ನವಾಬ್ ಮಲಿಕ್ ಅವರ ಖಾತೆಗಳನ್ನು ತಾತ್ಕಾಲಿಕವಾಗಿ ಸಂಪುಟ ಸಹೋದ್ಯೋಗಿಗಳಿಗೆ ನೀಡಲು ಎನ್ ಸಿಪಿ ನಿರ್ಧಾರ
ಮುಂಬೈ: ಮಹಾರಾಷ್ಟ್ರದ ಸಚಿವ ನವಾಬ್ ಮಲಿಕ್ ಅವರ ಖಾತೆಗಳನ್ನು ತಾತ್ಕಾಲಿಕವಾಗಿ ಅವರ ಸಂಪುಟ ಸಹೋದ್ಯೋಗಿಗಳಿಗೆ ಮೂರ್ನಾಲ್ಕು ದಿನಗಳಲ್ಲಿ ಹಸ್ತಾಂತರಿಸುವುದಾಗಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿಪಿ) ಗುರುವಾರ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.
"ಅವರು ಮತ್ತೆ ಲಭ್ಯವಾಗುವವರೆಗೆ ನಾವು ಈ ಪರ್ಯಾಯ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ನಿರ್ಧರಿಸಿದ್ದೇವೆ" ಎಂದು ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವರೂ ಆಗಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.
ಮಲಿಕ್ ಅವರನ್ನು "ತಪ್ಪು ರೀತಿಯಲ್ಲಿ" ಬಂಧಿಸಿರುವುದರಿಂದ ರಾಜೀನಾಮೆ ನೀಡುವಂತೆ ಪಕ್ಷವು ಕೇಳುವುದಿಲ್ಲ ಎಂದು ಪಾಟೀಲ್ ಹೇಳಿದರು.
ದಾವೂದ್ ಇಬ್ರಾಹಿಂ ಹಾಗೂ ಆತನ ಸಹಾಯಕರನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಮಲಿಕ್ ಅವರನ್ನು ಫೆಬ್ರವರಿ 23 ರಂದು ಜಾರಿ ನಿರ್ದೇಶನಾಲಯವು(ಇಡಿ) ಬಂಧಿಸಿತ್ತು.ಮಲಿಕ್ ಅವರು ಮಾರ್ಚ್ 21ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮಲಿಕ್ ಅವರು ರಾಜ್ಯ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವಾಲಯಗಳ ಖಾತೆಗಳನ್ನು ಹೊಂದಿದ್ದಾರೆ. ಅವರು ಗೊಂಡಿಯಾ ಹಾಗೂ ಪರ್ಭಾನಿ ಜಿಲ್ಲೆಗಳ ಉಸ್ತುವಾರಿ ಸಚಿವರೂ ಆಗಿದ್ದಾರೆ.
ಪರ್ಭಾನಿ ಹಾಗೂ ಗೊಂಡಿಯ ಉಸ್ತುವಾರಿ ಸ್ಥಾನಗಳು ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಹಾಗೂ ನಗರಾಭಿವೃದ್ಧಿ ರಾಜ್ಯ ಸಚಿವ ಪ್ರಜಕ್ತ್ ತಾನ್ಪುರೆ ಅವರಿಗೆ ಹೋಗುತ್ತವೆ ಎಂದು ಪಾಟೀಲ್ ಗುರುವಾರ ಹೇಳಿದರು.