ಮಾ.28,29ರ ಮುಷ್ಕರ ಯಶಸ್ಸಿಗೆ ಕಾರ್ಮಿಕ ಸಂಘಟನೆಗಳ ಮನವಿ

Update: 2022-03-24 14:14 GMT

ಮಂಗಳೂರು, ಮಾ.24: ಬಂಡವಾಳಶಾಹಿಗಳ ಪರವಾದ ನಾಲ್ಕು ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ, ಬೆಲೆ ಏರಿಕೆಯ ನಿಯಂತ್ರಣಕ್ಕಾಗಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ, ರೈತ ವಿರೋಧಿ ಕಾರ್ಮಿಕ ವಿರೋಧಿ ಕಾನೂನುಗಳ ರದ್ಧತಿಗಾಗಿ, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ವಿರುದ್ಧ ಮತ್ತು 24 ಸಾವಿರ ರೂ. ಸಮಾನ ಕನಿಷ್ಠ ವೇತನಕ್ಕಾಗಿ ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಜೆಸಿಟಿಯು) ಕರೆಯಂತೆ 'ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ' ಎಂಬ ಘೋಷಣೆಯೊಂದಿಗೆ ಮಾ.28,29ರಂದು ನಡೆಯುವ ಅಖಿಲ ಭಾರತ ಸಾರ್ವತ್ರಿಕ ಮಹಾಮುಷ್ಕರವನ್ನು ಯಶಸ್ಸಿಗೊಳಿಸಬೇಕು ಎಂದು ಜೆಸಿಟಿಯು ಮಂಗಳೂರು ಘಟಕದ ಸಂಚಾಲಕ ಎಚ್.ವಿ. ರಾವ್ ಮನವಿ ಮಾಡಿದ್ದಾರೆ.

ಗುರುವಾರ ನಗರದ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಮೊದಲೆರಡು ಅಲೆಗಳ ಸಂದರ್ಭ ಕೇಂದ್ರ-ರಾಜ್ಯ ಸರಕಾರಗಳು ವಿಧಿಸಿದ ಲಾಕ್‌ಡೌನ್‌ಗಳು ದುಡಿಯುವ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದ್ದವು. ಎರಡು ಅಲೆಗಳ ಸಂದರ್ಭ ಎರಡೂ ಸರಕಾರಗಳು ನೀಡಿದ ಪರಿಹಾರ ಪ್ಯಾಕೇಜ್‌ಗಳು ಬಡ ಜನರ ಬದುಕಿಗೆ ಆಸರೆಯಾಗಲಿಲ್ಲ. ಬದಲಾಗಿ ಬಂಡವಾಳಶಾಹಿಗಳ ಜೇಬು ತುಂಬಿಸಿದ್ದವು. ಕೇಂದ್ರದ ಮೋದಿ ನೇತೃತ್ವದ ಸರಕಾರ ‘ನವ ಉದಾರೀಕರಣ ನೀತಿ’ಗಳನ್ನು ಅಕ್ರಮಣಕಾರಿಯಾಗಿ ಜಾರಿ ಮಾಡುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಐಸಿಡಿಎಸ್ ಯೋಜನೆ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹಣಕಾಸಿನ ಕಡಿತ ಮಾಡಲಾಗುತ್ತಿದೆ. ಇದರಿಂದ ನಿರುದ್ಯೋಗ, ಬಡತನ, ಹಸಿವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಎಚ್.ವಿ.ರಾವ್ ಆಪಾದಿಸಿದರು.

ಕೇಂದ್ರ ಸರಕಾರದ ಜನ ವಿರೋಧಿ ತೆರಿಗೆ ನೀತಿ, ದಿನ ಬಳಕೆಯ ಸರಕು ಮತ್ತು ಸೇವೆಗಳ ಮೇಲಿನ ಬಾರಿ ಪ್ರಮಾಣದ ಪರೋಕ್ಷ ಜಿಎಸ್‌ಟಿಯಂತಹ ಕ್ರಮಗಳಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಗತ್ಯ ವಸ್ತುಗಳ ಬೆಲೆಗಳು ನಿರಂತರ ಹೆಚ್ಚಳಗೊಳ್ಳುತ್ತಲೇ ಇವೆ. ಬಡಜನರ ಆರ್ಥಿಕ ಪುನಶ್ಚೇತನಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ತೆರಿಗೆ ಕಡಿತ ಮಾಡಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಬಡ ಕುಟುಂಬಕ್ಕೆ ಮಾಸಿಕ ರೂ. 7,500 ನೇರ ನಗದು ವರ್ಗಾವಣೆ, ಪ್ರತಿ ವ್ಯಕ್ತಿಗೂ ತಲಾ 10 ಕೆ.ಜಿ ಆಹಾರ ಧಾನ್ಯಗಳನ್ನು ನೀಡಬೇಕು ಎಂಬ ಬೇಡಿಕೆಗಳನ್ನು ಸರಕಾರಗಳು ಪರಿಗಣಿಸಲಿಲ್ಲ. ಕೇಂದ್ರ ಸರ್ಕಾರ ಕೋವಿಡ್ ಸಂದರ್ಭವನ್ನೇ ಉಪಯೋಗಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಯಾವುದೇ ಚರ್ಚೆಯಿಲ್ಲದೆ ಪಾರ್ಲಿಮೆಂಟ್‌ನಲ್ಲಿ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಹಾಗೂ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕಾರ್ಮಿಕ ವಿರೋಧಿಯಾಗಿ ರೂಪಿಸಿತ್ತು ಎಂದು ಹೇಳಿದರು.

ದೇಶಾದ್ಯಂತ ನಡೆಯುವ ಮುಷ್ಕರದ ಭಾಗವಾಗಿ ಮಾ.28ರಂದು ಎಲ್ಲಾ ತಾಲೂಕು/ವಲಯ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ. ಮಾ.29ರಂದು ಬೆಳಗ್ಗೆ 10ಕ್ಕೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ವಿವಿಧ ವಿಭಾಗದ ಕಾರ್ಮಿಕರ ಮೆರವಣಿಗೆ ಹೊರಟು ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಗುವುದು ಎಂದು ಎಚ್.ವಿ.ರಾವ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಸೀತಾರಾಮ ಬೇರಿಂಜ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಮೋಹನ್ ಕೆ.ಇ., ಪಣೀಂದ್ರ, ರಾಘವ ಕೆ., ಪುರುಷೋತ್ತಮ ಪೂಜಾರಿ, ಬಿ.ಎನ್. ದೇವಾಡಿಗ, ಸುರೇಶ್ ಹೆಗ್ಡೆ, ಕರುಣಾಕರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News