ಸಮಾನ ಶ್ರೇಣಿ-ಸಮಾನ ಪಿಂಚಣಿ ನೀತಿ ನಿರ್ಧಾರವಾಗಿದ್ದು, ಸಾಂವಿಧಾನಿಕ ಸಿಂಧುತ್ವ ಹೊಂದಿದೆ: ಸುಪ್ರೀಂ ಕೋರ್ಟ್

Update: 2022-03-16 17:10 GMT

ಹೊಸದಿಲ್ಲಿ, ಮಾ.16: ಸಶಸ್ತ್ರ ಪಡೆಗಳಲ್ಲಿ ಸಮಾನ ಶ್ರೇಣಿ-ಸಮಾನ ಪಿಂಚಣಿ (ಒಆರ್ಒಪಿ)ಯು ಸರಕಾರದ ನೀತಿ ನಿರ್ಧಾರವಾಗಿದೆ ಮತ್ತು ಯಾವುದೇ ಸಾಂವಿಧಾನಿಕ ದೌರ್ಬಲ್ಯ ಹೊಂದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಬುಧವಾರ ಎತ್ತಿ ಹಿಡಿದಿದೆ. ಸರಕಾರದ ನೀತಿ ನಿರ್ಧಾರವು ನಿರಂಕುಶವಾಗಿಲ್ಲ ಮತ್ತು ಸರಕಾರದ ನೀತಿ ವಿಷಯಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಸೂರ್ಯಕಾಂತ ಮತ್ತು ವಿಕ್ರಮನಾಥ ಅವರ ಪೀಠವು ಹೇಳಿತು.

ವಿಷಯವು ನ್ಯಾಯಾಲಯದ ಮುಂದಿದ್ದರಿಂದ ಬಾಕಿಯುಳಿದಿರುವ ಒಆರ್ಒಪಿಯ ಮರುನಿಗದಿ ಪ್ರಕ್ರಿಯೆಯನ್ನು 2019,ಜು.1ರಿಂದ ಕೈಗೊಳ್ಳಬೇಕು ಮತ್ತು ಪಿಂಚಣಿದಾರರಿಗೆ ಮೂರು ತಿಂಗಳುಗಳಲ್ಲಿ ಬಾಕಿಗಳನ್ನು ಪಾವತಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ನಿರ್ದೇಶ ನೀಡಿತು.

ಐದು ವರ್ಷಗಳಿಗೆ ನಿಯತಕಾಲಿಕವಾಗಿ ಒಮ್ಮೆ ಪುನರ್ಪರಿಶೀಲಿಸುವ ಪ್ರಸಕ್ತ ನೀತಿಯ ಬದಲು ಭಗತ ಸಿಂಗ್ ಕೋಶಿಯಾರಿ ಸಮಿತಿಯು ಶಿಫಾರಸು ಮಾಡಿರುವಂತೆ ಸ್ವಯಂಚಾಲಿತ ವಾರ್ಷಿಕ ಪರಿಷ್ಕರಣೆಯೊಂದಿಗೆ ಒಆರ್ಒಪಿಯನ್ನು ಜಾರಿಗೊಳಿಸುವಂತೆ ಕೋರಿ ನಿವೃತ್ತ ಸೈನಿಕರ ಸಂಘವು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಲೇವಾರಿಗೊಳಿಸಿತು.
ತೀರ್ಪಿನ ಕಾರ್ಯಾಚರಣೆ ಭಾಗವನ್ನು ಪ್ರಕಟಿಸಿದ ನ್ಯಾ.ಚಂದ್ರಚೂಡ ಅವರು,ಖಚಿತವಾದ ವೃತ್ತಿಜೀವನ ಪ್ರಗತಿ ಮತ್ತು ಮಾರ್ಪಡಿಸಿದ ಖಚಿತ ವೃತ್ತಿಜೀವನ ಪ್ರಗತಿಯನ್ನು ಪರಿಗಣಿಸಿದಾಗ ಸಮಾನ ಶ್ರೇಣಿಯನ್ನು ಹೊಂದಿರುವ ಎಲ್ಲರೂ ಏಕರೂಪದ ವರ್ಗದಡಿ ಬರದಿರಬಹುದು. ಹೀಗಾಗಿ ಸಮಾನ ಶ್ರೇಣಿಯನ್ನು ಹೊಂದಿದವರಿಗೆ ಸಮಾನ ಪಿಂಚಣಿಯನ್ನು ನೀಡಬೇಕು ಎನ್ನುವುದಕ್ಕೆ ಕಾನೂನಿನ ಬೆಂಬಲವಿಲ್ಲ ಎಂದು ತಿಳಿಸಿದರು.

ಸುಮಾರು ನಾಲ್ಕು ದಿನಗಳ ಕಾಲ ಸುದೀರ್ಘ ವಾದವಿವಾದಗಳನ್ನು ಆಲಿಸಿದ ಬಳಿಕ ಫೆ.23ರಂದು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಭಾರತೀಯ ಮಾಜಿ ಯೋಧರ ಆಂದೋಲನ (ಐಎಸ್ಇಎಂ) ಒಆರ್ಒಪಿಯ ಸರಕಾರದ ಸೂತ್ರದ ವಿರುದ್ಧ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News