​ಮರವಂತೆ ಸಮುದ್ರಕ್ಕೆ ಬಿದ್ದ ಕಾರು: ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ

Update: 2022-07-03 16:01 GMT

ಗಂಗೊಳ್ಳಿ : ಕಾರೊಂದು ನಿಯಂತ್ರಣ ತಪ್ಪಿ ರಸ್ತೆಬದಿಯ ಸಮುದ್ರಕ್ಕೆ ಬಿದ್ದ ಪರಿಣಾಮ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿ, ಇಬ್ಬರು ಗಾಯಗೊಂಡ ಭೀಕರ ಘಟನೆ ಮರವಂತೆ ಬೀಚ್‌ನ ವರಹ ಮಹಾರಾಜಸ್ವಾಮಿ ದೇವಸ್ಥಾನದ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಜು.೩ರಂದು ನಸುಕಿನ ವೇಳೆ ೧:೫೦ರ ಸುಮಾರಿಗೆ ನಡೆದಿದೆ.

ಮೃತರನ್ನು ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್‌ನ ಮಾಲಕ ರಮೇಶ್ ಆಚಾರ್ಯ ನೇರಂಬಳ್ಳಿ ಎಂಬವರ ಪುತ್ರ ವಿರಾಜ್ ಆಚಾರ್ಯ (30) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇವರ ಸಹೋದರ ಸಂಬಂಧಿ, ಕುಂದಾಪುರದ ರೋಶನ್ ಆಚಾರ್ಯ(23) ಎಂಬವರ ಸಮುದ್ರ ಪಾಲಾಗಿದ್ದಾರೆ. ಉಳಿದಂತೆ ಸಂದೇಶ್ ಹಾಗೂ ಕಾರ್ತಿಕ್ ಆಚಾರ್ಯ ಎಂಬವರು ಗಾಯಗೊಂಡು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿರಾಜ್ ಆಚಾರ್ಯ ಕುಮಟಾದಲ್ಲಿ ಮಾರ್ಬಲ್ ವ್ಯವಹಾರ ಮಾಡಿ ಕೊಂಡಿದ್ದು, ರಜಾ ದಿನ ಆಗಿರುವ ರವಿವಾರ ತಿರುಗಾಡುವುದಕ್ಕೆ ತಮ್ಮ ಸ್ನೇಹಿತ ರನ್ನು ಕಾರಿನಲ್ಲಿ ಅಲ್ಲಿಗೆ ಕರೆದು ಕೊಂಡು ಹೋಗುತ್ತಿದ್ದ ಎನ್ನಲಾಗಿದೆ.

ವಿರಾಜ್ ಆಚಾರ್ಯ ಚಲಾಯಿಸುತ್ತಿದ್ದ ಕಾರಿನಲ್ಲಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸು ತ್ತಿದ್ದರು. ಕುಂದಾಪುರದಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಕಾರು, ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಕನ ನಿಯಂತ್ರಣ ತಪ್ಪಿರಸ್ತೆ ಬದಿಯಲ್ಲಿರುವ ತಡೆಪಟ್ಟಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.

ಅಲ್ಲಿಂದ ಪಲ್ಟಿಯಾದ ಕಾರು, ಸುಮಾರು 40 ಅಡಿ ಕೆಳಕ್ಕೆ ಉರುಳಿದೆ.  ಸಮುದ್ರದ ತಡೆಗೋಡೆಗಳಿಗೆ ಹಾಕಲಾಗಿದ್ದ ಬಂಡೆಕಲ್ಲುಗಳ ಮೇಲೆ ಬಿದ್ದ ಕಾರು, ಸಮುದ್ರದ ನೀರಿಗೆ ಬಿತ್ತೆನ್ನಲಾಗಿದೆ. ಕಾಪು ಪಲ್ಟಿಯಾದ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ವಿರಾಜ್ ಆಚಾರ್ಯ ಸ್ಥಳದಲ್ಲಿಯೇ ಮೃತಪಟ್ಟರು. ರೋಶನ್ ಸಮುದ್ರದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆನ್ನಲಾಗಿದೆ. ಕಾರಿನಲ್ಲಿದ್ದ ಸಂದೇಶ್ ಹಾಗೂ ಕಾರ್ತಿಕ್ ಕಾರಿನಿಂದ ಹೊರಕ್ಕೆ ಬಿದ್ದು ಗಾಯಗೊಂಡರು.

ಕಾರ್ಯಾಚರಣೆಗೆ ಮಳೆ ಅಡ್ಡಿ

ಗಾಯಾಳುಗಳ ಪೈಕಿ ಸಂದೇಶ್ ರಾಷ್ಟ್ರೀಯ ಹೆದ್ದಾರಿಗೆ ಬಂದು ಸಹಾಯಕ್ಕಾಗಿ ವಾಹನಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದರು. ಕೊನೆಗೆ ನಡೆದುಕೊಂಡೆ ಸುಮಾರು ಎರಡು ಕಿ.ಮೀ. ದೂರದ ತ್ರಾಸಿ ಜಂಕ್ಷನ್‌ಗೆ ಬಂದು ಅಲ್ಲಿದ್ದ ಕೆಲವರಿಗೆ ವಿಷಯ ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿ, ಕಲ್ಲು ಬಂಡೆಗಳ ಮಧ್ಯೆ ಗಾಯಗೊಂಡು ಬಿದ್ದಿದ್ದ ಕಾರ್ತಿಕ್‌ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು.

ಸಮುದ್ರದಲ್ಲಿ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಲು ಆಪತ್ಭಾಂಧವ ಇಬ್ರಾಹಿಂ ಗಂಗೊಳ್ಳಿ ತಂಡ ಸ್ಥಳೀಯರ ಸಹಕಾರದಿಂದ ಪ್ರಯತ್ನಿಸಿತು. ಆದರೆ ನಿರಂತರ ಸುರಿಯುತ್ತಿರುವ ಮಳೆ ಹಾಗೂ ಕಡಲಿನ ಅಬ್ಬರದ ಅಲೆಗಳಿಂದ ಅದು ಸಾಧ್ಯ ವಾಗಲಿಲ್ಲ. ಬೆಳಗ್ಗೆ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕಾರನ್ನು ಮೇಲಕ್ಕೆ ಎತ್ತಿದರು ಎಂದು ತಿಳಿದುಬಂದಿದೆ. ಅಪಘಾತದಿಂದ ಹಾಗೂ ಸಮುದ್ರದ ಅಲೆಗಳಿಂದಾಗಿ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ ಕುಮಾರ್ ಕೊರ್ಲಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೋಶನ್‌ಗಾಗಿ ಸಂಜೆಯವರೆಗೂ ಶೋಧ

ಅಪಘಾತದಿಂದ ಕಾರಿನಲ್ಲಿದ್ದ ರೋಶನ್ ಸಮುದ್ರದ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿರುವ ಬಗ್ಗೆ ಶಂಕಿಸಲಾಗಿದ್ದು, ಅವರಿಗಾಗಿ ಸಂಜೆಯವರೆಗೂ ಶೋಧ ಕಾರ್ಯ ನಡೆಸಲಾಯಿತು.

ಮುಳುಗು ತಜ್ಞರು, ಇಹ್ರಾಹಿಂ ಗಂಗೊಳ್ಳಿ, ಪೊಲೀಸರು, ಸ್ಥಳೀಯರು, ರೋಶನ್ ಕುಟುಂಬದವರು, ಸ್ನೇಹಿತರು ಮರವಂತೆ ಬಳಿ ಮೊಕ್ಕಾಂ ಹೂಡಿದ್ದು, ಸಂಜೆಯವರೆಗೆ ಶೋಧ ನಡೆಸಿದರು. ಆದರೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News