ತೀವ್ರಗೊಂಡ ತೈಲ ಬಿಕ್ಕಟ್ಟು: ಶ್ರೀಲಂಕಾದಲ್ಲಿ ಆಂಬ್ಯುಲೆನ್ಸ್ ಸೇವೆ ಸ್ಥಗಿತ
Update: 2022-07-11 18:27 GMT
ಕೊಲಂಬೊ, ಜು.11: ತೈಲ ಬಿಕ್ಕಟ್ಟು ತೀವ್ರಗೊಂಡಿರುವ ಶ್ರೀಲಂಕಾದಲ್ಲಿ ತುರ್ತು ಸೇವೆ ಒದಗಿಸುವ ಆಂಬ್ಯುಲೆನ್ಸ್ ಸೇವೆಯನ್ನು ಹಲವು ಪ್ರದೇಶಗಳಲ್ಲಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಆಂಬ್ಯುಲೆನ್ಸ್ ಸೇವೆಗೆ 1990 ಸಂಖ್ಯೆಗೆ ಕರೆಮಾಡುವುದು ಬೇಡ ಎಂದು ಸುವ ಸೆರಿಯಾ ಆಂಬ್ಯುಲೆನ್ಸ್ ಸೇವೆ ಜನತೆಯಲ್ಲಿ ಮನವಿ ಮಾಡಿಕೊಂಡಿದೆ ಎಂದು ಕೊಲಂಬೊ ಗಝೆಟ್ ವರದಿ ಮಾಡಿದೆ. ಬತ್ತಿಕಲೋವ, ಅನುರಾಧಪುರ, ಪೊಲೊನ್ನರುವ, ಪುಟ್ಟಾಲಂ, ಬದುಲ್ಲಾ, ಮೊನರಗಲ, ಹಂಬಂನ್ತೋಟ, ಮಟಾರ, ಗಾಲೆ, ಕಲುತರ, ಕೆಗಲ್ಲ, ರತ್ನಾಪುರ, ವವುನಿಯ ಮತ್ತು ಮುಲ್ಲತ್ತೀವು ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವರದಿ ಹೇಳಿದೆ. ಈ ಮಧ್ಯೆ, 3,700 ಮೆಟ್ರಿಕ್ ಟನ್ನಷ್ಟು ಎಲ್ಪಿಜಿ ಸರಕು ಹೊಂದಿರುವ ಹಡಗು ರವಿವಾರ ಶ್ರೀಲಂಕಾಕ್ಕೆ ಆಗಮಿಸಿದೆ ಎಂದು ಮೂಲಗಳು ಹೇಳಿವೆ.