ಕಾರು ಢಿಕ್ಕಿ: ಪಾದಚಾರಿ ಮೃತ್ಯು
Update: 2022-06-17 15:59 GMT
ಬೈಂದೂರು : ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಾಗೂರು ಎಂಬಲ್ಲಿ ಕಿರಿಮಂಜೇಶ್ವರ ಗ್ರಾಪಂ ಕಾರ್ಯಾಲಯದ ಎದುರು ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಜೂ.೧೬ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ನಾಗೂರು ನಿವಾಸಿ ವೆಂಕಟೇಶ ಶ್ಯಾನುಭಾಗ್ ಎಂಬವರ ಮಗ ಸದಾಶಿವ ಶ್ಯಾನುಭಾಗ್(೪೪) ಎಂದು ಗುರುತಿಸಲಾಗಿದೆ. ಇವರು ನಾಗೂರಿನ ಹಾಲು ಡೈರಿಗೆ ಹಾಲನ್ನು ಕೊಟ್ಟು ವಾಪಾಸ್ಸು ಮನೆಗೆ ಬರಲು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ದರು. ಆಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರು ಎದುರಿನ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಸದಾಶಿವ ಶ್ಯಾನುಭಾಗ್ರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತರುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.