ಕಾಂಗ್ರೆಸ್ ಸೇರುವಂತೆ, ಸಲಹೆಗಾರರಾಗಿ ಕೆಲಸ ಮಾಡದಂತೆ ಪ್ರಶಾಂತ್ ಕಿಶೋರ್ ಗೆ ಹೇಳಿದ ಪಕ್ಷ

Update: 2022-04-16 11:18 GMT
ಪ್ರಶಾಂತ್ ಕಿಶೋರ್ (PTI)

ಹೊಸದಿಲ್ಲಿ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರಿಗೆ ಪಕ್ಷ ಸೇರಲು ಕಾಂಗ್ರೆಸ್ ಹೇಳಿದೆಯಲ್ಲದೆ ಅವರು ರಾಜಕೀಯ ಪಕ್ಷಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುವುದು ಬೇಡ ಎಂದು ಹೇಳಿದೆ ಎಂದು ಮೂಲಗಳು ತಿಳಿಸಿವೆ ಎಂದು ndtv.com ವರದಿ ಮಾಡಿದೆ.

ಪ್ರಶಾಂತ್ ಕಿಶೋರ್ ಕೂಡ ಕಾಂಗ್ರೆಸ್ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದು ಪಕ್ಷದ ದುರ್ಬಲತೆಗಳು ಹಾಗೂ ಅದನ್ನು ಬಲಪಡಿಸಲು ಏನು ಮಾಡಬೇಕು ಎಂಬ ಕುರಿತು ವಿಸ್ತೃತ ಪ್ರಸ್ತುತಿಯೊಂದನ್ನು ಪ್ರಶಾಂತ್ ಕಿಶೋರ್ ಮಂಡಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಶಾಂತ್ ಕಿಶೋರ್ ಅವರು ನೀಡಿದ ಸಲಹೆಗಳನ್ನು ಪರಿಶೀಲಿಸಲು ಹಾಗೂ ಅವುಗಳನ್ನು ಜಾರಿಗೊಳಿಸುವ ಕುರಿತು ಚಿಂತಿಸಲು ಒಂದು ಸಮಿತಿಯನ್ನು ರಚಿಸಲಾಗುವುದು ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ. ಪ್ರಶಾಂತ್ ಕಿಶೋರ್ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ನಂತರ  ವೇಣುಗೋಪಾಲ್ ಮೇಲಿನಂತೆ ಹೇಳಿದ್ದಾರೆ. ಸಭೆಯ ವೇಳೆ ವೇಣುಗೋಪಾಲ್ ಕೂಡ ಉಪಸ್ಥಿತರಿದ್ದರು.

ಕಳೆದ ವರ್ಷ ಕೂಡ  ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಕಿಶೋರ್ ನಡುವೆ ಮಾತುಕತೆಗಳು ನಡೆದಿದ್ದರೂ, ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶಗಳ ನಂತರ ಮಾತುಕತೆಗಳು ಮುರಿದು ಬಿದಿದ್ದವು. ನಂತರ ಕಾಂಗ್ರೆಸ್ ಪಕ್ಷವು ಪ್ರಶಾಂತ್ ಕಿಶೋರ್ ಅವರ ಮಾಜಿ ಸಹವರ್ತಿಯೊಬ್ಬರ ಸೇವೆಯನ್ನು ಪಡೆದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News