ಅಸ್ಸಾಂ: ಗುಂಡಿನ ಚಕಮಕಿ; ಇಬ್ಬರು ಶಂಕಿತ ಜಾನುವಾರು ಕಳ್ಳ ಸಾಗಾಟಗಾರರು ಸಾವು
ದಿಸ್ಪುರ್, ಎ. 19: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಶಂಕಿತ ಜಾನುವಾರು ಕಳ್ಳ ಸಾಗಾಟಗಾರರು ಸಾವನ್ನಪ್ಪಿದ್ದಾರೆ. ನಾಲ್ವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ.
ಮೃತಪಟ್ಟ ಶಂಕಿತ ಜಾನುವಾರು ಕಳ್ಳ ಸಾಗಾಟಗಾರರನ್ನು ಅಕ್ಬರ್ ಬಂಜಾರ ಹಾಗೂ ಸಲ್ಮಾನ್ ಬಂಜಾರ ಎಂದು ಗುರುತಿಸಲಾಗಿದೆ. ಇಬ್ಬರೂ ಉತ್ತರಪ್ರದೇಶದ ಮೀರತ್ ನಗರದ ನಿವಾಸಿಗಳು ಎಂದು ವರದಿಯಾಗಿದೆ.
ಅಕ್ಬರ್ ಬಂಜಾರ ಹಾಗೂ ಸಲ್ಮಾನ್ ಬಂಜಾರ ಅಂತಾರಾಷ್ಟ್ರೀಯ ಕಳ್ಳ ಸಾಗಾಟ ದಂಧೆ ನಡೆಸುತ್ತಿದ್ದರು. ಅವರ ಬಂಧನಕ್ಕೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಇವರಿಬ್ಬರನ್ನು ಕಳೆದ ವಾರ ಮೀರತ್ ಪೊಲೀಸರು ಬಂಧಿಸಿದ್ದರು. ಅನಂತರ ಅಸ್ಸಾಂನ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಕಳ್ಳಸಾಗಾಟ ಮಾರ್ಗವನ್ನು ಗುರುತಿಸಲು ಈ ಇಬ್ಬರನ್ನು ಕೊಕ್ರಝಾರ್ನ ಜಾಮ್ದುವಾರ್ ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ ಕರೆದುಕೊಂಡ ಹೋದ ಸಂದರ್ಭ ಪೊಲೀಸರ ತಂಡದ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭ ಪೊಲೀಸರು ಕೂಡ ಪ್ರತಿ ದಾಳಿ ನಡೆಸಿದರು ಎಂದು ಅಸ್ಸಾಂ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಜಾನುವಾರು ಕಳ್ಳ ಸಾಗಾಟಗಾರರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.