ಕಾಪು: ಸಾಫ್ಟ್ವೇರ್ ಉದ್ಯೋಗಿ ಯುವತಿ ಆತ್ಮಹತ್ಯೆ
ಕಾಪು: ಬೆಂಗಳೂರಿನ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದು, ಇಂದು ಬೆಳಗ್ಗೆಯಷ್ಟೇ ಇನ್ನಂಜೆ ಗ್ರಾಮದ ಮಡುಂಬುವಿನ ತನ್ನ ಮನೆಗೆ ಬಂದಿದ್ದ ಯುವತಿಯೊಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ವರದಿಯಾಗಿದೆ.
ಮಡುಂಬು ಕೊಲ್ಲಂಗಾಲ್ ಹೌಸ್ನ ಗೋಪಾಲ ಶೆಟ್ಟಿ ಎಂಬವರ ಪುತ್ರಿ ಶರ್ಮಿಳಾ ಶೆಟ್ಟಿ (22) ಮೃತ ಯುವತಿ. ಈಕೆ ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರೆಂದು ಹೇಳಲಾಗಿದೆ. ಮೂರು ದಿನಗಳ ಹಿಂದೆ ಯಾರಿಗೂ ಹೇಳದೆ ಪಿಜಿಯಿಂದ ಕುಣಿಗಲ್ಗೆ ಹೋಗಿದ್ದ ಆಕೆ, 28ರಂದು ಮನೆಗೆ ಕರೆ ಮಾಡಿ ತಾನು 30ರಂದು ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಇಂದು ಬೆಳಗ್ಗೆ ಮನೆಗೆ ಬಂದವರು ಶೌಚಾಲಯಕ್ಕೆಂದು ಹೋದವರು ಎಷ್ಟು ಹೊತ್ತಾದರೂ ಬಾರದಿರುವುದನ್ನು ನೋಡಿ ಹುಡುಕಾಡಿದಾಗ ಆಕೆಯ ಮೃತದೇಹ ಮನೆ ಪಕ್ಕದ ಬಾವಿಯಲ್ಲಿ ಪತ್ತೆಯಾಯಿತು. ಮಾನಸಿಕ ಖಿನ್ನತೆಯ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರಬೇಕೆಂದು ಶಂಕಿಸಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.