ಉಡುಪಿ; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

Update: 2022-04-19 16:14 GMT
ನೀಲಗಾಮ

ಉಡುಪಿ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಸಾರ್ವಜನಿಕವಾಗಿ ಲೈಂಗಿಕ ಕಿರುಕುಳ ನೀಡಿದ ಯುವಕನೋರ್ವನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಎ.19ರಂದು ಮಧ್ಯಾಹ್ನ ನಗರದ ಅಜ್ಜರಕಾಡು ಎಂಬಲ್ಲಿ ನಡೆದಿದೆ.

ಅಂಬಲಪಾಡಿಯ ನಿವಾಸಿ ನೀಲಗಾಮ (26) ಬಂಧಿತ ಆರೋಪಿ. ಅಜ್ಜರ ಕಾಡು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ಮುಗಿಸಿ ಮನೆಗೆ ಹೋಗಲು ಅಜ್ಜರಕಾಡು ಎಲ್‌ಐಸಿ ಎದುರು ಬಸ್ಸಿಗೆ ಕಾಯುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಆಗಮಿಸಿದ ನೀಲಗಾಮ, ಏಕಾಏಕಿ ವಿದ್ಯಾರ್ಥಿನಿಯ ಮೈಮೇಲೆ ಎರಗಿ ಲೈಂಗಿಕ ಕಿರುಕುಳ ನೀಡಿದ ಎನ್ನಲಾಗಿದೆ.

ಇದನ್ನು ಗಮನಿಸಿದ ಸಾರ್ವಜನಿಕರು, ಆತನನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ನೀಲಗಾಮನನ್ನು ವಶಕ್ಕೆ ಪಡೆದು ಬಂಧಿಸಿದರು. ಈ ವೇಳೆ ವಿದ್ಯಾರ್ಥಿನಿ ಬಸ್ ಹತ್ತಿಕೊಂಡು ಮನೆಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಆದುದರಿಂದ ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ಜಯಂತ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ರಾತ್ರಿ ವೇಳೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News