ಮಲೇರಿಯಾದ ಮೂಲ ಬಡತನ, ಅನಕ್ಷರತೆ!
ಮಕ್ಕಳಲ್ಲಿ ತೀವ್ರ ಮಲೇರಿಯಾ ಬಂದಲ್ಲಿ, ಅರಿವಿನ ಶಕ್ತಿ ಕುಂಟಿತಗೊಳ್ಳಬಹುದು. ಮೆದುಳಿನ ಮಲೇರಿಯಾ ಜ್ವರದಿಂದ ನರ ಮಂಡಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಅಪಸ್ಮಾರ ಮತ್ತು ಅಕ್ಷಿಪಟಲ ಬಿಳಿಯಾಗುವುದು ಮೆದುಳಿನ ಜ್ವರದ ಸಂಕೇತವಾಗಿರುತ್ತದೆ. ತೀವ್ರತರ ಮಲೇರಿಯಾ ಫಾಲ್ಸಿಫೆರಂ ಪ್ರಭೇದಗಳಲ್ಲಿ ಕಾಣಸಿಗುತ್ತದೆ.
ಪ್ರತಿ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ ‘ವಿಶ್ವ ಮಲೇರಿಯಾ’ ದಿನ ಎಂದು ಆಚರಿಸಲಾಗುತ್ತಿದೆ.ಮಲೇರಿಯಾ ರೋಗ ದಿಂದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ವರ್ಷವೊಂದರಲ್ಲಿ ಈ ರೋಗಕ್ಕೆ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವತೆತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ 2007ರ ಮೇನಲ್ಲಿ ಜರುಗಿದಾಗ ಈ ‘ವಿಶ್ವ ಮಲೇರಿಯಾ’ ದಿನ ಆಚರಣೆಯನ್ನು ಪ್ರತಿ ವರ್ಷ ಎಪ್ರಿಲ್ 25ರಿಂದ ಜಾರಿಗೆ ತರಲಾಯಿತು. ಅದಕ್ಕೂ ಮೊದಲು 2001 ರಿಂದ ಪ್ರತಿವರ್ಷ ಎಪ್ರಿಲ್ 25ರಂದು ‘ಆಫ್ರಿಕಾ ಮಲೇರಿಯಾ ದಿನ’ ಆಚರಿಸಲಾಗುತ್ತಿತ್ತು. 2013 ರಲ್ಲಿ 198 ಮಿಲಿಯನ್ ರೋಗಿಗಳು ಮತ್ತು 5,84,000 ಸಾವು ಮಲೇರಿಯಾದಿಂದ ಸಂಭವಿಸಿತ್ತು. 2014ರಲ್ಲಿ 97 ದೇಶಗಳಲ್ಲಿ ಮಲೇರಿಯಾ ಕಂಡು ಬಂದಿತ್ತು. 2011 ರಿಂದ 2014ರವರೆಗೆ ‘ಭವಿಷ್ಯದಲ್ಲಿ ಹೂಡಿಕೆ ಮಾಡಿ, ಮಲೇರಿಯಾವನ್ನು ಸೋಲಿಸಿ’ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ವಿರುದ್ಧ ವಿಶ್ವ ಸಂಸ್ಥೆ ಆಂದೋಲನ ಆರಂಭಿಸಿತು. ಇದರ ಪರಿಣಾಮವಾಗಿ 2014-15ರಲ್ಲಿ ಮಲೇರಿಯಾ ರೋಗದ ಪ್ರಮಾಣ ಬಹಳಷ್ಟು ಇಳಿಕೆ ಕಂಡಿದೆ.
2018ರ ಧ್ಯೇಯ ವಾಕ್ಯ ‘ಮಲೇರಿಯಾವನ್ನು ಸೋಲಿಸಲು ಸನ್ನದ್ಧರಾಗಿ, ಮನುಕುಲವನ್ನು ಗೆಲ್ಲಿಸಿ’ ಎಂದಾಗಿತ್ತು. 2019 ರಲ್ಲಿ ‘ಮಲೇರಿಯಾ ನಿರ್ನಾಮ ನನ್ನಿಂದಲೇ ಆರಂಭ’ ಎಂಬ ಹೊಸ ಘೋಷವಾಕ್ಯದೊಂದಿಗೆ ಆಚರಿಸಲಾಗಿತ್ತು. 2021 ರ ಮಲೇರಿಯಾ ದಿನಾಚರಣೆಯ ಧ್ಯೇಯ ವಾಕ್ಯ ‘ಝೀರೊ ಮಲೇರಿಯಾ ನನ್ನಿಂದಲೇ ಆರಂಭ’. ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಶ್ಯ ಖಂಡಗಳ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮಲೇರಿಯಾ, ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಮನುಕುಲದ ಬಹುದೊಡ್ಡ ಶತ್ರು ಎಂದರೂ ತಪ್ಪಲ್ಲ. ಬೆಳೆಯುತ್ತಿರುವ ರಾಷ್ಟ್ರದ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಮಲೇರಿಯಾ, ಮೂಲಭೂತ ಸೌಕರ್ಯದ ಕೊರತೆ, ಬಡತನ, ಅನಕ್ಷರತೆ ಇತ್ಯಾದಿ ಕಾರಣಗಳಿಂದಾಗಿ ಭಾರತದಂತಹ ರಾಷ್ಟ್ರಗಳನ್ನು ಬಹಳವಾಗಿ ಕಾಡುತ್ತಿದೆ. ಮಲೇರಿಯಾ ರೋಗದಿಂದ ಉಂಟಾಗುವ ಆರ್ಥಿಕ, ಸಾಮಾಜಿಕ ಪರಿಣಾಮಗಳಿಂದಾಗಿ ದೇಶದ ಪ್ರಗತಿಗೆ ಬಹಳ ದೊಡ್ಡ ಕಂಟಕವಾಗಿ ಮಲೇರಿಯಾ ಬೆಳೆದು ನಿಂತಿದೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ಮಲೇರಿಯಾ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾಗಬೇಕಾದರೆ ನಾವೆಲ್ಲರೂ ಮಲೇರಿಯಾ ವಿರುದ್ಧ ಸಮರಸಾರಿ, ರೋಗವನ್ನು ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ.
ಮಲೇರಿಯಾ ಯಾಕೆ ಮತ್ತು ಹೇಗೆ?
ಮಲೇರಿಯಾ ಅತೀ ಸಾವನ್ಯವಾದ ಸಾಂಕ್ರಾಮಿಕ ರೋಗವಾಗಿದ್ದು, ಉಷ್ಣವಲಯ ಮತ್ತು ಉಪ-ಉಷ್ಣವಲಯಗಳಲ್ಲಿ ಹೆಚ್ಚು ಕಂಡುಬರುತ್ತದೆ. ಮಲೇರಿಯಾ ರೋಗ ಒಂದು ಉಗ್ರ ಸ್ವರೂಪದ ಸಾರ್ವಜನಿಕ ಆರೋಗ್ಯ ಪಿಡುಗು ಆಗಿದ್ದು, ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಹೆಚ್ಚು ಕಂಡು ಬರುತ್ತದೆ. ಮತ್ತು ಬಡತನಕ್ಕೆ ಇದು ಕೂಡಾ ಕಾರಣವಾಗಿದ್ದು, ಆರ್ಥಿಕ ಮುನ್ನಡೆಗೆ ಅಡ್ಡಿ ಆಗುತ್ತದೆ. ಪ್ಲಾಸ್ಮೋಡಿಯಂ ಜಾತಿಗೆ ಸೇರಿದ ಪ್ರೋಟೊಸೋವನ್ಪರಾವಲಂಬಿಯು ಈ ರೋಗಕ್ಕೆ ಪ್ರಮುಖ ಕಾರಣ. ಈ ಪರಾವಲಂಬಿ ಜೀವಿಗಳಲ್ಲಿ ಐದುಜಾತಿಗಳು ಮಾನವರಿಗೆ ಮಲೇರಿಯಾ ಸೋಂಕು ತಗಲಿಸಬಹುದು. ಪ್ಲಾಸ್ಮೋಡಿಯಂ, ವೈವಾಕ್ಸ್, ಫಾಲ್ಸಿಫೆರಮ್, ಓವಾಲೆ ಮತ್ತು ಮಲೇರಿಯಾ ಎಂಬ ಐದು ಜಾತಿಗಳಲ್ಲಿ ಫಾಲ್ಸಿಫೆರಂ ಜಾತಿಯ ರೋಗಾಣು ಅತ್ಯಂತ ಗುರುತರವಾದ ಮಲೇರಿಯಾ ರೋಗಕ್ಕೆ ಕಾರಣವಾಗುತ್ತದೆ. ಸುಮಾರು 80ಶೇ. ಮಲೇರಿಯಾ ಪ್ರಕರಣಗಳಿಗೆ ಫಾಲ್ಸಿಫೆರಮ್ ಕಾರಣವಾಗಿದ್ದು ಮಲೇರಿಯಾದಿಂದ ಸಂಭವಿಸುವ ಸಾವುಗಳಲ್ಲಿ ಸುಮಾರು 90ಶೇ. ಪಾಲು ಇದರದ್ದೇ ಆಗಿರುತ್ತದೆ.
ರೋಗದ ಲಕ್ಷಣಗಳು ವಿಪರೀತ ಜ್ವರ, ನಡುಗುವಿಕೆ, ಗಂಟು ಅಥವಾ ಕೀಲುನೋವು, ವಾಂತಿ, ರಕ್ತಹೀನತೆ, ತಲೆ ಸುತ್ತುವುದು, ಉಸಿರು ಕಟ್ಟುವಿಕೆ ಮತ್ತು ಹೃದಯ ಸ್ಪಂದನಾಧಿಕ್ಯ ಮುಂತಾದವುಗಳು ಕಾಣಿಸಿಕೊಳ್ಳುತ್ತದೆ. ರೋಗದತೀವ್ರತೆ ಜಾಸ್ತಿಯಾದಲ್ಲಿ ಅಕ್ಷಿಪಟಲದ ಹಾನಿ, ಸೆಳೆತ ಅಥವಾ ಅಪಸ್ಮಾರ ಮತ್ತು ಮೂತ್ರದಲ್ಲಿ ರಕ್ತ ಬರುವ ಸಾಧ್ಯತೆಯೂ ಇದೆ. ಮಲೇರಿಯಾ ರೋಗದಲ್ಲಿ ಬರುವ ಜ್ವರವೂ ಕೂಡಾ ಪ್ಲಾಸ್ಮ್ಮೋಡಿಯಂ ಪರಾವಲಂಬಿಯ ಜಾತಿಯ ಪ್ರಭೇದಕ್ಕೆ ಅನುಗುಣವಾಗಿ ಇರುತ್ತದೆ. ವೈವಾಕ್ಸ್ ಮತ್ತು ಓವಾಲೆ ಸೋಂಕು ತಗಲಿದ್ದಲ್ಲಿ, ಎರಡು ದಿನಗಳಿಗೊಮ್ಮೆ ನಾಲ್ಕರಿಂದ 6ಗಂಟೆಗಳ ಕಾಲ ಸಕ್ರಿಯವಾಗಿ ಸಂಭವಿಸುವ ಹಠಾತ್ ಚಳಿ ಮತ್ತು ನಡುಕ ಮತ್ತು ಬಳಿಕ ಜ್ವರ ಮತ್ತು ಬೆವರುವಿಕೆ ಸಂಭವಿಸುತ್ತದೆ. ಪ್ಲಾಸ್ಮೋಡಿಯಂ ಮಲೇರಿಯಾ ಪ್ರಭೇದಗಳಲ್ಲಿ ಮೂರು ದಿನಗಳಿಗೊಮ್ಮೆ ಜ್ವರ ಮತ್ತು ಬೆವರುವಿಕೆ ಕಾಣಿಸಿಕೊಳ್ಳುಬಹುದು. ಫಾಲ್ಸಿಪೆರಮ್ ಪ್ರಭೇದದ ಮಲೇರಿಯಾ ಪ್ರತಿ 36-48 ಗಂಟೆಗಳಿಗೊಮ್ಮೆ ಮರುಕಳಿಸುವ ಜ್ವರವಾಗಿದ್ದು ಅಷ್ಟೇನೂ ತೀವ್ರವಾಗಿರುವುದಿಲ್ಲ. ಆದರೆ ಬಹುಮಟ್ಟಿಗೆ ಸತತ ಜ್ವರಕ್ಕೆ ಕಾರಣವಾಗಬಹುದು. ಅತೀ ತೀವ್ರ ಮಲೇರಿಯಾ ಸಾಮಾನ್ಯವಾಗಿ ಫಾಲ್ಸಿಫೆರಂ ಸೋಂಕಿನಿಂದ ಆಗುತ್ತದೆ. ಸೋಂಕು ತಗಲಿದ 6-14ದಿನಗಳ ನಂತರ ಕಾಣಿಸಿಕೊಳ್ಳುತ್ತದೆ. ಸೂಕ್ತ ಚಿಕಿತ್ಸೆ, ಸಕಾಲದಲ್ಲಿ ದೊರಕದಿದ್ದರೆ ತೀವ್ರ ಮಲೇರಿಯಾದ ಪರಿಣಾಮದಿಂದ ಕೋಮಾಸ್ಥಿತಿ ಮತ್ತು ಸಾವು ಸಂಭವಿಸಬಹುದು. ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಇದಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಹಿಗ್ಗಿದ ಗುಲ್ಮ ಗ್ರಂಥಿ (ಸ್ಪೀನೋಮೆಗಾಲೆ) ತೀವ್ರ ತಲೆನೋವು, ಮೆದುಳಿನ ರಕ್ತಹೀನತೆ, ಹಿಗ್ಗಿದ ಯಕೃತ್ತು (ಹೆಪಾಟೊ ಮೆಗಾಲೆ), ಮೂತ್ರಪಿಂಡಗಳ ವೈಫಲ್ಯಗಳು ಸಂಭವಿಸಬಹುದು. ಮೂತ್ರಪಿಂಡಗಳ ವೈಫಲ್ಯದಿಂದ ಉರಿಮೂತ್ರ ಜ್ವರ ಕೂಡಾ ಉಂಟಾಗಬಹುದು.
ಮಕ್ಕಳಲ್ಲಿ ತೀವ್ರ ಮಲೇರಿಯಾ ಬಂದಲ್ಲಿ, ಅರಿವಿನ ಶಕ್ತಿ ಕುಂಟಿತ ಗೊಳ್ಳಬಹುದು. ಮೆದುಳಿನ ಮಲೇರಿಯಾ ಜ್ವರದಿಂದ ನರ ಮಂಡ ಲಕ್ಕೂ ಹಾನಿಯಾಗುವ ಸಾಧ್ಯತೆ ಇದೆ. ಅಪಸ್ಮಾರ ಮತ್ತು ಅಕ್ಷಿಪಟಲ ಬಿಳಿಯಾಗುವುದು ಮೆದುಳಿನ ಜ್ವರದ ಸಂಕೇತವಾಗಿರುತ್ತದೆ. ತೀವ್ರತರ ಮಲೇರಿಯಾ ಫಾಲ್ಸಿಫೆರಂ ಪ್ರಭೇದಗಳಲ್ಲಿ ಕಾಣಸಿಗುತ್ತದೆ.
ತಡೆಗಟ್ಟುವುದು ಹೇಗೆ?
ಮಲೇರಿಯಾ ರೋಗವು ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕ ರೋಗವಾಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಸಾಂಕ್ರಾಮಿಕ ರೋಗಗಳಲ್ಲಿ ಇರುವಂತೆ ರೋಗ ನಿಯಂತ್ರಣಕ್ಕೆ ಮತ್ತು ತಡೆಗಟ್ಟುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಲೇರಿಯಾ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಮತ್ತು ಸಹಕಾರ ಅತೀ ಅವಶ್ಯಕ. ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಾರ್ವಜನಿಕ ಸ್ಥಳಗಳ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.
1.ಸೊಳ್ಳೆಗಳ ನಿಯಂತ್ರಣಕ್ಕಾಗಿ, ಮನೆಯ ಸುತ್ತಮುತ್ತಲಿನ ಆವರಣಗಳಲ್ಲಿ ನೀರು ನಿಲ್ಲದಂತೆ ನಿಗಾ ವಹಿಸಬೇಕು. ನಿಂತ ನೀರಲ್ಲಿ ಅನಾಫಿಲಿಸ್ ಸೊಳ್ಳೆ ಮರಿಗಳು ಬೆಳೆದು ರೋಗ ವರ್ಧನೆಗೆ ಕಾರಣವಾಗಬಹುದು. ನೀರು ನಿಲ್ಲುವುದನ್ನು ತಡೆಗಟ್ಟಲು ಈ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಎಳನೀರು ಚಿಪ್ಪುಗಳನ್ನು ಕವಚಿ ಹಾಕಬೇಕು ಅಥವಾ ನಾಶಪಡಿಸಬೇಕು.
ಟಯರ್ಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು.
ನೀರಿನ ಟ್ಯಾಂಕು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛಗೊಳಿಸಬೇಕು.
ಬಕೆಟುಗಳಲ್ಲಿ ವಾರಗಟ್ಟಲೆ ನೀರು ತುಂಬಿಸಿ ಇಡಬಾರದು. ಹೂದಾನಿಗಳ ಕೆಳತಟ್ಟೆಗಳನ್ನು ಆಗಾಗ ಶುಚಿಗೊಳಿಸಬೇಕು
ಹಳ್ಳಿ ಪ್ರದೇಶಗಳಲ್ಲಿ ಉಪಯೋಗಿಸದೇ ಇರುವ ಕಡೆಯುವ ಕಲ್ಲುಗಳು, ಖಾಲಿ ತಟ್ಟೆಗಳು, ಕ್ಯಾನ್ಗಳನ್ನು ಮತ್ತು ಬಕೆಟ್ಗಳನ್ನು ಬೋರಲಾಗಿ ಹಾಕಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ತೊಟ್ಟಿ, ಟ್ಯಾಂಕ್ ಮತ್ತು ಬಾವಿಗಳಿಗೆ ಸೊಳ್ಳೆ ಮರಿಗಳನ್ನು ತಿನ್ನುವ ಗಪ್ಪಿಮತ್ತು ಗಂಬೂಸಿಯ ಮೀನು ಮರಿಗಳನ್ನು ಹಾಕುವ ಮೂಲಕ ಸೊಳ್ಳೆ ಉತ್ಪಾದನೆಯಾಗದಂತೆ ಮಾಡಬೇಕು.
2. ರಾತ್ರಿ ಹೊತ್ತು ಮಲಗುವಾಗ ಕಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು. ಸಾಮಾನ್ಯವಾಗಿ ಮಲೇರಿಯಾ ಹರಡುವ ಹೆಣ್ಣು ಅನಾಫಿಲಿಸ್ ಸೊಳ್ಳೆ ರಾತ್ರಿ ವೇಳೆ ಕಚ್ಚುತ್ತದೆ.
3. ಸೊಳ್ಳೆ ವಿಕರ್ಷಿತವಾಗುವ ಕೀಟನಾಟಕ ಅಥವಾ ಸೊಳ್ಳೆನಾಶಕ ದ್ರಾವಣಗಳನ್ನು ಬಳಸಬೇಕು. 4. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ, ಘನತ್ಯಾಜ್ಯಗಳನ್ನು ಎಸೆಯುವುದನ್ನು ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತೀ ಅವಶ್ಯಕ.
5. ಯಾರಿಗಾದರೂ ಜ್ವರ ಬಂದಲ್ಲಿ ತೀವ್ರ ನಡುಕ, ಚಳಿ ಜ್ವರವಿದ್ದಲ್ಲಿ ತಕ್ಷಣ ವೈದ್ಯರನ್ನು ಕಂಡು ‘ಮಲೇರಿಯಾ’ ರಕ್ತಪರೀಕ್ಷೆ ಮಾಡಿಸಬೇಕು. ಸಾಮಾನ್ಯ ವೈರಸ್ಜ್ವರವೆಂದು ನಿರ್ಲಕ್ಷಿಸಿದ್ದಲ್ಲಿ ಅಪಾಯಕಟ್ಟಿಟ್ಟ ಬುತ್ತಿ. ಆರಂಭಿಕ ಹಂತದಲ್ಲಿ ಮಲೇರಿಯಾ ರೋಗವನ್ನು ಗುರುತಿಸಿದ್ದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಬಹುದು.