ಮಂಗಳೂರು: ಕೊರಗ ಸಮುದಾಯದ ಯುವಕರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಗಾರ

Update: 2022-05-17 14:16 GMT

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಯೋಜನೆ-ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೊರಗ ಸಂಘಟನೆಗಳ ಸಹಯೋಗದಲ್ಲಿ ಮಂಗಳೂರು ನಗರದ ಕೋಡಿಕಲ್‌ನ ಕುದ್ಮುಲ್ ರಂಗರಾವ್ ಸಮುದಾಯ ಭವನದಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಕೊರಗ ಸಮುದಾಯದ ಯುವಕರಿಗಾಗಿ ಆಯೋಜಿಸಲಾಯಿತು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ  ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಾಗಾರ ವನ್ನು ಉದ್ಧಾಟಿಸಿ ಮಾತನಾಡಿ, ಪ್ರಕೃತಿ ಪ್ರಿಯರು ಮತ್ತು ಬಹಳ ಶಿಸ್ತು ಹಾಗೂ ಮುಗ್ಧತೆಯಿಂದ ಜೀವನ ನಡೆಸುತ್ತಿರುವ ಕರಾವಳಿಯ ಮೂಲನಿವಾಸಿಗಳಾದ ಕೊರಗ ಬುಡಕಟ್ಟು ಜನರ ಅಭಿವೃದ್ಧಿ ನಿಧಾನವಾಗಿ ಸಾಗುತ್ತಿದೆ. ಸಮುದಾಯದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಆರ್ಥಿಕ ಮತ್ತು ಸಾಮಾಜಿಕ ಆಡೆತಡೆಗಳನ್ನು ಮೀರಿ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಮಹತ್ತರವಾದ ಸಾಧನೆಗಳನ್ನು ಸಾಧಿಸಬೇಕಾಗಿದೆ ಎಂದರು.

ಸಮಾಜದಲ್ಲಿ ಗಣನೀಯ ಪ್ರಮಾಣದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶಿಕ್ಷಣದ ಸಾಧನೆ ಮತ್ತು ವೃತ್ತಿಕೌಶಲ್ಯಗಳನ್ನು ತಮ್ಮದಾಗಿಸಿಕೊಳ್ಳಲು ಸಮುದಾಯ ಹೆಚ್ಚು ಶ್ರಮವಹಿಸಬೇಕು. ಕೊರಗರ ಸರ್ವತೋಮುಖ ಅಭಿವೃದ್ಧಿಗೆ ಡಾ.ಮಹಮ್ಮದ್ ಫೀರ್ ವರದಿಯು ನೀಡಿರುವ  ಅಮೂಲ್ಯವಾದ  ಮಾರ್ಗಸೂಚಿ ಗಳನ್ನು ಅನುಷ್ಠಾನಗೊಳಿಸಬೇಕು.  ಸರಕಾರದ  ಸೌಲಭ್ಯಗಳನ್ನು  ಸಮುದಾಯ ಫಲಪ್ರದವಾಗಿ  ಬಳಸಿಕೊಳ್ಳ ಬೇಕು ಎಂದು ನುಡಿದರು.

ಸಾಂವಿಧಾನಿಕ  ಹಕ್ಕುಗಳಿಗಾಗಿ ಕೊರಗ ಸಂಘಟನೆಗಳು ಹೋರಾಟ ಮಾಡುವುದರಲ್ಲಿ ತಪಿಲ್ಲ. ಮುಖ್ಯವಾಗಿ ಯುವಜನತೆ ತಮ್ಮ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಕೊರಗ ಸಮುದಾಯವು ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು ಎಂದರಲ್ಲದೇ, ಮಂಗಳೂರು ವಿವಿ ಮುಂದಿನ ದಿನಗಳಲ್ಲಿ ಕೊರಗ ಸಮುದಾಯದ ಅಭ್ಯುಯದಕ್ಕೋಸ್ಕರ ಇನ್ನಷ್ಟೂ ಹೆಚ್ಚಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಭರವಸೆ ನೀಡಿದರು. 

ವೃತ್ತಿ ಮಾರ್ಗದರ್ಶನ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರು ಕಾಲೇಜ್ ಆಫ್ ಫಿಶರೀಸ್‌ನ ನಿವೃತ್ತ ಪ್ರಾಧ್ಯಾಪಕ ಮತ್ತು ಡೀನ್ ಪ್ರೊ.ಎಸ್.ಎಂ. ಶಿವಪ್ರಕಾಶ್ ಮಾತನಾಡಿ, ಯುವ ಪೀಳಿಗೆ ಜೀವನದಲ್ಲಿ ಗುರಿ ಮತ್ತು ಉದ್ದೇಶಗಳನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಜ್ಞಾನಾಭಿವೃದ್ಧಿ ಮತ್ತು ಸಂವಹನ ಕಲೆಗಳನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸನ್ನು ಸಾಧಿಸಬಹುದು ಎಂದರು. 

ವೇದಿಕೆಯಲ್ಲಿ ಕೋಡಿಕಲ್  ನಿವಾಸಿ ಸಮಾಜ ಸೇವಕಿ ಮೀನಾ, ಕೊರಗ ಸಮದಾಯದ ಮುಖಂಡರಾದ ಮೋಹನ್ ಅಡ್ವೆ,  ಶ್ರೀಪುತ್ರನ್, ಮತ್ತಾಡಿ ಕಾಯರ್‌ಪಳಿಕೆ, ಮಂಗಳೂರು ವಿವಿ ಮಂಗಳಾ ಯೋಜನೆ-ಗ್ರಾಮ ದತ್ತು ಸ್ವೀಕಾರ ಕಾರ್ಯಕ್ರಮದ ಸಂಯೋಜಕ, ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕ  ಪ್ರೊ.ಪ್ರಶಾಂತ ನಾಯ್ಕ ಮತ್ತು ನೋಡಲ್ ಅಧಿಕಾರಿ ಹಾಗೂ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಉಪಸ್ಥಿತರಿದ್ದರು.

ಡಾ.ಸಬಿತಾ ಗುಂಡ್ಮಿ ಅತಿಥಿಗಳನ್ನು ಸ್ವಾಗತಿಸಿದರೆ, ಮತ್ತಾಡಿ ಕಾಯರ್‌ಪಳಿಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ದರು. ಪ್ರೊ.ಪ್ರಶಾಂತ್ ನಾಯ್ಕ್ ವಂದಿಸಿ, ಸುರೇಂದ್ರ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಿಂದ ಸುಮಾರು 60ಕ್ಕೂ ಅಧಿಕ ಮಂದಿ ಕೊರಗ ಸಮುದಾಯದ ಯುವ ಜನರು ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News