ಶರಣ ಚಳವಳಿಯ ನವ ರಾಜಕಾರಣದಿಂದ ನವ ಕಾವ್ಯಮೀಮಾಂಸೆ ಹುಟ್ಟು: ಪ್ರೊ.ರಾಜೇಂದ್ರ ಚೆನ್ನಿ
ಮಣಿಪಾಲ : ಹನ್ನೆರಡನೇ ಶತಮಾನದ ಶರಣ ಚಳವಳಿಯ ‘ನವ ರಾಜಕಾರಣ’ ಕರ್ನಾಟಕದಲ್ಲಿ ಅಪೂರ್ವವಾದ ವಚನ ಸಾಹಿತ್ಯಕ್ಕೆ ನಾಂದಿಯಾಗಿ ‘ನವ ಕಾವ್ಯಮೀಮಾಂಸೆ’ಯ ಹುಟ್ಟಿಗೆ ಕಾರಣವಾಯಿತು ಎಂದು ಖ್ಯಾತ ಲೇಖಕ ಹಾಗೂ ಸಂಸ್ಕೃತಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದ್ದಾರೆ.
ಮಣಿಪಾಲ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ವಚನಗಳ ಓದು’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಚೆನ್ನಿ, ಶರಣ ಚಳವಳಿಯ ಸಂದರ್ಭದಲ್ಲಿ ವಿವಿಧ ವೃತ್ತಿ ಮತ್ತು ಸಾಮಾಜಿಕ ಸ್ತರಗಳಿಗೆ ಸೇರಿದ ಪುರುಷ ಮತ್ತು ಮಹಿಳೆ ಯರು ಕಾವ್ಯಗಳನ್ನು ರಚಿಸಿ ಆ ಯುಗದ ಕಾವ್ಯಮೀಮಾಂಸೆಯನ್ನೇ ಬದಲಾಯಿಸಿದರು ಎಂದು ಅಭಿಪ್ರಾಯಪಟ್ಟರು.
ಅದು ಜಾತಿ ಮತ್ತು ವರ್ಗಗಳು ಅತಿಯಾಗಿದ್ದ ಹಿಂಸಾತ್ಮಕ ಯುಗ. ಹೀಗಾಗಿ ಆ ಹೊತ್ತಲ್ಲಿ ದಯೆಯ ಬಗ್ಗೆ ಮಾತನಾಡುವ ಅಗತ್ಯವಿತ್ತು. ಶ್ರೇಣೀಕೃತ ಜಾತಿ- ಸಂರಚನೆಯನ್ನು ಮುರಿದು ಆಧ್ಯಾತ್ಮಿಕ ಅನುಭವವು ಯಾವುದೇ ವರ್ಗಗಳಿಗೆ ಸೀಮಿತವಾಗದೆ ಎಲ್ಲರಿಗೂ ಲಭ್ಯವಾಗುವಂತೆ ಬಸವಣ್ಣ (ಬಸವೇಶ್ವರ), ಅಕ್ಕ ಮಹಾದೇವಿ, ಅಲ್ಲಮಪ್ರಭು, ದೇವರ ದಾಸಿಮಯ್ಯ ಹಾಗೂ ಇನ್ನೂ ಅನೇಕರು ಇದೇ ರೀತಿ ಜಾತಿ ವ್ಯವಸ್ಥೆಯನ್ನು ಮುರಿದು ಬರೆದು ಬದುಕಿದ್ದಾರೆ ಎಂದರು.
ವಚನಗಳು ದುಡಿಯುವ ವರ್ಗದ ಅಧಿಕೃತ ಧ್ವನಿಯೂ ಆಗಿತ್ತು. ಜಾತಿ, ಲಿಂಗ, ಆಚಾರ, ಸಾಂಪ್ರದಾಯಿಕ ತಾರತಮ್ಯಗಳ ನಿರಾಕರಣೆ ಮತ್ತು ದುಡಿಮೆಯನ್ನು (ಶ್ರಮ) ಪೂಜೆಯಾಗಿ ಸ್ವೀಕರಿಸುವುದು (ಕಾಯಕವೇ ಕೈಲಾಸ), ಕಾವ್ಯದ ಭಾಷೆಯನ್ನೇ ಬದಲಾಯಿಸಿತು. ಬಸವಣ್ಣನವರು ‘ಆನು ಒಲಿದಂತೆ ಹಾಡುವೆನು’ ಎಂದು ಘೋಷಿಸಿ ಯುಗದ ಮೀಮಾಂಸೆಗೆ ನಾಂದಿ ಹಾಡಿದರು.
ಅಂದಿನ ಶ್ರೇಷ್ಠ ಕವಯಿತ್ರಿ ಎನಿಸಿದ ಅಕ್ಕ ಮಹಾದೇವಿ ಲಿಂಗ ತಾರತಮ್ಯದ ಕುರಿತು ಖಚಿತವಾದ ಮಾತುಗಳಲ್ಲಿ ಬರೆದಿದ್ದಾರೆ. ಶೃಂಗಾರದ ಉಪಮೆಗಳ ಮೂಲಕ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅಕ್ಕ ಚಿತ್ರಿಸಿದರು. ಅಲ್ಲಮಪ್ರಭು ಆ ಕಾಲದ ಎಲ್ಲಾ ತಾತ್ವಿಕ ಪರಂಪರೆಗಳೊಂದಿಗೆ ವಾಗ್ವಾದದಲ್ಲಿ ತೊಡಗಿಸಿ ಕೊಂಡರು ಎಂದು ಪ್ರೊ.ಚೆನ್ನಿ ವಿವರಿಸಿದರು. ಪ್ರೊ.ಚೆನ್ನಿ ತಮ್ಮ ಮಾತನ್ನು ಪುಷ್ಟಿಕರಿಸುತ್ತ ದೇವರ ದಾಸಿಮಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ವಿವಿಧ ವಚನಕಾರರ ಹಲವಾರು ವಚನಗಳನ್ನು ಉಲ್ಲೇಖಿಸಿದರು.
ಪ್ರಾರಂಭದಲ್ಲಿ ಮಾತನಾಡಿ ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ, ಶರಣ ಆಂದೋಲನವು ಸಾಮಾಜಿಕವಾಗಿ ಮತ್ತು ತಾತ್ವಿಕವಾಗಿ ಅತ್ಯಂತ ಪ್ರಕ್ಷುಬ್ಧ ಹಂತವಾಗಿದೆ ಮತ್ತು ವಚನಗಳಲ್ಲಿ ಅದು ಅತ್ಯುತ್ತಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಶ್ರಾವ್ಯ ಬಾಸ್ರಿ ‘ದಯವಿಲ್ಲದ ಧರ್ಮವಾವುದಯ್ಯ?’ ಸೇರಿದಂತೆ ಅನೇಕ ವಚನಗಳನ್ನು ಹಾಡಿದರು. ಸುಹಾನಿ ರಾಜ್ಪೂತ್ ಕಾರ್ಯಕ್ರಮ ನಿರೂಪಿಸಿದರೆ, ವೆಲಿಕಾ ಎಸ್. ವಂದಿಸಿದರು.