ಅಗ್ನಿಪಥ್ ಪ್ರತಿಭಟನೆಗಳಿಂದ ರೈಲ್ವೆಗೆ ರೂ 259.44 ಕೋಟಿ ನಷ್ಟ: ಮಾಹಿತಿ ನೀಡಿದ ರೈಲ್ವೆ ಸಚಿವ
Update: 2022-07-25 14:10 IST
ಹೊಸದಿಲ್ಲಿ: ಸೇನಾ ಪಡೆಗಳಿಗೆ ನೇಮಕಾತಿಗಾಗಿ ಕೇಂದ್ರ ಸರಕಾರ ಘೋಷಿಸಿದ ಅಗ್ನಿಪಥ್ ಯೋಜನೆಯ ವಿರುದ್ಧ ನಡೆದ ಪ್ರತಿಭಟನೆಗಳ ವೇಳೆ ಭಾರತೀಯ ರೈಲ್ವೆಗೆ ಸೇರಿದ ರೂ 259.44 ಕೋಟಿ ಮೌಲ್ಯದ ಸೊತ್ತುಗಳಿಗೆ ಹಾನಿಯುಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಗಳ ವೇಳೆ ದೇಶಾದ್ಯಂತ ಜೂನ್ 15 ರಿಂದ ಜೂನ್ 23ರ ನಡುವೆ 2,132 ರೈಲುಗಳನ್ನು ರದ್ದುಪಡಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪ್ರತಿಭಟನೆಗಳಿಂದ ರೈಲುಗಳು ರದ್ದಾದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ನೀಡಲಾದ ಮರುಪಾವತಿ ಕುರಿತಂತೆ ಪ್ರತ್ಯೇಕ ಮಾಹಿತಿ ಇಲ್ಲ ಎಂದು ಹೇಳಿದ ಸಚಿವರು ಅದೇ ಸಮಯ ಜೂನ್ 14 ರಿಂದ ಜೂನ್ 30ರ ನಡುವೆ ರೈಲು ರದ್ದತಿ ಹಿನ್ನೆಲೆಯಲ್ಲಿ ಅಂದಾಜು ರೂ 102.96 ಕೋಟಿ ಮರುಪಾವತಿ ಮಾಡಲಾಗಿದೆ ಎಂದು ಹೇಳಿದರು.