×
Ad

'ಪಾದ್ರಿ, ಮೌಲ್ವಿ ಎಲ್ಲಿದ್ದಾರೆʼ?: ಸರಕಾರಿ ಕಾರ್ಯಕ್ರಮದಲ್ಲಿ ಅರ್ಚಕರಿಂದ ಭೂಮಿಪೂಜೆಗೆ ಡಿಎಂಕೆ ಸಂಸದರ ಆಕ್ಷೇಪ

Update: 2022-07-16 19:20 IST

ಚೆನ್ನೈ: ರಸ್ತೆ ಕಾಮಗಾರಿಗೆ ಮುನ್ನ ಕೇವಲ ಅರ್ಚಕರೊಬ್ಬರಿಂದ ‘ಭೂಮಿ ಪೂಜೆ’ನಡೆಸಿರುವ ಬಗ್ಗೆ ತಮಿಳುನಾಡಿನ ಡಿಎಂಕೆಯ  ಸಂಸದ ಎಸ್ ಸೆಂಥಿಲ್‌ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಂತಹ ಯಾವುದೇ ಕಾರ್ಯಕ್ರಮಕ್ಕೆ ಪ್ರಾರ್ಥನೆ ಸಲ್ಲಿಸಲು ಎಲ್ಲಾ ಧರ್ಮಗಳ ಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ಅವರು ಹೇಳಿದ್ದಾರೆ ಎಂದು PTI ವರದಿ ಮಾಡಿದೆ.

ಧರ್ಮಪುರಿ ಲೋಕಸಭಾ ಸಂಸದರು ತಮ್ಮ ತವರು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ, ʼಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನೆಯನ್ನು ಒಳಗೊಂಡಂತೆ ಸರ್ಕಾರಿ ಕಾರ್ಯಕ್ರಮವನ್ನು ನಡೆಸಬಾರದು ಎಂದು ನಿಮಗೆ ತಿಳಿದಿದೆಯೇʼ ಎಂದು ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

“ಸರ್, ಸರ್ಕಾರಿ ಕಾರ್ಯಕ್ರಮಗಳನ್ನು ಈ ರೀತಿ ನಡೆಸಬಾರದು ಎಂದು ನಿಮಗೆ ಸೂಚನೆ ಇದೆಯೇ? ನಿಮಗೆ ಇದರ ಅರಿವಿದೆಯೋ ಇಲ್ಲವೋ?” ಎಂದು ಅವರು ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. 

ಕೇಸರಿ ನಿಲುವಂಗಿಯನ್ನು ಧರಿಸಿದ್ದ ಹಿಂದೂ ಅರ್ಚಕನನ್ನು ತೋರಿಸುತ್ತಾ‌, “ಇದೇನು? ಬೇರೆ ಧರ್ಮಗಳ ಪ್ರತಿನಿಧಿಗಳು ಎಲ್ಲಿವೆ?, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಎಲ್ಲಿ? ಚರ್ಚ್ ಫಾದರ್, ಇಮಾಮ್ ಅವರನ್ನು ಆಹ್ವಾನಿಸಿ, ಯಾವುದೇ ಧರ್ಮವನ್ನು ಪ್ರತಿಪಾದಿಸದವರನ್ನು, ನಾಸ್ತಿಕರನ್ನು, ದ್ರಾವಿಡರ್ ಕಳಗಂ ಪ್ರತಿನಿಧಿಗಳನ್ನು ಆಹ್ವಾನಿಸಿ,” ಎಂದು ಸಂಸದರು ಅಧಿಕಾರಿಯನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ. (ಸಾಮಾಜಿಕ ನ್ಯಾಯ ಪ್ರತಿಪಾದಕ ಪೆರಿಯಾರ್ ಇ ವಿ ರಾಮಸಾಮಿ ಸ್ಥಾಪಿಸಿದ ವಿಚಾರವಾದಿ ಸಂಘಟನೆಯಾದ ದ್ರಾವಿಡರ್ ಕಳಗಂ ಆಡಳಿತಾರೂಢ ಡಿಎಂಕೆಯ ಮಾತೃಸಂಸ್ಥೆಯಾಗಿದೆ)

ತಮ್ಮನ್ನು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂದು ಗುರುತಿಸಿಕೊಂಡ ಅಧಿಕಾರಿ, ಸಂಸದರಲ್ಲಿ ಕ್ಷಮೆಯಾಚಿಸಿದರು. “ಇದು ದ್ರಾವಿಡ ಆಡಳಿತದ ಮಾದರಿ. ಇಲ್ಲಿ ಎಲ್ಲಾ ಧರ್ಮದ ಜನರಿಗಾಗಿ ಸರ್ಕಾರವಿದೆ, ”ಎಂದು ಸಂಸದರು ಅಧಿಕಾರಿಗೆ ತಿಳಿ ಹೇಳಿದ್ದಾರೆ.

ಪೂಜೆಗೆ ತಾನು ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆದಾಗ್ಯೂ, ಅಂತಹ ಸಂದರ್ಭಗಳಲ್ಲಿ ಎಲ್ಲಾ ನಂಬಿಕೆಗಳನ್ನು ಒಳಗೊಂಡಿರಬೇಕು ಎಂದು ಹೇಳಿದ್ದಾರೆ.  "ಎಲ್ಲರನ್ನು ಆಹ್ವಾನಿಸುವ ಮೂಲಕ ಇದನ್ನು ಮಾಡಿ” ಎಂದು ಸೆಂಥಿಲ್‌ಕುಮಾರ್ ತಮ್ಮ ಮತ್ತು ಅಧಿಕಾರಿಯ ನಡುವಿನ ಸಂಭಾಷಣೆಯ ಕಿರು ವೀಡಿಯೊವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. 

  ಧರ್ಮಪುರಿ ಜಿಲ್ಲೆಯ ರಸ್ತೆ ಯೋಜನೆಗಾಗಿಕೇವಲ ಹಿಂದೂ ಅರ್ಚಕರಿಂದ ಭೂಮಿಪೂಜೆ ನಡೆಸಲು ಸಿದ್ಧತೆ ನಡೆಸಿದ್ದನ್ನು ಉಲ್ಲೇಖಿಸಿದ ಸಂಸದರು, ಎಲ್ಲವನ್ನೂ ‘ತೆರವು’ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News