಅಧಿಕಾರದಲ್ಲುಳಿ ಯಲು ಹಾಗೂ ತಮ್ಮ ಬ್ರಾಹ್ಮಣ್ಯ-ಕಾರ್ಪೊರೇಟ್ ಅಜೆಂಡಾವನ್ನು ಜಾರಿ ಮಾಡಲು ಚುನಾವಣೆಗಳಾಗಲೀ, ಇವಿಎಂ ಯಂತ್ರಗಳಗಲೀ, ಅಥವಾ ಸಂವಿಧಾನವಾಗಲೀ ಅಂಥಾ ದೊಡ್ಡ ಅಡೆತಡೆ ಉಂಟುಮಾಡುತ್ತಿಲ್ಲ. ಹೀಗಾಗಿಯೇ ಎರಡನೇ ಬಾರಿ ಮೋದಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ-ಆರೆಸ್ಸೆಸಿಗರು ಯಾರೂ ಸಂವಿಧಾನ ಬದಲಾವಣೆಯ ಮಾತುಗಳನ್ನೂ ಹೆಚ್ಚಾಗಿ ಆಡುತ್ತಿಲ್ಲ.

ಬಿಜೆಪಿಯ ಗೆಲುವಿಗೆ ಈಗ ಇವಿಎಂ ದುರ್ಬಳಕೆಯ ಅಗತ್ಯವಿದೆಯೇ?

 ಜೊತೆಗೆ ಕೋಮುವಾದಿ ಧ್ರುವೀಕರಣದ ದುಷ್ಟ ಯೋಜನೆಗಳು, ಸುಳ್ಳು ಸುದ್ದಿಗಳ ಕಾರ್ಖಾನೆಗಳು ಮತ್ತವರ ಸಾಕು ಮಾಧ್ಯಮಗಳು, ಕಾರ್ಪೊರೇಟ್ ಹಣಬಲ, ಆರೆಸ್ಸೆಸ್ ಸಂಘಟನಾ ಬಲದ ಜೊತೆಗೆ ಸದಾ ಸನ್ನದ್ಧವಾಗಿರುವ ಅವರ ಚುನಾವಣಾ ಯಂತ್ರಾಂಗಕ್ಕೆ ಯಾವ ವಿರೋಧ ಪಕ್ಷವೂ ಸಾಟಿಯಿಲ್ಲದಿರುವುದರಿಂದ ಸದ್ಯಕ್ಕಂತೂ ಅವರಿಗೆ ಇವಿಎಂ ಅನ್ನು ದುರ್ಬಳಕೆ ಮಾಡಿಕೊಳ್ಳುವ ತುರ್ತು ಕೂಡ ಎದುರಾಗಿಲ್ಲ. ಏಕೆಂದರೆ ವಿರೋಧ ಪಕ್ಷಗಳ ರಾಜಕೀಯ-ಸೈದ್ಧಾಂತಿಕ-ಸಂಘಟನಾತ್ಮಕ ದೌರ್ಬಲ್ಯವೇ ಬಿಜೆಪಿಗೆ ಜಯದ ಮೇಲೆ ಜಯವನ್ನು ತಟ್ಟೆಯಲ್ಲಿಟ್ಟುಕೊಡುತ್ತಿರುವಾಗ ಇವಿಎಂ ದುರ್ಬಕೆಯ ಅಗತ್ಯವೇ ಅವರಿಗೆ ಉಂಟಾಗಿಲ್ಲ.

ಅಷ್ಟು ಮಾತ್ರವಲ್ಲ. ಎಲ್ಲಿಯ ತನಕ ವಿರೋಧ ಪಕ್ಷಗಳು ತಮ್ಮ ನೈಜ ದೌರ್ಬಲ್ಯಗಳನ್ನು ತಿದ್ದಿಕೊಳ್ಳದೆ ಇವಿಎಂ ಅನ್ನು ದೂರುತ್ತಾ ಕೂರುತ್ತಾರೋ ಅಲ್ಲಿಯತನಕ ಅವರ ವಿಜಯಯಾತ್ರೆ ನಿರಾತಂಕವಾಗಿ ಮುಂದುವರಿಯುತ್ತದೆ. ಒಂದು ವೇಳೆ ಇವಿಎಂ ರದ್ದಾಗಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯೇ ಜಾರಿಗೆ ಬಂದರೂ ಅದರ ಅತ್ಯಧಿಕ ಲಾಭವಾಗುವುದು ತಳಮಟ್ಟದಲ್ಲಿ ಅತ್ಯಧಿಕ ಹಣಬಲ, ತೋಳ್ಬಲ ಹಾಗೂ ಅಧಿಕಾರಿ ವಲಯಗಳ ಮೇಲೆ ಅತ್ಯಧಿಕ ಸೈದ್ಧಾಂತಿಕ ಪ್ರಭಾವ ಹೊಂದಿರುವ ಬಿಜೆಪಿಗೇ ವಿನಾ ದುರ್ಬಲವಾದ ಪಕ್ಷಗಳಿಗಲ್ಲ.

ಹೀಗಾಗಿ ಬಿಜೆಪಿ ಗೆಲುವಿಗೆ ಇವಿಎಂ ಕಾರಣವೆಂಬ ವಾದಗಳು ವಿರೋಧ ಪಕ್ಷಗಳ ರಾಜಕೀಯ ವೈಫಲ್ಯವನ್ನು ಮುಚ್ಚಿಕೊಳ್ಳುವ ಕುಂಟುನೆಪಗಳಂತೆ ಕಾಣತೊಡಗುತ್ತದೆ. ಹಾಗೆ ನೋಡಿದರೆ ಪ್ರತಿಬಾರಿ ಚುನಾವಣೆಯಲ್ಲಿ ಸೋತಪಕ್ಷವು ಇವಿಎಂ ಅನ್ನು ದೂರುವುದನ್ನು ಪ್ರಾರಂಭಿಸಿದ್ದು 2009ರ ಚುನಾವಣೆಯಲ್ಲಿ ಸೋತ ಬಿಜೆಪಿ ಪಕ್ಷವೇ. ಆದರೆ ಯಾವ ಪಕ್ಷಗಳೂ ಸಹ ಇವಿಎಂ ತಾಂತ್ರಿಕತೆಯ ದುರ್ಬಳಕೆಯನ್ನು ಅನುಮಾನಕ್ಕೆಡೆಯಿಲ್ಲದಂತೆ ಸಾಬೀತು ಮಾಡುವ ಪ್ರಯತ್ನಕ್ಕೆ ಮಾತ್ರ ಚುನಾವಣೆಯ ಮುಂಚೆಯಾಗಲೀ, ಆ ನಂತರವಾಗಲೀ ಕೈಹಾಕುತ್ತಿಲ್ಲ. ಏಕೆಂದರೆ ಅದು ವಾಸ್ತವವಲ್ಲ.

ಈ ಚುನಾವಣೆಗಳ ಬಗ್ಗೆ ಹರಿದಾಡುತ್ತಿರುವ ಇವಿಎಂ ದುರ್ಬಳಕೆಯ ವೀಡಿಯೊಗಳಲ್ಲಿರುವುದೂ ಇವಿಎಂ ತಾಂತ್ರಿಕತೆಯ ದುರ್ಬಳಕೆಯಲ್ಲ. ಬದಲಿಗೆ ಬ್ಯಾಲೆಟ್ ಪೇಪರ್ ವೋಟಿಂಗ್ ಇದ್ದಾಗ ಹೇಗೆ ಒಬ್ಬರ ಬದಲಿಗೆ ಮತ್ತೊಬ್ಬರು ಓಟುಹಾಕುತ್ತಿರುವ ಅಥವಾ ಮೂಲ ಬ್ಯಾಲೆಟ್ ಪೇಪರ್‌ಗಳನ್ನು ನಕಲಿ ಪೇಪರ್‌ಗಳಿಂದ ಬದಲಾಯಿಸಿದ ರೀತಿಯಲ್ಲಿ ಅಸಲಿ ಇವಿಎಂ ಬದಲಿಗೆ ಬೇರೊಂದು ಯಂತ್ರವನ್ನು ಇಡಬಯಸುತ್ತಿದ್ದರೆಂಬ ಆಪಾದನೆಗಳು. ಇವು ಇವಿಎಂನ ತಾಂತ್ರಿಕ ವೋಟು ದಾಖಲು ಪದ್ಧತಿಗಳ ದುರ್ಬಳಕೆಗಳಲ್ಲ. ಅರ್ಥಾತ್ ಡಿಜಿಟಲ್ ರಿಗ್ಗಿಂಗ್ ಅಲ್ಲ. ಬದಲಿಗೆ ಗೂಂಡಾಗಿರಿಯ ರಿಗ್ಗಿಂಗ್ ಆಪಾದನೆಗಳು. ಆದರೆ ಅವುಗಳ ಸಂಖ್ಯೆ ಮತ್ತು ಘಟನೆಗಳು ಕೂಡಾ ಹಾಲಿ ಬಿಜೆಪಿ ಗೆಲುವಿನ ಪ್ರಮಾಣವನ್ನಾಗಲೀ ವ್ಯಾಪ್ತಿಯನ್ನಾಗಲೀ ಕಡಿಮೆ ಮಾಡುವಷ್ಟಾಗಿರಲಿಲ್ಲ. ಇದು ಫಲಿತಾಂಶ ಘೋಷಣೆಯ ನಂತರದ ಎಸ್ಪಿ-ಬಿಎಸ್ಪಿಯ ಪತ್ರಿಕಾಗೋಷ್ಠಿಗಳೇ ಹೇಳುತ್ತವೆ.

ಎಸ್ಪಿಯ ಅಖಿಲೇಶ್ ಅವರು ಎಕ್ಸಿಟ್ ಪೋಲ್ ನಂತರ ಇವಿಎಂ ಟ್ಯಾಂಪರಿಂಗ್ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ತಮ್ಮ ಆತಂಕ ವ್ಯಕ್ತಪಡಿಸಿದ್ದರು. ಹಾಗೆಯೇ ಅವರ ಕಾರ್ಕರ್ತರು ಒಂದು ಲಾರಿ ತುಂಬಾ ಇವಿಎಂ ಅಕ್ರಮ ಸಾಗಣೆಯನ್ನು ಹಿಡಿದು ದೂರಿತ್ತಿದ್ದರು. ಅವು ಚುನಾವಣೆಯಲ್ಲಿ ಳಸದ ಇವಿಎಂಗಳಾದರೂ ಅದನ್ನು ನಿಯಮಾವಳಿಯ ವಿರುದ್ಧವಾಗಿ ಸ್ಥಳಾಂತರ ಮಾಡುತ್ತಿದ್ದ ಬಗ್ಗೆ ಎಸ್ಪಿಯ ದೂರು ಸರಿಯಾಗಿತ್ತು. ಅದನ್ನು ಆಧರಿಸಿ ಸಂಬಂಧಪಟ್ಟ ಅಧಿಕಾರಿ ಅಮಾನತ್ತಾದ ಮೇಲೆ ಚುನಾವಣೆಯಲ್ಲಿ ಫಲಿತಾಂಶಗಳನ್ನೇ ತಿರುಚುವ ಮಟ್ಟಿಗೆ ಇವಿಎಂ ಟ್ಯಾಂಪರಿಂಗ್ ಆಗಿದೆ ಎಂದು ಅವರು ಕೂಡಾ ಈವರೆಗೆ ದೂರಿಲ್ಲ.

ಬಿಎಸ್ಪಿಯ ಅಧಿನಾಯಕಿ ಮಾಯಾವತಿವರು ಕೂಡಾ 2017ರಲ್ಲಿ ಚುನಾವಣೆಯಲ್ಲಿ ಸೋತ ನಂತರ ಇವಿಎಂ ಅನ್ನು ದೂರಿದ್ದರೂ ಆ ನಂತರ ಅದನ್ನು ದೊಡ್ಡ ವಿಷಯವನ್ನಾಗಿ ಮಾಡಿರಲಿಲ್ಲ. ಈ ಬಾರಿಯಂತೂ ಫಲಿತಾಂಶ ಘೋಷಣೆಯ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ತಮ್ಮ ವೈಲ್ಯಗಳಿಗೆ ಮಾಧ್ಯಮಗಳಲ್ಲಿನ ನಕಾರಾತ್ಮಕ ಪ್ರಚಾರಗಳನ್ನು ಪ್ರಧಾನವಾಗಿ ದೂರಿದರೆ ವಿನಾ ಇವಿಎಂ ಕಾರಣವೆಂದು ದೂರಲಿಲ್ಲ. ಬಿಎಸ್ಪಿಯ ವೈಪಲ್ಯಕ್ಕೆ ಮುಸ್ಲಿಮರು ತಮ್ಮ ಮೇಲೆ ವಿಶ್ವಾಸವಿಡದೆ ಎಸ್ಪಿಯನ್ನು ಅಪ್ಪಿಕೊಂಡು ತಪ್ಪು ಮಾಡಿದ್ದೇ ಕಾರಣವೆಂದೂ, ಆದ್ದರಿಂದ ಇನ್ನು ಮುಂದೆ ತಮ್ಮ ಕಾರ್ಯತಂತ್ರವನ್ನು ಬದಲಿಸಿಕೊಳ್ಳಲಾಗುವುದೆಂದು ಮಾಯಾವತಿ ಯವರು ಘೋಷಿಸಿದ್ದಾರೆಯೇ ವಿನಾ ಇವಿಎಂ ದುರ್ಬಳಕೆಯ ವಿರುದ್ಧ ಹೋರಾಡುವ ಮಾತಿರಲಿ ಅದರ ದುರ್ಬಳಕೆಯ ಬಗ್ಗೆ ಒಂದು ಮಾತೂ ಈ ಬಾರಿ ಆಡಿಲ್ಲ. ಹೀಗಾಗಿ ಈಗಲಾದರೂ ವಿರೋಧ ಪಕ್ಷಗಳು ತಮ್ಮ ವೈಫಲ್ಯವನ್ನು ಇವಿಎಂ ಮೇಲೆ ಸಾರಾ ಸಗಟಾಗಿ ಎತ್ತಿಹಾಕುವ ಬದಲಿಗೆ ರಾಜಕೀಯ-ಸೈದ್ಧಾಂತಿಕ-ಸಂಘಟನಾತ್ಮಕ ಕಾರಣಗಳನ್ನು ಹುಡುಕುವುದು ಒಳ್ಳೆಯದು. ಇಲ್ಲದಿದ್ದರೆ ಇವಿಎಂ ನೆಪಗಳು ಬಿಜೆಪಿಯನ್ನು ಮತ್ತು ಅದರ ದ್ವೇಷ ರಾಜಕಾರಣವನ್ನು ಮತ್ತಷ್ಟು ಗಟಿ್ಟಗೊಳಿಸಲು ಸಹಕರಿಸುತ್ತದೆ ಅಷ್ಟೆ.

ಇವಿಎಂನಲ್ಲಿ ಕೆಲವು ಭಾರತೀಯ ಸಮಸ್ಯೆಗಳಿವೆ

ಅದರ ಅರ್ಥ ಇವಿಎಂ ವ್ಯವಸ್ಥೆಯಲ್ಲಿ ಲೋಪಗಳಿಲ್ಲ ವೆಂದೇನೂ ಅಲ್ಲ. ಮನುಷ್ಯ ಕಂಡುಹಿಡಿಯುವ ಯಾವುದೇ ಯಂತ್ರ ಪರಿಪೂರ್ಣವೇನಲ್ಲ. ಸದ್ಯಕ್ಕೆ ಒಂದು ಯಂತ್ರ ಸಮಸ್ಯೆ ಕೊಡುತ್ತಿಲ್ಲ ಎಂದ ಮಾತ್ರಕ್ಕೆ ಅದು ಸಮಸ್ಯೆ ಮುಕ್ತವೆಂದೇನೂ ಅಲ್ಲ. ಇದು ಇಲೆಕ್ಟ್ರಾನಿಕ್ ವೋಟಿಂಗ್ ಮೆಶೀನ್ (ಇವಿಎಂ) ಗೂ ಅನ್ವಯಿಸುತ್ತದೆ.

 ಹಾಗೆ ನೋಡಿದರೆ 2019ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾರೆ 542 ಕ್ಷೇತ್ರಗಳಲ್ಲಿ 347 ಕ್ಷೇತ್ರಗಳ ಮತಗಳ ಎಣಿಕೆಯಲ್ಲಿ ಹಲವು ಲೋಪದೋಷಗಳಿದ್ದವು. ಒಟ್ಟಾರೆ ಚಲಾವಣೆಯಾದ ಮತಗಳಿಗಿಂತ ಇವಿಎಂ ಯಂತ್ರವು ಕೆಲವು ಕಡೆ ಹೆಚ್ಚು ಮತ್ತು ಕೆಲವು ಕಡೆ ಕಡಿಮೆ ಮತಗಳ ಎಣಿಕೆಯನ್ನು ತೋರಿಸಿತ್ತು. ಈ ವ್ಯತ್ಯಾಸ ಒಂದು ಮತದಿಂದ ಹಿಡಿದು ಒಂದು ಲಕ್ಷ ಮತದವರೆಗೂ ಇತ್ತು.

ಹಾಗೆಯೇ ಇವಿಎಂ ಮತಗಳ ಮತ್ತು ವಿವಿಪ್ಯಾಟ್ ಮತಗಳ ತಾಳೆಯನ್ನು ಮಾಡಿದ 26,000 ಕ್ಷೇತ್ರಗಳಲ್ಲಿ ನಾಲ್ಕು ಕಡೆ ತಾಳೆಯಾಗಿರಲಿಲ್ಲ.

 ಈ ಯಾವುದೇ ವ್ಯತ್ಯಾಸಗಳು 2019ರ ಚುನಾವಣಾ ಜಯಾಪಜಯಗಳ ಮೇಲೆ ಯಾವುದೇ ಪ್ರಭಾವ ಬೀರದಿದ್ದರೂ ಇವಿಎಂ ವ್ಯವಸ್ಥೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಇನ್ನೂ ಸುಧಾರಿಸಬೇಕಾದ ಅಗತ್ಯ ಇದೆಯೆಂಬುದನ್ನು ಮಾತ್ರ ಸಾರಿ ಹೇಳುತ್ತದೆ. ಆದರೆ ಸರಕಾರ ಮತ್ತು ಚುನಾವಣಾ ಆಯೋಗ ಈ ಅಗತ್ಯವನ್ನು ನಿರಾಕರಿಸುತ್ತಾ ಬಂದಿವೆ. ಅವು ಇವಿಎಂ ವ್ಯವಸ್ಥೆಯಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ಪ್ರತಿಪಾದಿಸುವಾಗ ಸಹಜವಾಗಿ ಇಡೀ ಇವಿಎಂ ವ್ಯವಸ್ಥೆಯಲ್ಲಿ ಆಡಳಿತರೂಢ ಪಕ್ಷಕ್ಕೆ ಒಂದು ಪಟ್ಟಭದ್ರ ಹಿತಾಸಕ್ತಿ ಇದೆ ಎಂಬ ಭಾವನೆ ಬಲಿಯುವುದು ಸಹಜ. ಅದಕ್ಕೆ ಸರಕಾರ ಮತ್ತು ಚುನಾವಣಾ ಆಗವೇ ಹೊಣೆಯಾಗಬೇಕಾಗುತ್ತದೆ.

ಒಂದು ಪ್ರಜಾತಂತ್ರದಲ್ಲಿ ಜನರ ನೈಜ ಆತಂಕಗಳು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಅಥವಾ ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತದೆ. ಇಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ (ಇವಿಎಂ)ಗಳ ಸುತ್ತ ಎದ್ದಿರುವ ಅನುಮಾನಗಳು ಭಾರತದ ಪ್ರಜಾತಂತ್ರಕ್ಕೆ ಅಂತಹ ಒಂದು ಅವಕಾಶವನ್ನು ಒದಗಿಸುತ್ತಿದೆ. ಆದರೆ ಈಗ ದೇಶದಲ್ಲಿ ಇವಿಎಂಗಳ ಬಗ್ಗೆ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮತ್ತು ಆ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಚರ್ಚೆಗಳನ್ನು ನೋಡಿದರೆ ಭಾರತವು ತನ್ನ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಪ್ರಜಾತಾಂತ್ರೀಕರಿಸಬಹುದಾದ ಅವಕಾಶಗಳನ್ನು ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತಿದೆ. ಈ ದುರದೃಷ್ಟಕರ ಬೆಳವಣಿಗೆಯ ಪ್ರಧಾನ ಮತ್ತು ಮೊದಲ ಹೊಣೆಗಾರಿಕೆಯನ್ನು ಹೊರಬೇಕಾದವರು ಸರ್ವಾಧಿಕಾರಿ ಧೋರಣೆಯ ಬಿಜೆಪಿ ಸರಕಾರ, ಪಕ್ಷಪಾತಿ ಚುನಾವಣಾ ಆಯೋಗ ಹಾಗೂ ಬೆನ್ನುಮೂಳೆ ಇಲ್ಲದ ಸುಪ್ರೀಂ ಕೋರ್ಟು. ಇದರ ಜೊತೆಗೆ ತಮ್ಮೆಲ್ಲಾ ರಾಜಕೀಯ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇವಿಎಂ ಬಗ್ಗೆ ಇರುವ ಸಹಜ ಅನುಮಾನಗಳನ್ನು ನೆಪವಾಗಿ ಬಳಸಿಕೊಳ್ಳುತ್ತಿರುವ ವಿರೋಧ ಪಕ್ಷಗಳ ಅವಕಾಶವಾದಿ ಸಂಕುಚಿತ ರಾಜಕೀಯಗಳಿಗೂ ಇದರಲ್ಲಿ ತನ್ನದೇ ಆದ ಪಾಲಿದೆ.

ಇವಿಎಂ-ರೌಡಿ ರಿಗ್ಗಿಂಗ್ ತಡೆಗಟ್ಟಿತು, ಡಿಜಿಟಲ್ ರಿಗ್ಗಿಂಗ್?

ಭಾರತದ ಚುನಾವಣೆಗಳಲ್ಲಿ 1998ರಲ್ಲಿ ಮೊತ್ತಮೊದಲ ಬಾರಿಗೆ ಇವಿಎಂಗಳನ್ನು ಪ್ರಯೋಗಾರ್ಥವಾಗಿ ಬಳಸಲಾಯಿತು. ನಂತರದಲ್ಲಿ ನಡೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಇವಿಎಂಗಳನ್ನು ಬಳಕೆಯನ್ನು ಹಂತಹಂತವಾಗಿ ಹೆಚ್ಚಿಸುತ್ತಾ 2007ರ ವೇಳೆಗೆ ಇವಿಎಂ ಬಳಕೆಯನ್ನು ಸಾರ್ವತ್ರೀಕರಿಸಲಾಯಿತು. ಈ ಮಧ್ಯೆ ಇವಿಎಂ ಬಳಕೆಯನ್ನು ಶಾಸನಬದ್ಧಗೊಳಿಸುವ ಕಾನೂನೊಂದನ್ನು ಸಹ ಸಂಸತ್ತಿನಲ್ಲಿ ಪಾಸು ಮಾಡಲಾಯಿತು.

ಇವಿಎಂ ಬಳಕೆಗೆ ಮುಂಚೆ ಭಾರತದಲ್ಲಿ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು. ಆಗ ಎಲ್ಲೆಡೆ ಅದರಲ್ಲೂ ವಿಶೇಷವಾಗಿ ಆಂಧ್ರ, ತೆಲಂಗಾಣ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಬೂತ್ ವಶಪಡಿಸಿಕೊಳ್ಳುವುದು ಮತ್ತು ನಕಲಿ ಮತಗಳನ್ನು ಹಾಕುವುದರ ಮೂಲಕ ರಿಗ್ಗಿಂಗ್ ಮಾಡುವುದು ಸಹಜ ವಿದ್ಯಮಾನವಾಗಿಬಿಟ್ಟಿತ್ತು. ಶೇಷನ್ ಅವರು ಚುನಾವಣ ಆಯುಕ್ತರಾಗಿದ್ದಾಗ ಬಿಹಾರದ ಎರಡು ಕ್ಷೇತ್ರಗಳಲ್ಲಿ ವ್ಯಾಪಕ ರಿಗ್ಗಿಂಗ್ ನಡೆದ ಕಾರಣಕ್ಕಾಗಿ ಆ ಚುನಾವಣೆಯನ್ನೇ ರದ್ದುಗೊಳಿಸಿದ್ದರು. ಹೀಗೆ ಆಗಿನ ಬ್ಯಾಲೆಟ್ ಪೇಪರ್ ಬಳಕೆಯ ಚುನಾವಣೆಯು ಭಾರತದ ಪ್ರಜಾತಂತ್ರದ ಅಣಕದಂತೆ ನಡೆಯುತ್ತಿತ್ತು. ಅದನ್ನು ತಡೆಗಟ್ಟುವ ಉದ್ದೇಶದಿಂದ ಇವಿಎಂ ಯಂತ್ರ ಬಳಕೆ ಪ್ರಾರಂವಾಯಿತು.

ಇಂದಿನ ಚುನಾವಣೆಗಳಲ್ಲಿ ಇವಿಎಂ ಅನ್ನು ಬಳಸುವ ಮೂಲಕ ಅಂತಹ ಎಲ್ಲಾ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವುದರಲ್ಲಿ ಯಶಸ್ವಿಯಾಗಿದ್ದೇವೆಯೇ?

ಇವಿಎಂ ಪರ ವಿರೋಧಿಗಳೆಲ್ಲರೂ ಇವಿಎಂ ಬಳಕೆಯಿಂದ ಬ್ಯಾಲೆಟ್ ಪೇಪರ್ ಚುನಾವಣಾ ಪದ್ಧತಿಯಲ್ಲಿದ್ದ ರಿಗ್ಗಿಂಗ್ ಮತ್ತು ಬೂತ್ ವಶದಂತಹ ಅಕ್ರಮಗಳು ನಿಂತಿವೆ ಎಂದು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಇವಿಎಂ ಯಂತ್ರದಲ್ಲಿ ಒಂದು ನಿಮಿಷಕ್ಕೆ ಕೇವಲ ಐದು ಮತಗಳನ್ನು ಮಾತ್ರ ಚಲಾಯಿಸಬಹುದಾಗಿದೆ. ಹೀಗಾಗಿ ಚುನಾವಣಾ ಪರಿಣಾಮಗಳನ್ನೇ ಬದಲಿಸುವಷ್ಟು ದೊಡ್ಡ ಮಟ್ಟದಲ್ಲಿ ರಿಗ್ಗಿಂಗ್ ಮಾಡಬೇಕೆಂದರೆ ಕೆಲವು ಗಂಟೆಗಳೇ ಬೇಕಾಗುತ್ತದೆ. ಅದು ಸಾಧ್ಯವಿಲ್ಲದ ಮಾತು. ಇದಲ್ಲದೆ ಇವಿಎಂ ಯಂತ್ರದಲ್ಲಿ ಕ್ಲೋಸ್ ಬಟನ್ ನೀಡಲಾಗಿದೆ. ಒಮ್ಮೆ ಚುನಾವಣಾಧಿಕಾರಿ ಕ್ಲೋಸ್ ಬಟನ್ ಒತ್ತಿದರೆ ಆ ಯಂತ್ರವು ವೋಟುಗಳನ್ನು ತೆಗೆದುಕೊಳ್ಳುವುದಿಲ್ಲ.

ಇದರ ಬಗ್ಗೆ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮತ್ತು ಬ್ರೂಕಿಂಗ್ ಇನ್‌ಸ್ಟಿಟ್ಯೂಟ್‌ನ ವಿದ್ವಾಂಸರು 2017ರಲ್ಲಿ ಒಂದು ಅಧ್ಯಯನ ನಡೆಸಿದ್ದಾರೆ. ಅದರಲ್ಲಿ ಅವರು 1997-2007ರ ನಡುವೆ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ಮತ್ತು ಇವಿಎಂ ಬಳಸಿ ನಡೆದ 135ಕ್ಕೂ ಹೆಚ್ಚು ಚುನಾವಣೆಗಳ ಅಧ್ಯಯನ ಮಾಡಿ ಇವಿಎಂ ಬಳಕೆಯಿಂದ ಆದ ಸತ್ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ. ಆ ವರದಿಯ ಪ್ರಕಾರ ಇವಿಎಂ ಬಳಕೆಯಾದ ಪ್ರದೇಶಗಳಲ್ಲಿ ರಿಗ್ಗಿಂಗ್ ನಿಂತಿದೆ. ಮೊದಲಿಗಿಂತ ವೋಟಿನ ಪ್ರಮಾಣ ತಗ್ಗಿದೆ. ಅರ್ಥಾತ್ ನಕಲಿ ಮತದಾರರ ಸಂಖ್ಯೆ ಕಡಿಮೆಯಾಗಿದೆ. ಚುನಾವಣಾ ಸಂಬಂಧೀ ಹಿಂಸಾಚಾರಗಳು ಇವಿಎಂ ವ್ಯವಸ್ಥೆಯಲ್ಲಿ ಕಡಿಮೆಯಾಗಿದೆ. ಮತ್ತು ಇವಿಎಂ ವ್ಯವಸ್ಥೆಯಲ್ಲಿ ಹೆಂಗಸರು, ದಲಿತರು ಮತ್ತು ವೃದ್ಧರು ಓಟು ಹಾಕುವ ಪ್ರಮಾಣ ಬ್ಯಾಲೆಟ್ ಪೇಪರ್ ಪದ್ಧತಿಗಿಂತ ಹೆಚ್ಚಾಗಿದೆ.

ಇದೆಲ್ಲವೂ ನಿಜವೇ. ಆ ವರದಿಯಲ್ಲಿ ಇರಬಹುದಾದ ಅಲ್ಪಸ್ವಲ್ಪಉತ್ಪ್ರೇಕ್ಷೆಗಳ ಬಗ್ಗೆ ತಕರಾರಿರಬಹುದಾದರೂ ಬ್ಯಾಲೆಟ್ ಪದ್ಧತಿಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಇವಿಎಂನಲ್ಲಿ ನಡೆಯುವುದಿಲ್ಲ ಎನು್ನವುದನ್ನು ನಿರಾಕರಿಸಲಾಗುವುದಿಲ್ಲ.

ಆದರೆ ವಿರೋಧ ಪಕ್ಷಗಳ ಮತ್ತು ಇವಿಎಂ ವ್ಯವಸ್ಥೆಯನ್ನು ವಿರೋಧಿಸುವವರ ಪ್ರಶ್ನೆ ಇರುವುದು ಇವಿಎಂ ವ್ಯವಸ್ಥೆಯಲ್ಲಿ ನಡೆಯಬಹುದಾದ ಸುಧಾರಿತ, ಆಮೂಲಾಗ್ರ ತಾಂತ್ರಿಕ ರಿಗ್ಗಿಂಗ್‌ನ ಸಾಧ್ಯತೆಗಳ ಬಗ್ಗೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News