ಕಾಂಗ್ರೆಸ್ ಮುಖಂಡನ ‘ರಾಷ್ಟ್ರಪತ್ನಿ’ ಹೇಳಿಕೆಗೆ ಬಿಜೆಪಿ ಆಕ್ರೋಶ, ಸೋನಿಯಾ ಗಾಂಧಿಯಿಂದ ಕ್ಷಮೆಯಾಚನೆಗೆ ಆಗ್ರಹ
ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತ್ನಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧುರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದೆ.
ಸೋನಿಯಾ ಗಾಂಧಿ ವಿರುದ್ದ ವಾಗ್ದಾಳಿ ನಡೆಸಿರುವ ಇರಾನಿ, ಸೋನಿಯಾ ಅವರು ಆದಿವಾಸಿ ವಿರೋಧಿ, ದಲಿತ ವಿರೋಧಿ ಹಾಗೂ ಮಹಿಳಾ ವಿರೋಧಿ ಎಂದು ಜರೆದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಇದೊಂದು ಉದ್ದೇಶಪೂರ್ವಕ ಹೇಳಿಕೆ. ಪಕ್ಷದ ಪರವಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸಬೇಕೆಂದು ಹೇಳಿದರು.
ತನ್ನ ಹೇಳಿಕೆಗೆ ತಕ್ಷಣವೇ ಕ್ಷಮೆಯಾಚಿಸಿರುವ ರಂಜನ್ ಚೌಧುರಿ, ನಾಲಿಗೆ ತಪ್ಪಿ ಹಾಗೆ ಹೇಳಿದೆ. ಬಿಜೆಪಿ ಸದನದಲ್ಲಿ ಬೆಲೆ ಏರಿಕೆ, ಜಿಎಸ್ ಟಿ, ಅಗ್ನಿಪಥ ಸ್ಕೀಮ್, ನಿರುದ್ಯೋಗ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸುವುದರಿಂದ ದೂರ ಉಳಿಯಲು ಈ ವಿಚಾರವನ್ನು ಎತ್ತಿಕೊಂಡಿದೆ ಎಂದರು.
ಎನ್ ಡಿಟಿವಿಯೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ಚೌಧರಿ ಅವರು ಈಗಾಗಲೇ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂದರು.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕನಾಗಿರುವ ಚೌಧುರಿ ಹಲವು ಸಮಸ್ಯೆಗೆ ಸಂಬಂಧಿಸಿ ಪಕ್ಷ ನಡೆಸಿದ ಪ್ರತಿಭಟನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.