ಬಿಹಾರ: ಸೇತುವೆ ಕಳ್ಳತನದ ಕುರಿತು ದೂರು ದಾಖಲಿಸಿದ್ದ ಸರಕಾರಿ ಅಧಿಕಾರಿಯ ಬಂಧನ

Update: 2022-04-11 16:02 GMT
Photo: Twitter/@ANI

ಪಾಟ್ನಾ,ಎ.11: ದೂರು ದಾಖಲಿಸಿದ್ದ ಸರಕಾರಿ ಅಧಿಕಾರಿಯನ್ನು ಪೊಲೀಸರು ರವಿವಾರ ಬಂಧಿಸುವ ಮೂಲಕ ಬಿಹಾರದಲ್ಲಿ ಸೇತುವೆಯನ್ನೇ ಕಳ್ಳತನ ಮಾಡಿದ್ದ ವಿಲಕ್ಷಣ ಪ್ರಕರಣ ಹೊಸ ತಿರುವು ಪಡೆದಿದೆ.

ರೋಹ್ತಾಸ್ ಜಿಲ್ಲೆಯ ಅಮಿಯಾವರ್ ಗ್ರಾಮದಲ್ಲಿಯ, ಬಳಕೆಯಲ್ಲಿಲ್ಲದಿದ್ದ 60 ಅಡಿ ಉದ್ದದ ಸೇತುವೆಯನ್ನು ಕಳವು ಮಾಡಿದ್ದಕ್ಕಾಗಿ ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಉಪ ವಿಭಾಗಾಧಿಕಾರಿ (ಎಸ್‌ಡಿಒ) ಸೇರಿದಂತೆ ಎಂಟು ಜನರನ್ನು ಬಂಧಿಸಿರುವ ಪೊಲೀಸರು,ಅವರ ಬಳಿಯಿಂದ ಜೆಸಿಬಿ,ಸುಮಾರು 247 ಕೆಜಿಯಷ್ಟು ಕಳವು ಮಾಡಲಾಗಿದ್ದ ಕಬ್ಬಿಣದ ಭಾಗಗಳು ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ.
ಸೇತುವೆ ಕಳ್ಳತನದಲ್ಲಿ ಎಸ್‌ಡಿಒ ಶಾಮೀಲಾಗಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ರಾಜ್ಯ ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಕಳ್ಳರ ತಂಡವೊಂದು ಹಾಡಹಗಲೇ ಅಮಿಯಾವರ್ ಗ್ರಾಮದಲ್ಲಿ ನೀರಾವರಿ ಕಾಲುವೆಗೆ ನಿರ್ಮಿಸಲಾಗಿದ್ದ 50 ವರ್ಷಗಳಷ್ಟು ಹಳೆಯ ಸೇತುವೆಯನ್ನು ಕಳಚಿ ಅದನ್ನು ಬಿಡಿಭಾಗಗಳನ್ನಾಗಿಸಿ ವಾಹನದಲ್ಲಿ ಸಾಗಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News