ತ್ರಿಪುರಾ: ಜಾನುವಾರು ಕಳ್ಳನೆಂದು ಶಂಕಿಸಿ ಯುವಕನ ಥಳಿಸಿ ಹತ್ಯೆ

Update: 2022-03-29 16:25 GMT

ಅಗರ್ತಲಾ, ಮಾ. 29: ಜಾನುವಾರ ಕಳ್ಳನೆಂದು ಶಂಕಿಸಿ 26 ವರ್ಷದ ಯುವಕನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ತ್ರಿಪುರಾದ ಸೆಪಾಹಿಜಾಲ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನಮುರಾ ಉಪ ವಿಭಾಗದ ಜಾತ್ರಪುರ ಪೊಲೀಸ್ ಠಾಣೆ ಪ್ರದೇಶದ ತಾರಾಪುಕಾರ್ನ ನಿವಾಸಿಯಾಗಿರುವ ಲಿತಾನ್ ಮಿಯಾ ಅವರನ್ನು ಜಾನುವಾರ ಕಳ್ಳನೆಂಬ ಶಂಕೆಯಲ್ಲಿ ಹತ್ಯೆಗೈದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಬಾರಾಮುರಾದಲ್ಲಿ ಯುವಕನೋರ್ವನನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ ಎಂಬ ಮಾಹಿತಿಯನ್ನು ಇಂದು ಬೆಳಗ್ಗೆ ಸ್ವೀಕರಿಸಲಾಯಿತು. ನಾವು ಸ್ಥಳಕ್ಕೆ ಧಾವಿಸಿದಾಗ ಯುವಕರ ಗುಂಪಿನಿಂದ ಹಲ್ಲೆಗೀಡಾದ ಮಿಯಾ ಗಂಭೀರ ಗಾಯಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತನ ಸ್ಥಿತಿ ಗಂಭೀರವಾದುದರಿಂದ ಅಲ್ಲಿಂದ ಅಗರ್ತಲದ ಜಿಪಿಬಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು. 

ಅಗರ್ತಲದ ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗ ಆತ ಮಾರ್ಗ ಮಧ್ಯೆ ಮೃತಪಟ್ಟ’’ ಎಂದು ಜಾತ್ರಪುರ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ನಂದನ್ ದಾಸ್ ಹೇಳಿದ್ದಾರೆ. ಮೃತಪಟ್ಟ ಲಿತನ್ ಮಿಯಾ ಅವರ ತಂದೆ ಜಮಾಲ್ ಮಿಯಾ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೆಂತು ದೇಬನಾಥ್ ಹಾಗೂ ಅಮರ್ ಚಂದ್ರ ದಾಸ್ ಎಂಬಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News