ನೇಪಾಳದ ಕಠ್ಮಂಡುವಿನಲ್ಲಿ ಪಾನಿಪೂರಿ ಮಾರಾಟ ನಿಷೇಧ: ಕಾರಣವೇನು ಗೊತ್ತೇ?
ಕಠ್ಮಂಡು, ಜೂ.27: ನೇಪಾಳ ರಾಜಧಾನಿ ಕಠ್ಮಂಡು ಕಣಿವೆಯ ಲಲಿತ್ಪುರ ಮೆಟ್ರೊಪಾಲಿಟನ್ ನಗರದಲ್ಲಿ ಕಾಲರಾ ಪ್ರಕರಣ ತೀವ್ರ ಗತಿಯಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪಾನಿಪೂರಿ ಮಾರಾಟವನ್ನು ನಿಷೇಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಲಲಿತ್ಪುರದಲ್ಲಿ ಕಾಲರಾದ 12 ಪ್ರಕರಣ ವರದಿಯಾಗಿದೆ. ಪಾನಿಪೂರಿಗೆ ಬಳಸುವ ನೀರಿನಲ್ಲಿ ಕಾಲರಾ ಬ್ಯಾಕ್ಟೀರಿಯಾ ಪತ್ತೆಯಾಗಿರುವುದರಿಂದ ಪಾನಿಪೂರಿ ಮಾರಾಟವನ್ನು ನಿಷೇಧಿಸಲು ನಿರ್ಧರಿಸಲಾಗಿದೆ. ಜನಸಂದಣಿಯ ಪ್ರದೇಶದಲ್ಲಿ ಹಾಗೂ ಕಾರಿಡಾರ್ ಪ್ರದೇಶದಲ್ಲಿ ಪಾನಿಪೂರಿ ಮಾರಾಟ ಮಾಡದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಠ್ಮಂಡು ಕಣಿವೆಯಲ್ಲಿ ರವಿವಾರ ಮತ್ತೆ 5 ಕಾಲರಾ ಪ್ರಕರಣ ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 12ಕ್ಕೇರಿದೆ. ಕಾಲರಾ ಮತ್ತಷ್ಟು ಹೆಚ್ಚುವ ಅಪಾಯವಿದೆ ಎಂದು ಲಲಿತ್ಪುರ ಪುರಸಭಾ ಪೊಲೀಸ್ ಠಾಣೆಯ ಮುಖ್ಯಸ್ಥ ಸೀತಾರಾಮ್ ಹಚೇಥು ಹೇಳಿದ್ದಾರೆ.
ಕಾಲರಾದ ಲಕ್ಷಣ ಕಾಣಿಸಿಕೊಂಡಲ್ಲಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಬೇಸಿಗೆ ಮತ್ತು ಮಳೆಗಾಲದಲ್ಲಿ ನೀರಿನಿಂದ ಹರಡುವ ಕಾಲರಾ, ಅತಿಸಾರ ಮುಂತಾದ ಕಾಯಿಲೆಗಳು ಹರಡುವುದರಿಂದ ಜನತೆ ಎಚ್ಚರಿಕೆ ವಹಿಸಬೇಕು ಎಂದು ನೇಪಾಳದ ಆರೋಗ್ಯ ಇಲಾಖೆ ಸೂಚಿಸಿದೆ.