ರಾ.ಹೆ. ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ; ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ

Update: 2022-07-06 15:44 GMT

ಉಡುಪಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಿಲ್ಲಾಡಳಿದಿಂದ ಹಲವು ಬಾರಿ ಹೆದ್ದಾರಿಯ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸೂಚನೆಗಳನ್ನು ನೀಡಿದ್ದರೂ, ಯಾವುದೇ ಕ್ರಮಗಳು ಪೂರ್ಣ ಪ್ರಮಾಣದಲ್ಲಿ ಆಗದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರಿಗೆ ನಿರ್ದೇಶ ನೀಡಿದರು.

ಬುಧವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ, ಜಿಲ್ಲೆಯ ಪ್ರಾಕೃತಿಕ ವಿಕೋಪ ಪರಿಸ್ಥಿತಿಯ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸಲು ಉಂಟಾಗುತ್ತಿರುವ ಸಂಕಷ್ಟದ ಕುರಿತಂತೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು  ಬರುತ್ತಿವೆ. ಈ ಬಗ್ಗೆ ಚರ್ಚಿಸಲು ಸಭೆಗೆ ಹಾಜರಾಗುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅವರು  ಹಾಜರಾಗದೇ ಗುತ್ತಿಗೆದಾರರ ಇಂಜಿನಿಯರ್‌ಗಳು ಹಾಜರಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು, ಎಲ್ಲಾ ವಿಷಯಗಳನ್ನು ವಿವರಿಸಿ ಮುಖ್ಯ ಕಾರ್ಯದರ್ಶಿ ಗಳಿಗೆ ಪತ್ರ ಬರೆಯುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಅಸಮರ್ಪಕ ನಿರ್ಮಾಣ ಕಾಮಗಾರಿಯಿಂದ ರಸ್ತೆ ಅಪಘಾತಗಳು ಉಂಟಾ ದಲ್ಲಿ ಸಂಬಂಧಿಸಿದ ಇಂಜಿನಿಯರ್ ಮೇಲೆ ಕಾನೂನು ಪ್ರಕರಣಗಳನ್ನು ದಾಖಲಿಸುವಂತೆಯೂ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.

ಮಳೆನೀರು ರಸ್ತೆಯಲ್ಲಿ ಎಲ್ಲೆಂದರಲ್ಲಿ ನಿಂತು ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಈ ರಸ್ತೆಗಳ ಬದಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಬೇಕು. ರಾತ್ರಿ ವೇಳೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲು ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸ ಬೇಕು ಎಂದೂ ಅವರು ಸೂಚನೆಗಳನ್ನು ನೀಡಿದರು.

ಅತಿವೃಷ್ಟಿಯಿಂದಾಗಿ ಮನೆಗಳಿಗೆ  ಹಾನಿ ಉಂಟಾದ ಸಂದರ್ಭದಲ್ಲಿ ನಷ್ಠ ಪರಿಹಾರ ಲೆಕ್ಕಹಾಕುವಾಗ ಹಾನಿಯ ವಸ್ತುಸ್ಥಿತಿಯನ್ನು ವೈಜ್ಞಾನಿಕವಾಗಿ ಅಂದಾ ಜಿಸಿ ಗ್ರಾಮ ಲೆಕ್ಕಿಗರು  ಪ್ರಾಥಮಿಕ ವರದಿಯನ್ನು ಸಲ್ಲಿಸಬೇಕು. ಅದರ ಆಧಾರದ ಮೇಲೆ  ಹಾನಿಯ ಪ್ರಮಾಣವನ್ನು ಇಂಜಿನಿಯರ್‌ಗಳು ನಿರ್ಧರಿಸುವುದು ಸೂಕ್ತ ಎಂದು ಸಚಿವ ಅಂಗಾರ ತಿಳಿಸಿದರು.

ಕೆಲವೊಮ್ಮೆ ಮಳೆ ನೀರಿನಿಂದ ಮನೆಗಳ ತಳಪಾಯವೇ ಹಾನಿಯಾದಲ್ಲಿ ಅಂತಹ ಮನೆಯನ್ನು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕಾಗುತ್ತದೆ. ಇಂಥ ಮನೆಗಳು ದುರಸ್ಥಿಗೆ ಯೋಗ್ಯವಾಗಿರುವುದಿಲ್ಲ.  ಇಂತಹವುಗಳನ್ನು ಅಂದಾಜಿಸುವಾಗ ಹಾನಿಯ ಸೂಕ್ಷ್ಮತೆಯನ್ನು ಆಧರಿಸಿ ವರದಿ ನೀಡಬೇಕಾಗುತ್ತದೆ ಎಂದವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಯಾವುದೇ ಕಟ್ಟಡ ಹಾಗೂ ಇತರೆ ಕಾಮಗಾರಿಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನಿರ್ಮಾಣ ಸ್ಥಳದ ವಸ್ತು ಸ್ಥಿತಿಗನುಗುಣವಾಗಿ ನೀಲಿ ನಕ್ಷೆಯನ್ನು ತಯಾರಿಸಿ ಕಾಮಗಾರಿ ಕೈಗೊಂಡರೆ ಮುಂಬರುವ ದಿನಗಳಲ್ಲಿ ಯಾವುದೇರೀತಿಯ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ನಿಗಾವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಕಡಲ ಕೊರೆತ ಸಾಮಾನ್ಯವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳುವುದು ಅನಿವಾರ್ಯವಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಡಕ್ ಫೂಟ್ ಅಥವಾ ಸೀವೇವ್ ಬ್ರೇಕ್ ತಂತ್ರಜ್ಞಾನ ಕಾಮಗಾರಿಗಳನ್ನು ಕೈಗೊಳ್ಳಲು ಅನುದಾನ ಬಿಡುಗಡೆಗೆ ಕರಾವಳಿ ಭಾಗದ ಎಲ್ಲಾ ಸಚಿವರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ ಎಂದರು.

ಪೂರ್ಣ ಪ್ರಮಾಣದ ಮನೆ ಹಾನಿಗೊಳಗಾದವರಿಗೆ ಎನ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ಮೊತ್ತದ ಜೊತೆಗೆ ನೂತನ ಗೃಹ ನಿರ್ಮಾಣಕ್ಕೆ ವಸತಿ ಯೋಜನೆಯಡಿ ಸೌಲಭ್ಯವನ್ನು ಒದಗಿಸಿ ಶಾಶ್ವತ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಸಿಡಿಲು ಪ್ರಕರಣಗಳು ಹೆಚ್ಚಾಗಿ ಬಯಲು ಪ್ರದೇಶ ಹೊಂದಿರುವ ಕಾರ್ಕಳ ತಾಲೂಕಿನಲ್ಲಿ ಸಂಭಸುತ್ತಿವೆ. ಕಳೆದ ೫ ವರ್ಷಗಳಿಂದ ಉಂಟಾಗಿರುವ ಇಂತಹ ಪ್ರಕರಣಗಳ ಮಾಹಿತಿಗಳನ್ನು ಕ್ರೂಡೀಕರಿಸಿ ತಜ್ಞರಿಂದ ವಿಶ್ಲೇಷಣಾತ್ಮಕ ವರದಿ ತಯಾರಿಸಿ, ಸಿಡಿಲಿನಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.  

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್,ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಪ್ರಸನ್ನ ಹೆಚ್, ಎಸ್ಪಿ ವಿಷ್ಣುವರ್ಧನ್, ಡಿಎಫ್‌ಓ ಆಶೀಶ್ ರೆಡ್ಡಿ ಹಾಗೂ ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಈವರೆಗೆ ೧೧. ಕೋಟಿ ರೂ.ನಷ್ಟ

ಜಿಲ್ಲೆಯಲ್ಲಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ ೨ ಮನೆಗಳು ಪೂರ್ಣ ಪ್ರಮಾಣದಲ್ಲಿ, ೪೮ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಜನವರಿಯಿಂದ ಈವರೆಗೆ ಸಿಡಿಲು ಬಡಿತಕ್ಕೆ ಒಂದು ಮಾನವ ಜೀವ ಹಾನಿ, ೨ ಜಾನುವಾರು ಹಾನಿ, ಪೂರ್ಣ ಪ್ರಮಾಣದ ಮನೆ ಹಾನಿ ೧೦ ಆಗಿದ್ದು, ೧೮೯ ಮನೆಗಳಿಗೆ ಭಾಗಶಃ ಹಾನಿ ಉಂಟಾಗಿರುತ್ತದೆ.

ಜಿಲ್ಲೆಯಲ್ಲಿ ಈವರೆಗೆ ೧೦.೬೩ ಕೋಟಿ ರೂ.ನಷ್ಟು ಅಂದಾಜು ನಷ್ಟವಾಗಿದ್ದು, ಮೂಲಸೌಕರ್ಯಗಳಾದ ರಸ್ತೆ, ಸೇತುವೆ, ವಿದ್ಯುತ್ ಸರಬರಾಜು ಪರಿಕರಗಳು, ಸರಕಾರಿ ಕಟ್ಟಡಗಳು ಸೇರಿದಂತೆ ಒಟ್ಟು ೧೧.೯೯ ಕೋಟಿ ರೂ.ನಷ್ಟು ನಷ್ಠದ  ಅಂದಾಜು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News