ರಾಷ್ಟ್ರಪತಿ ಪ್ರಮಾಣವಚನ ಸಮಾರಂಭದಲ್ಲಿ ವಿಪಕ್ಷ ನಾಯಕ ಖರ್ಗೆಗೆ ಅಗೌರವ: ವಿಪಕ್ಷಗಳ ಆರೋಪ
ಹೊಸದಿಲ್ಲಿ: ಇಂದು ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ವಿಪಕ್ಷ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒದಗಿಸಲಾದ ಆಸನ ವ್ಯವಸ್ಥೆಯ ಬಗ್ಗೆ ವಿಪಕ್ಷಗಳು ಕಿಡಿ ಕಾರಿವೆ ಹಾಗೂ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದೆ.
ಖರ್ಗೆ ಅವರು ಹೊಂದಿರುವ ಹುದ್ದೆಗೆ ತಕ್ಕಂತೆ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿಲ್ಲ ಎಂದು ಪತ್ರದಲ್ಲಿ ವಿವರಿಸಲಾಗಿದೆ. ವಿಪಕ್ಷ ನಾಯಕರೊಬ್ಬರಿಗೆ ನೀಡಬೇಕಾದ ಗೌರವಕ್ಕೆ ತಕ್ಕುದಾದ ಶಿಷ್ಟಾಚಾರದ ಅನುಸಾರ ಅವರಿಗೆ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, "ಕೇಂದ್ರ ಗೃಹ ಸಚಿವಾಲಯದ ಶಿಷ್ಟಾಚಾರದಂತೆ ಮೂರನೇ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ, ವಿಪಕ್ಷಗಳು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿವೆ" ಎಂದಿದ್ದಾರೆ.
ಆದರೆ ಹಿಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಿದಾಯ ಸಮಾರಂಭದಲ್ಲಿ ಖರ್ಗೆ ಅವರಿಗೆ ಪ್ರಥಮ ಸಾಲಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.
Letter submitted to Hon’ble Chairman, Rajya Sabha by all Opposition Parties (including TMC) just now. pic.twitter.com/tapyVKFS1s
— Jairam Ramesh (@Jairam_Ramesh) July 25, 2022