ಪಿಯು ಇತಿಹಾಸದ ಪಠ್ಯಪುಸ್ತಕ ಪರಿಷ್ಕರಣೆಗೂ ಸದ್ದಿಲ್ಲದೆ ಚಾಲನೆ!

Update: 2022-05-23 02:39 GMT

ಬೆಂಗಳೂರು: ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿರುವ ಸರಕಾರವು ಇದೀಗ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಕರ್ನಾಟಕದ ವಿಶೇಷ ಉಲ್ಲೇಖ ಹೊಂದಿರುವ ಭಾರತದ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಲು ಸದ್ದಿಲ್ಲದೇ ಚಾಲನೆ ನೀಡಿರುವುದು ಬಹಿರಂಗವಾಗಿದೆ. ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ಅಧ್ಯಾಯ 4.2ರಲ್ಲಿ ಹೊಸ ಧರ್ಮಗಳ ಉದಯ ಪಠ್ಯಭಾಗವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸುವ ಹೊಣೆಗಾರಿಕೆಯನ್ನೂ ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು 2022ರ ಫೆ.17ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿ ‘the-file.in’ಗೆ ಲಭ್ಯವಾಗಿದೆ.

ಟಿಪ್ಪಣಿಯಲ್ಲೇನಿದೆ?: ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯುಸಿ ಇತಿಹಾಸ ವಿಭಾಗಕ್ಕೆ ನಿಗದಿಪಡಿಸಿದ ಭಾರತದ ಇತಿಹಾಸ (ಕರ್ನಾಟಕ ವಿಶೇಷ ಉಲ್ಲೇಖದೊಂದಿಗೆ) ಪಠ್ಯಪುಸ್ತಕದ 4.2ನೇ ಅಧ್ಯಾಯ ಹೊಸ ಧರ್ಮಗಳ ಉದಯ ಪಠ್ಯಭಾಗದಲ್ಲಿ ನಿರ್ದಿಷ್ಟ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯವಿರುವ ಬಗ್ಗೆ ದೂರು ಬಂದಿರುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಮಾಜ ಅಧ್ಯಯನ ಪಠ್ಯಪುಸ್ತಕದ ಪರಿಶೀಲನೆಗಾಗಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ರಚನೆಯಾಗಿರುತ್ತದೆ. ದ್ವಿತೀಯ ಪಿಯುನ ಇತಿಹಾಸ ಪಠ್ಯಪುಸ್ತಕದ 4.2 ಅಧ್ಯಾಯವನ್ನು ಪರಿಶೀಲಿಸಿ ಸೂಕ್ತವಾಗಿ ಪರಿಷ್ಕರಿಸಲು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ಒಪ್ಪಿಸಲು ಹಾಗೂ ಈ ಪರಿಷ್ಕೃತ ಪಠ್ಯಪುಸ್ತಕವನ್ನು 2022-23ನೇ ಸಾಲಿನಲ್ಲಿ ಮುದ್ರಣ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಚಿವ ನಾಗೇಶ್ ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ.

 ಸಚಿವರ ಸೂಚನೆಯಂತೆ ಪಿಯು ಮಂಡಳಿಯ ನಿರ್ದೇಶಕರು ದ್ವಿತೀಯ ಪಿಯುಸಿ ಇತಿಹಾಸ ಪಠ್ಯಪುಸ್ತಕದ ರಚನಾ ಸಮಿತಿಗೆ ಮಾಹಿತಿ ಸಲ್ಲಿಸಿ ಅಭಿಪ್ರಾಯವನ್ನು ಕೋರಿದ್ದರು. ಸೂಚಿತ ಅಂಶಗಳಲ್ಲಿ ಯಾವುದೇ ವಿವಾದಿತ ಅಂಶಗಳಿರುವುದಿಲ್ಲ ಹಾಗೂ ಇಲಾಖೆ ಈ ಅಂಶಗಳ ಬಗ್ಗೆ ತೆಗೆದುಕೊಳ್ಳುವ ಯಾವುದೇ ಕ್ರಮಕ್ಕೆ ಸಮಿತಿಯ ಅಭ್ಯಂತರವಿರುವುದಿಲ್ಲ ಎಂದು ದ್ವಿತೀಯ ಪಿಯು ಪಠ್ಯಪುಸ್ತಕ ರಚನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಅಭಿಪ್ರಾಯಿಸಿದ್ದರು ಎಂಬುದು ಪಿಯು ಮಂಡಳಿ ನಿರ್ದೇಶಕರು ಸಚಿವರ ಆಪ್ತ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದರು. ಪಿಯು ಮಂಡಳಿಯ ನಿರ್ದೇಶಕರು ಬರೆದಿರುವ ಪತ್ರದ ಪ್ರತಿಯೂ ‘ದಿ ಫೈಲ್’ಗೆ ಲಭ್ಯವಾಗಿದೆ.

ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಪಠ್ಯಕ್ರಮ ಚರ್ಚೆ ನಡೆಯುತ್ತಿದೆ. ಆ ಸಂದರ್ಭದಲ್ಲಿ ನೂತನ ಪಠ್ಯಪುಸ್ತಕಗಳನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಯಾವುದೇ ವಿವಾದಿತ ಅಂಶಗಳಿಲ್ಲದಂತೆ ಕ್ರಮವಹಿಸಬಹುದಾಗಿದೆ. ಎಂದೂ ನಿರ್ದೇಶಕರು ಅಭಿಪ್ರಾಯಿಸಿದ್ದಾರೆ. ಎನ್‌ಸಿಇಆರ್‌ಟಿ ಹಾಗೂ ನೆರೆರಾಜ್ಯಗಳ ಪಠ್ಯಕ್ರಮಗಳನ್ನು ಪರಿಗಣಿಸಿ ಡಾ.ಎ.ಎಚ್. ಗಾಯತ್ರಿದೇವಿ ಅವರ ಅಧ್ಯಕ್ಷತೆಯ ಪಠ್ಯಪುಸ್ತಕ ಅಭಿವೃದ್ಧಿ ಸಮಿತಿಯು ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕವನ್ನು ರಚಿಸಿತ್ತು. ಇದನ್ನು ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಜಿ. ಭಟ್ ನೇತೃತ್ವದ ಸಮಿತಿಯು ಪರಿಶೀಲಿಸಿತ್ತು. 4.2 ಅಧ್ಯಾಯದಲ್ಲೇನಿದೆ?: ಪಠ್ಯಪುಸ್ತಕದ 4.2 ಅಧ್ಯಾಯದಲ್ಲಿ ಹೊಸ ಧರ್ಮಗಳ ಉದಯ-ಜೈನ ಧರ್ಮ ಮತ್ತು ಬೌದ್ಧ ಧರ್ಮ ಎಂಬ ಪಾಠಾಂಶವಿತ್ತು. ವೈದಿಕ ಧರ್ಮದಲ್ಲಿನ ಗೊಂದಲಗಳು, ಪುರೋಹಿತ ವರ್ಗದ ಪರಮಾಧಿಕಾರ, ಪ್ರಾಣಿಬಲಿ, ಮಂತ್ರಗಳ ಪಠಣ, ಜಾತಿಪದ್ಧತಿ, ಮಹಾನ್ ವ್ಯಕ್ತಿಗಳ ಜನನವು ಹೊಸ ಧರ್ಮಗಳ ಉದಯಕ್ಕೆ ಕಾರಣವಾದವು ಎಂಬ ಅಂಶವಿದೆ.

ಆರಂಭದಲ್ಲಿ ವೈದಿಕ ಧರ್ಮ ಯಾವುದೇ ಜಟಿಲತೆಗಳಿಲ್ಲದೆ ಸರಳವಾಗಿತ್ತು. ನಂತರ ಪುರೋಹಿತರ ಪ್ರಭಾವದಿಂದಾಗಿ ಬಹಳಷ್ಟು ಕಠೋರತೆಗಳು ಧರ್ಮದೊಳಗೆ ನುಸುಳಿದವು. ಜನರು ಅಸಂತುಷ್ಟರಾದರು ಮತ್ತು ಬದಲಾವಣೆಯನ್ನು ಬಯಸಿದ್ದ ಅವರು ಅದನ್ನು ಹೊಸಧರ್ಮಗಳಲ್ಲಿ ಕಂಡುಕೊಂಡರು. ಬ್ರಾಹ್ಮಣರು ಇತರ ಜಾತಿಗಳ ಮೇಲೆ ಪರಮಾಧಿಕಾರ ಸ್ಥಾಪಿಸಿದರು. ಜನರಿಗೆ ಪುರೋಹಿತರಿಲ್ಲದೆ ಯಜ್ಞಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಬ್ರಾಹ್ಮಣರು ಅನೇಕ ವಿಶೇಷ ಸೌಲಭ್ಯಗಳನ್ನುಅನುಭವಿಸುತ್ತಿದ್ದರು ಮತ್ತು ತಮ್ಮನ್ನು ಎಲ್ಲರಿಗಿಂತ ಶ್ರೇಷ್ಠರೆಂದು ತಿಳಿದಿದ್ದರು.

ಪ್ರಾಣಿ ಬಲಿ, ಶಾಸ್ತ್ರ ವಿಧಿಗಳ ಒಂದು ಭಾಗವಾಗಿತ್ತು ಮತ್ತು ಇವುಗಳ ಆಚರಣೆ ದುಬಾರಿಯಾಯಿತು. ಹೀಗಾಗಿ ಜನರು ಅಸ್ತಿತ್ವದಲ್ಲಿದ್ದ ಧರ್ಮದಲ್ಲಿನ ನಂಬಿಕೆ ಕಳೆದುಕೊಂಡರು. ಋಗ್ವೇದದ ಕಾಲದ ಧಾರ್ಮಿಕ ವಿಧಿ ಮತ್ತು ಧರ್ಮಾಚರಣೆ ಉತ್ತರ ವೇದ ಕಾಲದಲ್ಲಿ ಸಂಕೀರ್ಣವಾದವು. ಸಂಸ್ಕೃತದಲ್ಲಿದ್ದ ವೈದಿಕ ಸಾಹಿತ್ಯದ ಮೇಲೆ ಪುರೋಹಿತರ ಪ್ರಭುತ್ವವಿತ್ತು. ಜನಸಾಮಾನ್ಯರಿಗೆ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಿರಲಿಲ್ಲ.

ಸ್ಪಷ್ಟ ತಿಳಿವಳಿಕೆಯ ಕೊರತೆಯಿಂದ ಜನರು ಮಂತ್ರ ಪಠಣೆಯಲ್ಲಿ ನಂಬಿಕೆ ಕಳೆದುಕೊಂಡರು. ಜಾತಿ ಪದ್ಧತಿಯು ಸಾಮಾಜಿಕವಾಗಿ ಜಟಿಲವಾಗಿತ್ತು. ಬೇರೆ ಬೇರೆ ಜಾತಿಗಳ ಮಧ್ಯೆ ಭೇದಭಾವವಿತ್ತು. ಬ್ರಾಹ್ಮಣರು ಉನ್ನತ ಸ್ಥಾನವನ್ನು ಹೊಂದಿದ್ದರು. ಸಮಾಜದಲ್ಲಿನ ಅಸಮಾನತೆಯಿಂದಾಗಿ ಜನರು ಅತೃಪ್ತರಾಗಿದ್ದರು. ಶೂದ್ರರು ಹೇಳಿಕೊಳ್ಳಲಾಗದ ಸಂಕಷ್ಟಗಳಿಗೆ ಗುರಿಯಾದರು.

ಜನರು ಅಸಂತುಷ್ಟರು ಮತ್ತು ಅತೃಪ್ತರಾಗಿದ್ದಾಗ ಮಹಾವೀರ ಮತ್ತು ಗೌತಮ ಬುದ್ಧನಂತಹ ಇಬ್ಬರು ಮಹಾನ್ ವ್ಯಕ್ತಿಗಳು ಜನಿಸಿದರು. ಅವರು ಸರಳವಾದ ತತ್ವಗಳನ್ನು ಜನರಾಡುವ ಭಾಷೆಯಲ್ಲಿ ಬೋಧಿಸಿದರು. ಹೊಸ ಧರ್ಮಗಳು ಬೋಧಿಸಿದ ಸರಳ ಮುಕ್ತಿ ಮಾರ್ಗದಿಂದಾಗಿ ಸಾಮಾನ್ಯರು ಹೊಸ ಧರ್ಮಗಳತ್ತ ಆಕರ್ಷಿಸಲ್ಪಟ್ಟರು. ಹೊಸಧರ್ಮಗಳ ಉದಯಕ್ಕೆ ಕಾರಣಗಳು ಮತ್ತು ಟಿಪ್ಪು ಸುಲ್ತಾನ್ ಸಾಧನೆ ಮತ್ತು ಕೊಡುಗೆಗಳನ್ನು ವಿವರಿಸುವ ಪಾಠಾಂಶಗಳನ್ನು ಪಠ್ಯದಿಂದ ತೆಗೆದುಹಾಕುವ ಮುನ್ನವೇ 2021-22ನೇ ಸಾಲಿಗೆ ಒಟ್ಟು 83 ಶೀರ್ಷಿಕೆಗಳ ಒಟ್ಟು 6,76,997 ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿತ್ತು. ಇಷ್ಟೊಂದು ಸಂಖ್ಯೆಯಲ್ಲಿರುವ ಪಠ್ಯಪುಸ್ತಕಗಳು 2022-23ನೇ ಸಾಲಿಗೆ ಅನುಪಯುಕ್ತವಾಗಿವೆ. ಆರರಿಂದ ಹತ್ತನೇ ತರಗತಿ ಸಮಾಜ ವಿಜ್ಞಾನದ ವಿಷಯದ ಪಠ್ಯಪುಸ್ತಕಗಳನ್ನು ಹಠಕ್ಕೆ ಬಿದ್ದು ಪರಿಷ್ಕರಿಸಿರುವುದರ ಪರಿಣಾಮ 2.5 ಕೋಟಿ ರೂ. ನಷ್ಟವಾಗಿರುವುದನ್ನು ಸ್ಮರಿಸಬಹುದು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News