"ಶಿಕ್ಷಣ ಕ್ಷೇತ್ರ ಉದ್ಯಮವಾಗಿದೆ, ದುಬಾರಿ ಫೀಸ್ ಪಾವತಿಸಲಾಗದೆ ವಿದ್ಯಾರ್ಥಿಗಳು ಉಕ್ರೇನ್‍ನಂತ ದೇಶಗಳಿಗೆ ತೆರಳುತ್ತಾರೆ"

Update: 2022-05-31 13:20 GMT

ಹೊಸದಿಲ್ಲಿ: "ದೇಶದಲ್ಲಿ ಶಿಕ್ಷಣ ಕ್ಷೇತ್ರ ಒಂದು ದೊಡ್ಡ ಉದ್ಯಮವಾಗಿ ಬಿಟ್ಟಿದೆ.  ವೈದ್ಯಕೀಯ ಕೋರ್ಸುಗಳಿಗೆ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಉಕ್ರೇನ್‍ನಂತಹ ದೇಶಗಳಿಗೆ ತೆರಳುತ್ತಾರೆ" ಎಂದು ಸುಪ್ರೀಂ ಖೋರ್ಟ್ ಇಂದು ಹೇಳಿದೆ.

ದೇಶದಲ್ಲಿ ಹೊಸ ಫಾರ್ಮಸಿ ಕಾಲೇಜುಗಳ ಸ್ಥಾಪನೆಗೆಂದು ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲು ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.

ದೇಶದಲ್ಲಿ ಫಾರ್ಮಸಿ ಕಾಲೇಜುಗಳು ನಾಯಿಕೊಡೆಗಳಂತೆ ತಲೆಯೆತ್ತುವುದನ್ನು ತಡೆಯಲು  ಹೊಸ ಕಾಲೇಜುಗಳ ಸ್ಥಾಪನೆಗೆ ಐದು ವರ್ಷ ತಡೆಯನ್ನು ಫಾರ್ಮಸಿ ಕೌನ್ಸಿಲ್ 2019ರಲ್ಲಿ ವಿಧಿಸಿತ್ತು. ಈ ನಿರ್ಧಾರವನ್ನು ದಿಲ್ಲಿ, ಕರ್ನಾಟಕ ಮತ್ತು ಛತ್ತೀಸಗಢ ಹೈಕೋರ್ಟ್‍ಗಳು ವಜಾಗೊಳಿಸಿದ್ದರೂ ಕೇಂದ್ರ ಮತ್ತು ಫಾರ್ಮಸಿ ಕೌನ್ಸಿಲ್ ಅದನ್ನು ಬೆಂಬಲಿಸಿದ್ದವು. ತರುವಾಯ ಹೈಕೋರ್ಟ್ ಆದೇಶಗಳ ವಿರುದ್ಧ ಫಾರ್ಮಸಿ ಕೌನ್ಸಿಲ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳು ಇನ್ನೂ ಬಾಕಿಯಿವೆ.

"ದೇಶದಲ್ಲಿ 2500ಕ್ಕೂ ಅಧಿಕ ಫಾರ್ಮಸಿ ಕಾಲೇಜುಗಳಿವೆ, ಇಂತಹ ಇನ್ನಷ್ಟು ಕಾಲೇಜುಗಳ ಸ್ಥಾಪನೆಯನ್ನು ತಡೆಯಲು ಐದು ವರ್ಷ ನಿರ್ಬಂಧ ವಿಧಿಸಲಾಗಿತ್ತು. ಇಂಜಿನಿಯರಿಂಗ್ ಕಾಲೇಜುಗಳನ್ನು ಶಾಪಿಂಗ್ ಸೆಂಟರ್‍ಗಳಂತೆ ಹೇಗೆ ನಡೆಸಲಾಗುತ್ತಿತ್ತು ಎಂದು ನ್ಯಾಯಾಲಯಕ್ಕೆ ತಿಳಿದಿದೆ" ಎಂದು ಸರಕಾರ ಮತ್ತು ಫಾರ್ಮಸಿ ಕೌನ್ಸಿಲ್ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಈ ವಾದವನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ಪೀಠ ಒಪ್ಪಿದರೂ ಅದೇ ಸಮಯ  ಫಾರ್ಮಸಿ ಕೌನ್ಸಿಲ್‍ನ ಮೇಲ್ಮನವಿ ಅರ್ಜಿಗಳನ್ನು  ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ಬರುವ ತನಕ ಫಾರ್ಮಸಿ ಕಾಲೇಜುಗಳ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಬೇಕೆಂದು ಹೇಳಿ ಫಾರ್ಮಸಿ ಕಾಲೇಜುಗಳ ಮನವಿಗೆ ನ್ಯಾಯಾಲಯ ಪೂರಕವಾಗಿ ಸ್ಪಂದಿಸಿದೆ.

"ಕಾಲೇಜುಗಳ ಆರಂಭಕ್ಕೆ ಅರ್ಜಿಯನ್ನು ಪರಿಗಣಿಸಿ, ಆದರೆ ಅಂತಿಮ ನಿರ್ಧಾರ ಮತ್ತು ಅನುಮೋದನೆ ನೀಡುವಂತಿಲ್ಲ" ಎಂದು ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News