ಗಾಯಕ ಕೆಕೆ ಗೌರವಾರ್ಥ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಗನ್ ಸೆಲ್ಯೂಟ್: ಮಮತಾ ಬ್ಯಾನರ್ಜಿ ಘೋಷಣೆ
Update: 2022-06-01 06:26 GMT
ಹೊಸದಿಲ್ಲಿ: ಕೋಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಹಾಡಿದ ಬಳಿಕ ಅಸ್ವಸ್ಥರಾಗಿ ಮೃತಪಟ್ಟಿರುವ 'ಕೆಕೆ' ಎಂದೇ ಖ್ಯಾತರಾಗಿರುವ ಗಾಯಕ ಕೃಷ್ಣಕುಮಾರ್ ಕುನ್ನತ್(53 ವರ್ಷ)ಅವರನ್ನು 'ಗೌರವಿಸಲು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ರಾಜ್ಯ ಸರಕಾರವು ಗನ್ ಸೆಲ್ಯೂಟ್ ನೀಡಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ತಿಳಿಸಿದೆ.
ದಕ್ಷಿಣ ಕೋಲ್ಕತ್ತಾದ ಕಿಕ್ಕಿರಿದು ತುಂಬಿದ್ದ ನಝ್ರುಲ್ ಮಂಚ್ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ 53 ವರ್ಷದ ಅಪ್ರತಿಮ ಗಾಯಕ ಅಸ್ವಸ್ಥರಾದ ನಂತರ ಅವರನ್ನು ಸಿಎಂಆರ್ ಐ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.