ಬಿಜೆಪಿ ನಾಯಕರ ಪ್ರವಾದಿ ವಿರುದ್ಧದ ಹೇಳಿಕೆ: ಕನಿಷ್ಠ 15 ರಾಷ್ಟ್ರಗಳ ಖಂಡನೆ

Update: 2022-06-07 15:33 GMT
ನೂಪುರ್ ಶರ್ಮ (Photo: Twitter)

ಹೊಸದಿಲ್ಲಿ,ಜೂ.7: ತಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಒತ್ತಿ ಹೇಳುವ ಮೂಲಕ ವಿವಿಧ ದೇಶಗಳಲ್ಲಿ ಭುಗಿಲೆದ್ದಿರುವ ಕ್ರೋಧದ ಅಲೆಯನ್ನು ಶಮನಗೊಳಿಸಲು ಭಾರತವು ಮುಂದಾಗಿದ್ದರೂ ಪ್ರವಾದಿ ಮುಹಮ್ಮದ್ರ ಕುರಿತು ಬಿಜೆಪಿ ನಾಯಕರಾದ ನೂಪುರ ಶರ್ಮಾ ಮತ್ತು ನವೀನ ಕುಮಾರ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆಗಳ ಕುರಿತು ರಾಜತಾಂತ್ರಿಕ ಆಕ್ರೋಶವು ಮುಂದುವರಿದಿದೆ.

ಇರಾಕ್,ಇರಾನ್,ಕುವೈತ್,ಖತರ್,ಸೌದಿ ಅರೇಬಿಯ,ಓಮನ್,ಯುಎಇ,ಜೋರ್ಡಾನ್,ಅಫ್ಘಾನಿಸ್ತಾನ್,ಪಾಕಿಸ್ತಾನ,ಬಹರಿನ್,ಮಾಲ್ದೀವ್ಸ್,ಲಿಬಿಯಾ,ಟರ್ಕಿ ಮತ್ತು ಇಂಡೋನೇಶ್ಯಾ ಸೇರಿದಂತೆ ಕನಿಷ್ಠ 15 ದೇಶಗಳು ವಿವಾದಾತ್ಮಕ ಹೇಳಿಕೆಗಳ ಕುರಿತು ಭಾರತದ ವಿರುದ್ಧ ಅಧಿಕೃತ ಪ್ರತಿಭಟನೆಗಳನ್ನು ದಾಖಲಿಸಿವೆ.ಹೇಳಿಕೆಗಳನ್ನು ಖಂಡಿಸಿರುವ ಈ ದೇಶಗಳು ಪ್ರವಾದಿಯವರಿಗೆ ಅವಮಾನಗಳನ್ನು ತಿರಸ್ಕರಿಸಿವೆ ಮತ್ತು ಭಾರತ ಸರಕಾರದಿಂದ ಕ್ಷಮಾಯಾಚನೆಯನ್ನು ಆಗ್ರಹಿಸಿವೆ.

ಇತ್ತ ಇಬ್ಬರು ಬಿಜೆಪಿ ನಾಯಕರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಡವನ್ನು ಹೆಚ್ಚಿಸಿರುವ ಪ್ರತಿಪಕ್ಷಗಳು,ಬಿಜೆಪಿಯು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸನ್ನು ಕೆಡಿಸುತ್ತಿದೆ ಎಂದು ಆರೋಪಿಸಿವೆ.

 ಆಕ್ಷೇಪಾರ್ಹ ಟ್ವೀಟ್ಗಳು ಮತ್ತು ಹೇಳಿಕೆಗಳು ಯಾವುದೇ ರೀತಿಯಲ್ಲಿಯೂ ಸರಕಾರದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಅವು ಗೌಣ ಶಕ್ತಿಗಳ ಅಭಿಪ್ರಾಯಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
 
ಪ್ರವಾದಿ ಮುಹಮ್ಮದ್ ರ ಕುರಿತು ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಅರಬ್ ರಾಷ್ಟ್ರಗಳಲ್ಲಿ ಎದ್ದಿರುವ ಸಿಟ್ಟಿನ ಅಲೆಯು ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಗಳೊಂದಿಗೆ ಮತ್ತು ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳನ್ನು ವ್ಯಾಪಿಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಬಿಜೆಪಿಯು ರವಿವಾರ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದ ನೂಪುರ್ ಶರ್ಮಾರನ್ನು ಅಮಾನತುಗೊಳಿಸಿತ್ತು ಮತ್ತು ಪಕ್ಷದ ದಿಲ್ಲಿ ಘಟಕದ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ನವೀನ್ ಕುಮಾರ ಜಿಂದಾಲ್ ಅವರನ್ನು ಉಚ್ಚಾಟಿಸಿತ್ತು. ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವ ಯಾವುದೇ ಸಿದ್ಧಾಂತವನ್ನು ತಾನು ಬಲವಾಗಿ ವಿರೋಧಿಸುತ್ತೇನೆ ಮತ್ತು ಇಂತಹ ಜನರನ್ನು ಹಾಗೂ ಸಿದ್ಧಾಂತಗಳನ್ನು ತಾನು ಉತ್ತೇಜಿಸುವುದಿಲ್ಲ ಎಂದು ಬಿಜೆಪಿ ಹೇಳಿಕೆಯಲ್ಲಿ ತಿಳಿಸಿತ್ತು. ಪ್ರವಾದಿಯವರ ಕುರಿತು ಹೇಳಿಕೆಗಳನ್ನು ಖಂಡಿಸಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯು ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ.
 ಖತರ್,ಇರಾನ್ ಮತ್ತು ಕುವೈತ್ ರವಿವಾರ ಭಾರತೀಯ ರಾಯಭಾರಿಗಳನ್ನು ಕರೆಸಿಕೊಂಡು ಹೇಳಿಕೆಗಳಿಗೆ ತಮ್ಮ ತೀವ್ರ ಪ್ರತಿಭಟನೆ ಮತ್ತು ಖಂಡನೆಗಳನ್ನು ವ್ಯಕ್ತಪಡಿಸಿದ್ದವು.


ವಿವಾದಾತ್ಮಕ ಹೇಳಿಕೆಗಳು ವಿವಿಧ ದೇಶಗಳಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್‌ಗಳಿಗೂ ಕಾರಣವಾಗಿವೆ.ದೇಶಾದ್ಯಂತ ಸರಣಿ ಕೋಮು ಘಟನೆಗಳ ಹಿನ್ನೆಲೆಯಲ್ಲಿ ಕಳೆದ ವಾರ ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಶರ್ಮಾ ಪ್ರವಾದಿಯವರ ಕುರಿತು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದರು. ಜಿಂದಾಲ್ ಅವರು ಪ್ರವಾದಿಯವರ ಕುರಿತು ಟ್ವೀಟ್ ಅನ್ನು ಪೋಸ್ಟ್ ಮಾಡಿ ನಂತರ ಅದನ್ನು ಅಳಿಸಿದ್ದರು.

ತನಗೆ ಜೀವ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್ ಶರ್ಮಾ ನೀಡಿದ ದೂರಿನ ಆಧಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸರು ಅವರಿಗೆ ಮತ್ತು ಅವರ ಕುಟುಂಬಕ್ಕೆ ಭದ್ರತೆಯನ್ನು ಒದಗಿಸಿದ್ದಾರೆ. ಪಕ್ಷದ ಹುದ್ದೆಯಿಂದ ಅಮಾನುತುಗೊಂಡ ಬಳಿಕ ಶರ್ಮಾ ಟ್ವಿಟರ್ ನಲ್ಲಿ ಕ್ಷಮೆಯಾಚನೆಯನ್ನು ಪೋಸ್ಟ್ ಮಾಡಿ,ಯಾರದೇ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದು ತನ್ನ ಉದ್ದೇಶವಾಗಿರಲಿಲ್ಲ ಎಂದು ಹೇಳಿದ್ದರು.ಬಿಜೆಪಿ ನಾಯಕರ ವಿವಾದಾತ್ಮಕ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಮ್ ರಾಷ್ಟ್ರಗಳೊಂದಿಗೆ ಸೋಮವಾರ ಧ್ವನಿಗೂಡಿಸಿರುವ ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ವು,ಈ ಹೇಳಿಕೆಗಳು ನೈತಿಕ ಮತ್ತು ಮಾನವೀಯ ವೌಲ್ಯಗಳು ಹಾಗೂ ತತ್ತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿದೆ. ಧಾರ್ಮಿಕ ಸಂಕೇತಗಳನ್ನು ಗೌರವಿಸುವ ಮತ್ತು ದ್ವೇಷಭಾಷಣಗಳಿಗೆ ಕಡಿವಾಣ ಹಾಕುವ ಅಗತ್ಯವನ್ನು ಅದು ಒತ್ತಿ ಹೇಳಿದೆ.

ಇಸ್ಲಾಮ್ನ ಪ್ರಮುಖ ಸಂಸ್ಥೆಗಳಲ್ಲೊಂದಾಗಿರುವ ಕೈರೋದ ಅಲ್ ಅಝರ್ ವಿವಿಯು,ಈ ಹೇಳಿಕೆಗಳು ನಿಜವಾದ ಭೀತಿವಾದವಾಗಿವೆ ಹಾಗೂ ಇಡೀ ಜಗತ್ತನ್ನು ಮಾರಣಾಂತಿಕ ಬಿಕ್ಕಟ್ಟು ಮತ್ತು ಯುದ್ಧಗಳ ಸಂಕಷ್ಟಕ್ಕೆ ತಳ್ಳಬಹುದು ಎಂದು ಸೋಮವಾರ ಹೇಳಿದೆ.

ಸೌದಿ ಅರೇಬಿಯದ ಮುಸ್ಲಿಮ್ ವರ್ಲ್ಡ್ ಲೀಗ್,ಈ ಹೇಳಿಕೆಗಳು ದ್ವೇಷವನ್ನು ಪ್ರಚೋದಿಸುತ್ತವೆ ಎಂದು ಹೇಳಿದರೆ ಸೌದಿಯ ಗ್ರಾಂಡ್ ಮಸೀದಿ ಮತ್ತು ಪ್ರವಾದಿಯವರ ಮಸೀದಿಯ ವ್ಯವಹಾರಗಳ ಜನರಲ್ ಪ್ರೆಸಿಡೆನ್ಸಿಯು,ಹೇಳಿಕೆಗಳನ್ನು ‘ಹೇಯ ಕೃತ್ಯ ’ಎಂದು ಬಣ್ಣಿಸಿದೆ.
ಶರ್ಮಾರ ಹೇಳಿಕೆಗಳನ್ನು ಆರು ಕೊಲ್ಲಿ ರಾಷ್ಟ್ರಗಳ ಗುಂಪಾಗಿರುವ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ)ಯು ಖಂಡಿಸಿದೆ ಮತ್ತು ತಿರಸ್ಕರಿಸಿದೆ.
ಬಹರೀನ್,ಕುವೈತ್,ಓಮನ್,ಖತರ್,ಯುಎಇ ಮತ್ತು ಸೌದಿ ಅರೇಬಿಯಗಳನ್ನು ಒಳಗೊಂಡಿರುವ ಜಿಸಿಸಿ ಜೊತೆ 2020-21ರಲ್ಲಿ ಭಾರತವು 90 ಶತಕೋಟಿ ಡಾ.ಗಳ ವ್ಯಾಪಾರವನ್ನು ನಡೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News