ರಾಜ್ಯಸಭೆ: ನಿರ್ಮಲಾ ಸೀತಾರಾಮನ್, ಜಗ್ಗೇಶ್ ಸೇರಿದಂತೆ 27 ನೂತನ ಸದಸ್ಯರಿಂದ ಪ್ರಮಾಣ ವಚನ ಸ್ವೀಕಾರ‌

Update: 2022-07-08 16:24 GMT

ಹೊಸದಿಲ್ಲಿ,ಜು.8: ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪಿಯೂಷ ಗೋಯಲ್ ಸೇರಿದಂತೆ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾಗಿರುವ 27 ಸದಸ್ಯರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯಸಭೆಯ ಚೇಂಬರ್ ನಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ 27 ಸದಸ್ಯರು 10 ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ. 12 ಸದಸ್ಯರು ಹಿಂದಿಯಲ್ಲಿ, ನಾಲ್ವರು ಇಂಗ್ಲೀಷ್ನಲ್ಲಿ, ತಲಾ ಇಬ್ಬರು ಸಂಸ್ಕೃತ,ಕನ್ನಡ, ಮರಾಠಿ ಮತ್ತು ಒಡಿಯಾದಲ್ಲಿ ಹಾಗೂ ತಲಾ ಓರ್ವರು ಪಂಜಾಬಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ನೂತನವಾಗಿ ಆಯ್ಕೆಗೊಂಡಿರುವ ಒಟ್ಟು 57 ರಾಜ್ಯಸಭಾ ಸದಸ್ಯರ ಪೈಕಿ ಇತರ ನಾಲ್ವರು ಇತ್ತೀಚಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಕಾಂಗ್ರೆಸಿನ ಜೈರಾಮ್ ರಮೇಶ್,‌ ವಿವೇಕ್ ಕೆ.ತಂಖಾ ಮತ್ತು ಮುಕುಲ್ ವಾಸ್ನಿಕ್,‌ ಬಿಜೆಪಿಯ ಜಗ್ಗೇಶ್‌, ಲೆಹರ್ ಸಿಂಗ್, ಸುರೇಂದ್ರ ಸಿಂಗ್ ನಗರ್,ಕೆ.ಲಕ್ಷ್ಮಣ ಮತ್ತು ಲಕ್ಷ್ಮೀಕಾಂತ್ ವಾಜಪೇಯಿ ಅವರೂ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ ನೂತನ ಸದಸ್ಯರಲ್ಲಿ ಸೇರಿದ್ದಾರೆ.
57 ನೂತನ ಸದಸ್ಯರ ಪೈಕಿ 14 ಜನರು ರಾಜ್ಯಸಭೆಗೆ ಪುನರಾಯ್ಕೆಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News