ಬ್ಯಾಂಕಿಂಗ್ ವಂಚನೆಯಲ್ಲಿ ಪ್ರತಿದಿನ 100 ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತಿರುವ ಭಾರತ: ಆರ್‌ಬಿಐ ವರದಿ

Update: 2022-03-29 12:35 GMT

ಹೊಸದಿಲ್ಲಿ,ಮಾ.29: ಭಾರತವು ಕಳೆದ ಏಳು ವರ್ಷಗಳಲ್ಲಿ ಬ್ಯಾಂಕ್ ವಂಚನೆ ಅಥವಾ ಹಗರಣಗಳಿಂದಾಗಿ ಪ್ರತಿದಿನ ಕನಿಷ್ಠ 100 ಕೋ.ರೂ.ಗಳನ್ನು ಕಳೆದುಕೊಂಡಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್ಬಿಐ) ಮಾಹಿತಿ ನೀಡಿದೆ. ಆದಾಗ್ಯೂ ವಂಚನೆಯ ಮೊತ್ತದಲ್ಲಿ ವರ್ಷದಿಂದ ವರ್ಷಕ್ಕೆ ಇಳಿಕೆ ಕಂಡು ಬಂದಿದೆ ಎಂದು ಅದು ತಿಳಿಸಿದೆ.

ದೇಶದ ಆರ್ಥಿಕ ರಾಜಧಾನಿಯನ್ನು ಹೊಂದಿರುವ ಮಹಾರಾಷ್ಟ್ರವು ವಂಚನೆಯಾಗಿರುವ ಒಟ್ಟು ಹಣದ ಶೇ.50ರೊಂದಿಗೆ ಅಗ್ರಸ್ಥಾನದಲ್ಲಿದೆ. ದಿಲ್ಲಿ,ತೆಲಂಗಾಣ,ಗುಜರಾತ್ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. ಈ ಐದು ರಾಜ್ಯಗಳಲ್ಲಿ ಒಟ್ಟು ಎರಡು ಲ.ಕೋ.ರೂ.ಗೂ ಅಧಿಕ ವಂಚನೆ ನಡೆದಿದ್ದು,ಇದು ಹಣಕಾಸು ವಂಚನೆಗಳಲ್ಲಿ ದೇಶವು ಕಳೆದುಕೊಂಡಿರುವ ಒಟ್ಟು ಮೊತ್ತದ ಶೇ.83ರಷ್ಟಿದೆ ಎಂದು ಆರ್ಬಿಐ ತನ್ನ ವರದಿಯಲ್ಲಿ ಹೇಳಿದೆ. 2015,ಎಪ್ರಿಲ್ ಮತ್ತು 2021,ಡಿಸೆಂಬರ್ 31ರ ನಡುವೆ ವಿವಿಧ ರಾಜ್ಯಗಳಲ್ಲಿ 2.5 ಲ.ಕೋ.ರೂ.ಗಳ ಬ್ಯಾಂಕಿಂಗ್ ವಂಚನೆಯನ್ನು ಪತ್ತೆ ಹಚ್ಚಲಾಗಿದೆ.

ಆದಾಗ್ಯೂ ವಿತ್ತ ಸಚಿವಾಲಯವು ತ್ವರಿತ ವರದಿಗಾಗಿ ಮತ್ತು ತಡೆಗಟ್ಟುವಿಕೆಗಾಗಿ ಕೈಗೊಳ್ಳಲಾಗಿರುವ ಕ್ರಮಗಳಿಂದಾಗಿ ವರ್ಷದಿಂದ ವರ್ಷಕ್ಕೆ ವಂಚನೆ ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಹೇಳಿದೆ.

ಆರ್ಬಿಐ ಬ್ಯಾಂಕಿಂಗ್ ವಂಚನೆಗಳನ್ನು ದುರುಪಯೋಗ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹ, ನಕಲಿ ಸಾಧನಗಳ ಮೂಲಕ ಮೋಸದಿಂದ ಹಣ ಹಿಂದೆಗೆತ, ಲೆಕ್ಕಪುಸ್ತಕಗಳಲ್ಲಿ ಹಸ್ತಕ್ಷೇಪ ಅಥವಾ ಕಾಲ್ಪನಿಕ ಖಾತೆಗಳು ಮತ್ತು ಆಸ್ತಿ ಪರಿವರ್ತನೆಯ ಮೂಲಕ, ಕಮಿಷನ್ಗಾಗಿ ಅನಧಿಕೃತ ಸಾಲ ಸೌಲಭ್ಯಗಳ ವಿಸ್ತರಣೆ ಸೇರಿದಂತೆ ಎಂಟು ವಿಭಾಗಗಳಡಿ ವರ್ಗೀಕರಿಸಿದೆ.
 
ತನ್ನ ಗ್ರಾಹಕರಲ್ಲಿ ಬ್ಯಾಂಕುಗಳನ್ನು ಒಳಗೊಂಡಿರುವ ನೇತ್ರಿಕಾ ಕನ್ಸಲ್ಟಿಂಗ್ ನ ಆಡಳಿತ ನಿರ್ದೇಶಕ ಸಂಜಯ ಕೌಶಿಕ್ ಅವರು, ಬ್ಯಾಂಕುಗಳು ಹೊರಗಿನಿಂದ ವಂಚನೆಗಳನ್ನು ತಡೆಯಲು ಹೆಚ್ಚಿನ ನಿಗಾ ವಹಿಸುತ್ತವೆ,ಆದರೆ ವಿಶೇಷವಾಗಿ ದೊಡ್ಡ ಮೊತ್ತದ ಸಾಲಗಳನ್ನು ಮಂಜೂರು ಮಾಡುವಾಗ ಬ್ಯಾಂಕುಗಳ ಒಳಗಿನವರನ್ನು ಹೆಚ್ಚು ಉತ್ತರದಾಯಿಗಳನ್ನಾಗಿಸಿದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. 

ಸಾಲಗಳು ಅಥವಾ ಮುಂಗಡಗಳನ್ನು ಸಹಭದ್ರತೆಯ ಆಧಾರವಿಲ್ಲದೆ ಒದಗಿಸಲಾಗುವುದರಿಂದ ಇಂತಹ ಹೆಚ್ಚಿನ ವಂಚನೆಗಳು ಸಂಭವಿಸುತ್ತವೆ. ಹೀಗಾಗಿ ಜವಾಬ್ದಾರಿಯನ್ನು ನಿಯೋಜಿಸುವ ಪ್ರಕ್ರಿಯೆಯನ್ನು ಬ್ಯಾಂಕುಗಳು ಹೊಂದಿರಬೇಕು ಮತ್ತು ಇಂತಹ ಸಾಲಗಳನ್ನು ಮಂಜೂರು ಮಾಡುವವರನ್ನು ಹೊಣೆಗಾರರನ್ನಾಗಿಸಬೇಕು ಎಂದರು.

ಬ್ಯಾಂಕುಗಳು ಭದ್ರತೆಯನ್ನು ಪಡೆದುಕೊಳ್ಳುವ ಪ್ರಕರಣಗಳಲ್ಲಿಯೂ ಅಪಾಯದ ಸೂಕ್ತ ಮೌಲ್ಯಮಾಪನವನ್ನು ನಡೆಸಲಾಗುವುದಿಲ್ಲ ಎಂದು ಎಂಎನ್ಸಿ ಬ್ಯಾಂಕೊಂದರ ಹಿರಿಯ ವ್ಯವಸ್ಥಾಪಕ ಬಿಕಾಶ ಗಂಗಾಧರನ್ ಹೇಳಿದರು.

ಹಣಕಾಸು ಅವ್ಯವಹಾರಗಳಲ್ಲಿ ತೊಡಗಿರುವವನ್ನು ದಂಡಿಸಲು ಮಾತ್ರವಲ್ಲ,ಈ ಪಿಡುಗನ್ನು ತಡೆಯಲೂ ಹಲವಾರು ಕ್ರಮಗಳನ್ನು ಕೈಗೊಂಡಿರುವುದರಿಂದ ವಂಚನೆಯ ಪ್ರಮಾಣ ಇಳಿಕೆಯಾಗುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ವೈ.ಸುದರ್ಶನ್ ಹೇಳಿದರು.

ಬ್ಯಾಂಕ್ ವಂಚನೆಗಳಿಂದ ಕಳೆದುಕೊಂಡ ಹಣದ ಮೊತ್ತವು 2015-16ರಲ್ಲಿ 67,760 ರೂ.ಗಳಿದ್ದುದು 2016-17ರಲ್ಲಿ 59,966.4 ಕೋ.ರೂ.ಗಳಿಗೆ ಇಳಿಕೆಯಾಗಿತ್ತು. ನಂತರದ ಎರಡು ವರ್ಷಗಳಲ್ಲಿ 45,000 ಕೋ.ರೂ.ಗೂ ಕಡಿಮೆ ಮೊತ್ತದ ವಂಚನೆಗಳು ವರದಿಯಾಗಿದ್ದವು. ವಂಚನೆಯ ಪ್ರಮಾಣ 2019-20ರಲ್ಲಿ 27,698.4 ಕೋ.ರೂ.ಗೆ ಮತ್ತು 2020-21ರಲ್ಲಿ 10,699.9 ಕೋ.ರೂ.ಗೆ ಇಳಿದಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳಲ್ಲಿ 647.9 ಕೋ.ರೂ.ಗಳ ವಂಚನೆಗಳು ನಡೆದಿವೆ ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News