×
Ad

ಮಲ್ಪೆ ಸಮುದ್ರದಲ್ಲಿ 15 ದಿನಗಳಲ್ಲಿ 6 ಪ್ರವಾಸಿಗರ ಮೃತ್ಯು !

Update: 2022-04-18 22:59 IST

ಮಲ್ಪೆ : ಕರಾವಳಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿರುವ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಎಚ್ಚರ ತಪ್ಪಿದ ಪರಿಣಾಮವಾಗಿ ಕಳೆದ 15 ದಿನಗಳಲ್ಲಿ  ಒಟ್ಟು ಆರು ಮಂದಿ ಯುವಕರು ಸಮುದ್ರಪಾಲಾಗಿ ಸಾವನ್ನಪ್ಪಿದ್ದಾರೆ.

ಕೊರೋನ ಹಾಗೂ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ವರ್ಷಗಳ ಎಪ್ರಿಲ್ ರಜೆಯಲ್ಲಿ ಜನ ಪ್ರವಾಸಕ್ಕೆ ತೆರಳದೆ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಕೊರೋನ ಅಪಾಯ ಕಡಿಮೆ ಆಗಿರುವುದರಿಂದ ಈ ಬಾರಿ ಎಪ್ರಿಲ್ ರಜೆಯಲ್ಲಿ ಹೆಚ್ಚಿನ ಸಂಖ್ಯೆಯ ಜನ ಪ್ರವಾಸಕ್ಕೆ ಹೊರಟಿದ್ದಾರೆ.

ಅದರಲ್ಲೂ ರಾಜ್ಯದಲ್ಲೇ ಪ್ರಮುಖ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಸಾಕಷ್ಟು ಹೆಚ್ಚಳ ಕಂಡಿದೆ. ಇದರಲ್ಲಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳ ಪ್ರವಾಸಿಗರೇ ಅಧಿಕ.

ಜೀವ ಕಳಕೊಂಡ ಯುವಕರು!

ಎ.5ರಂದು ಮಲ್ಪೆ ಬೀಚ್‌ನ ಕುಲ್ಲುಗ ರೆಸಾರ್ಟ್‌ನ ಎದುರು ಸಮುದ್ರದಲ್ಲಿ ಈಜಾಡುತ್ತಿದ್ದ ಬೆಂಗಳೂರಿನ ಯುವಕ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಎ.7ರಂದು ಮಲ್ಪೆ ಬೀಚ್‌ಗೆ ಪ್ರವಾಸ ಬಂದಿದ್ದ ಕೇರಳದ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು, ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಿದ್ದರು. ಇವರಲ್ಲಿ ಬಂಡೆ ಮೇಲೆ ನಿಂತಿದ್ದ ಮೂವರು ವಿದ್ಯಾರ್ಥಿಗಳು ಸಮುದ್ರದ ದೊಡ್ಡ ಅಲೆಯಿಂದಾಗಿ ನೀರಿಗೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದರು.

ಈ ದುರಂತ ಮಾಸುವ ಮೊದಲೇ ಇದೀಗ ಎ.18ರಂದು ಮತ್ತೆ ಇಬ್ಬರು ವಿದ್ಯಾರ್ಥಿಗಳು ಸೈಂಟ್ ಮೇರಿಸ್ ದ್ವೀಪದ ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ. ಹೀಗೆ ಕಳೆದ 15 ದಿನಗಳಲ್ಲಿ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್‌ನಲ್ಲಿ ಒಟ್ಟು ಆರು ಮಂದಿ ಸಮುದ್ರದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ದ್ವೀಪದ ಪಶ್ಚಿಮದಲ್ಲಿ ನಿಷೇಧ

ವಾರದ ಹಿಂದೆ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಬಳಿಕ, ಬಹಳಷ್ಟು ಅಪಾಯಕಾರಿಯಾಗಿರುವ ಸೈಂಟ್ ಮೇರಿಸ್ ದ್ವೀಪದ ಪಶ್ಚಿಮ ದಿಕ್ಕಿನ ಸಮುದ್ರಕ್ಕೆ ಯಾರು ಇಳಿಯದಂತೆ 600 ಮೀಟರ್ ವ್ಯಾಪ್ತಿಯಲ್ಲಿ ಬೇಲಿ ಹಾಕಲಾಗಿದೆ. ಅದಕ್ಕೆ ಕೆಂಪು ಬಾವುಟಗಳನ್ನು ಆಳವಡಿಸಿ, ಆ ಭಾಗದಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಫಲಕ ಹಾಕಲಾಗಿದೆ.

ಕಳೆದ 15 ದಿನಗಳಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ ವಾಗಿದ್ದು, ಸರಸಾರಿ ಪ್ರತಿದಿನ ಒಂದು ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಅವರ ಸುರಕ್ಷತೆಯ ದೃಷ್ಠಿಯಿಂದ ದ್ವೀಪದಲ್ಲಿ ಮಲ್ಪೆ ಅಭಿವೃದ್ಧಿ ಸಮಿತಿಯಿಂದ  ಆರು ಮಂದಿ ಲೈಫ್ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಈಜುವವರಿಗೆ ಅಪಾಯವಲ್ಲದ ದ್ವೀಪದ ಪೂರ್ವ ಬದಿಯ ಸಮುದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ ಮಲ್ಪೆ ಬೀಚ್‌ನಲ್ಲಿ 300 ಮೀಟರ್ ವ್ಯಾಪ್ತಿಯಲ್ಲಿ ಸ್ವಿಮ್ಮಿಂಗ್ ಝೋನ್ ಮಾಡಲಾಗಿದೆ. ಪ್ರವಾಸಿಗರಿಗೆ ಅಲ್ಲಿ ಈಜಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಅವರ ಸುರಕ್ಷತೆಗಾಗಿ ಮಲ್ಪೆ ಬೀಚ್‌ನಲ್ಲಿ ಐದು ಮಂದಿ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಆದರೂ ಕೆಲವರು ತಮ್ಮ ವ್ಯಾಪ್ತಿಯನ್ನು ಮೀರಿ ಹೋಗುತ್ತಿದ್ದಾರೆ ಎನ್ನುತ್ತಾರೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ.

"ಮಲ್ಪೆ ಬೀಚ್ ಮತ್ತು ಸೈಂಟ್ ಮೇರಿಸ್ ದ್ವೀಪಗಳಲ್ಲಿ ಪ್ರವಾಸಿಗರ ಹಿತದೃಷ್ಠಿ ಯಿಂದ ಗರಿಷ್ಠ ಮಟ್ಟದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೂ ಕೆಲವು ಪ್ರವಾಸಿಗರು ನಮ್ಮ ಕಣ್ಣು ತಪ್ಪಿಸಿಕೊಂಡು ಹೋಗಿ ಬಲಿಯಾಗುತ್ತಿದ್ದಾರೆ. ಎರಡೂ ಕಡೆಗಳಲ್ಲು ನಾವು ಸೂಚಿಸಿದ ಜಾಗದಲ್ಲಿ ಮಾತ್ರ ಈಜಬೇಕು.  ಅದು ಬಿಟ್ಟು ಬೇರೆ ಕಡೆ ಹೋದರೆ ನಮ್ಮ ಲೈಫ್‌ಗಾರ್ಡ್‌ಗಳು ಎಚ್ಚರಿಕೆ ನೀಡುತ್ತಾರೆ".

-ಸುದೇಶ್ ಶೆಟ್ಟಿ, ಗುತ್ತಿಗೆದಾರ

"ಮಲ್ಪೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಹೊರ ರಾಜ್ಯ ಮತ್ತು ಜಿಲ್ಲೆಯವರಿಗೆ ಸಮುದ್ರದ ಅಪಾಯದ ಬಗ್ಗೆ ಜ್ಞಾನ ಇರುವುದಿಲ್ಲ. ಕಳೆದ ವಾರ ಸೈಂಟ್ ಮೇರಿಸ್ ದ್ವೀಪದಲ್ಲಿ ದುರಂತ ಸಂಭವಿಸಿದ ಬಳಿಕ ಪ್ರವಾಸಿಗರಿಗೆ ಅಪಾಯದ ಕುರಿತು ಮಾಹಿತಿ ಹಾಗೂ ಎಚ್ಚರಿಕೆ ನೀಡುವ ಕಾರ್ಯ ಮಾಡಲಾಗುತ್ತಿದೆ. ತುಂಬಾ ಅಪಾಯಕಾರಿ ಆಗಿರುವ ಪ್ರದೇಶದಲ್ಲಿ ನೀರಿಗೆ ಇಳಿಯುವುದನ್ನು ಸಂಪೂರ್ಣ ನಿಷೇಧ ಮಾಡುವ ಕುರಿತು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು".
-ಕೂರ್ಮಾರಾವ್, ಜಿಲ್ಲಾಧಿಕಾರಿ,
ಅಧ್ಯಕ್ಷರು, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ

"ಮುಂದಿನ ಮೂರು ತಿಂಗಳಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಬೇರೆ ಬೇರೆ ರಾಜ್ಯ ಜಿಲ್ಲೆಗಳಿಂದ ಮಲ್ಪೆಗೆ ಆಗಮಿಸಲಿದ್ದಾರೆ. ಇಲ್ಲಿನ ಬೀಚ್‌ನ್ನು ಅಭಿವೃದ್ಧಿ ಸಮಿತಿ ಗುತ್ತಿಗೆ ಆಧಾರದಲ್ಲಿ ವಹಿಸಿಕೊಡಲಾಗಿದೆ. ಆದುದರಿಂದ ಗುತ್ತಿಗೆದಾರರು ಪ್ರವಾಸಿಗರ ದೃಷ್ಠಿಯಿಂದ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದು ಕೊಳ್ಳಬೇಕು. ಪಾಲನೆ ಮಾಡಬೇಕಾಗಿದೆ. ಈಗಾಗಲೇ ಹಲವು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ? ಆದುದರಿಂದ ಸಂಬಂಧ ಅಧಿಕಾರಿಗಳು ಬೀಚ್‌ನಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು".
-ರಮೇಶ್ ಕಾಂಚನ್, ವಿಪಕ್ಷ ನಾಯಕ, ನಗರಸಭೆ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News