ನೆರೆ,‌ ಭೂಕುಸಿತ: ಅಸ್ಸಾಂ, ಅರುಣಾಚಲ ಪ್ರದೇಶ, ಮೇಘಾಲಯಗಳಲ್ಲಿ ಒಟ್ಟು 25 ಜನರು ಬಲಿ

Update: 2022-05-21 16:40 GMT

ಹೊಸದಿಲ್ಲಿ,ಮೇ 21: ಈಶಾನ್ಯ ಭಾರತದ ಮೂರು ರಾಜ್ಯಗಳಾದ ಅಸ್ಸಾಂ,ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಲ್ಲಿ ನೆರೆ ಮತ್ತು ಭೂಕುಸಿತಗಳಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಅಸ್ಸಾಂ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್ಡಿಎಂಎ)ವು ನೀಡಿರುವ ಮಾಹಿತಿಯಂತೆ ಶುಕ್ರವಾರ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಪ್ರವಾಹದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು,ರಾಜ್ಯದಲ್ಲಿ ನೆರೆಯಿಂದಾಗಿ ಸಾವುಗಳ ಸಂಖ್ಯೆ ಒಂಭತ್ತಕ್ಕೇರಿದೆ. ಮೇ 14ರಿಂದ ಸರಣಿ ಭೂಕುಸಿತಗಳಲ್ಲಿ ಇತರ ಐವರು ಮೃತಪಟ್ಟಿದ್ದಾರೆ.

ಶುಕ್ರವಾರ ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರದ ಭೂಕುಸಿತ ವಲಯದಲ್ಲಿ ಮಹಿಳೆಯೋರ್ವರ ಶವ ಪತ್ತೆಯಾಗಿದ್ದು, ಅವರು ನಗರದಲ್ಲಿ ಸಂಭವಿಸಿದ ಹಲವಾರು ಭೂಕುಸಿತಗಳಿಗೆ ಎಂಟನೇ ಬಲಿಯಾಗಿದ್ದಾರೆ. ಅಪಾಯಕಾರಿ ಸ್ಥಳಗಳಿಂದ ಸ್ಥಳಾಂತರಗೊಳ್ಳುವಂತೆ ಮುಖ್ಯಮಂತ್ರಿ ಪೆಮಾ ಖಂಡು ಅವರು ಜನರಿಗೆ ಸೂಚಿಸಿದ್ದಾರೆ.ಅತ್ತ ಮೇಘಾಲಯದಲ್ಲಿ ದಿಢೀರ್ ನೆರೆ ಭೂಕುಸಿತಗಳಿಂದಾಗಿ ಈವರೆಗೆ ಮೂವರು ಮೃತಪಟ್ಟಿದ್ದಾರೆ.

ಅಸ್ಸಾಮಿನ 29 ನೆರೆಪೀಡಿತ ಜಿಲ್ಲೆಗಳಲ್ಲಿ ಸುಮಾರು 7.12 ಲಕ್ಷ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಈವರೆಗೆ 74,705 ಜನರನ್ನು 234 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಎಎಸ್ಡಿಎಂಎ ವಕ್ತಾರರು ತಿಳಿಸಿದರು.

ರಾಜ್ಯಾದ್ಯಂತ ಕನಿಷ್ಠ 20 ಒಡ್ಡುಗಳು ಕೋಡಿ ಬಿದ್ದಿದ್ದು,ಹಲವಾರು ರಸ್ತೆಗಳಲ್ಲಿ ಬಿರುಕುಗಳು ಉಂಟಾಗಿ ವಾಹನಗಳ ಸಂಚಾರ ಅಸಾಧ್ಯವಾಗಿದೆ. 2,251 ನೆರೆಪೀಡಿತ ಗ್ರಾಮಗಳಲ್ಲಿ 43,090 ಮನೆಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ ಎಂದರು. ನೆರೆಪೀಡಿತ ಜಮುನಾಮುಖ ಜಿಲ್ಲೆಯ ಎರಡು ಗ್ರಾಮಗಳ 500ಕ್ಕೂ ಅಧಿಕ ಕುಟುಂಬಗಳು ಜೀವವುಳಿಸಿಕೊಳ್ಳಲು ರೈಲ್ವೆ ಹಳಿಗಳಲ್ಲಿ ಆಶ್ರಯ ಪಡೆದಿವೆ. ಈ ಪ್ರದೇಶದಲ್ಲಿ ಎತ್ತರದಲ್ಲಿರುವ ರೈಲ್ವೆ ಹಳಿಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ನೆರೆನೀರಿನಲ್ಲಿ ಮುಳುಗಡೆಯಾಗಿವೆ.
 
ಸೇನೆ,ಅರೆ ಸೇನಾಪಡೆ,ಎನ್ಡಿಆರ್ಎಫ್ ಮತು ಎಸ್ಡಿಆರ್ಎಫ್ ತಂಡಗಳು ದೋಣಿಗಳು ಮತ್ತು ಹೆಲಿಕಾಪ್ಟರ್ಗಳನ್ನು ಬಳಸಿ ವಿವಿಧ ನೆರೆಪೀಡಿತ ಪ್ರದೇಶಗಳಿಂದ 21,884 ಜನರನ್ನು ತೆರವುಗೊಳಿಸಿವೆ. ಶುಕ್ರವಾರದಿಂದ ಭಾರತಿಯ ವಾಯುಪಡೆಯ ಚೀನೂಕ್ ಹೆಲಿಕಾಪ್ಟರ್ಗಳನ್ನು ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿಸಲಾಗಿದೆ.

ಅತ್ತ ಬಿಹಾರದ 16 ಜಿಲ್ಲೆಗಳಲ್ಲಿ ಮಿಂಚು-ಸಿಡಿಲಿಗೆ 33 ಜನರು ಬಲಿಯಾಗಿದ್ದು,ರಾಜ್ಯ ಸರಕಾರವು ತಲಾ ನಾಲ್ಕು ಲ.ರೂ.ಗಳ ಪರಿಹಾರವನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಸಾವುಗಳಿಗೆ ಸಂತಾಪಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News