ಗುಜರಾತಿಗಳು, ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ತೊಲಗಿಸಿದರೆ ಮುಂಬೈ ವಾಣಿಜ್ಯ ರಾಜಧಾನಿಯಾಗಿ ಉಳಿಯದು: ಕೊಶಿಯಾರಿ
ಹೊಸದಿಲ್ಲಿ: ಗುಜರಾತಿಗಳು ಹಾಗೂ ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಹೊರ ಹಾಕಿದರೆ ರಾಜ್ಯದಲ್ಲಿ ಹಣ ಉಳಿಯುವುದಿಲ್ಲ ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ವಿವಾದಕ್ಕೆ ಸಿಲುಕಿದ್ದಾರೆ.
"ಮಹಾರಾಷ್ಟ್ರದಿಂದ ಅದರಲ್ಲೂ ಮುಂಬೈ ಮತ್ತು ಥಾಣೆಯಿಂದ ಗುಜರಾತಿಗಳು ಹಾಗೂ ರಾಜಸ್ಥಾನಿಗಳನ್ನು ತೊಲಗಿಸಿದರೆ ಇಲ್ಲಿ ಹಣ ಉಳಿಯುವುದಿಲ್ಲ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಾಗುವುದಿಲ್ಲ'' ಎಂದು ನಿನ್ನೆ ಭಾಷಣದ ವೇಳೆ ಮಹಾರಾಷ್ಟ್ರ ರಾಜ್ಯಪಾಲರು ಹೇಳಿದ್ದಾರೆ.
ಶಿವಸೇನೆ ಹಾಗೂ ಕಾಂಗ್ರೆಸ್ನ ಹಲವಾರು ನಾಯಕರು ಮಹಾರಾಷ್ಟ್ರ ರಾಜ್ಯಪಾಲರ ಹೇಳಿಕೆಗಳನ್ನು ಟೀಕಿಸಿದ್ದಾರೆ.
"ಕಷ್ಟಪಟ್ಟು ದುಡಿಯುವ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ'' ಎಂದಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ರಾಜ್ಯಪಾಲರ ಹೇಳಿಕೆಯನ್ನು ಇಂದು ಖಂಡಿಸಿದ್ದಾರೆ.
"ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ ಮರಾಠಿ ವ್ಯಕ್ತಿಗೆ ಅವಮಾನವಾಗುತ್ತಿದೆ" ಎಂದು ರಾವುತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಸಚಿನ್ ಸಾವಂತ್ ಕೂಡ ಈ ವೀಡಿಯೊವನ್ನು ಟ್ವೀಟ್ ಮಾಡಿ ರಾಜ್ಯಪಾಲರು ಈ ಹೇಳಿಕೆ ನೀಡಬಾರದಿತ್ತು ಎಂದು ಹೇಳಿದ್ದಾರೆ.
#WATCH | If Gujaratis and Rajasthanis are removed from Maharashtra, especially Mumbai and Thane, no money would be left here. Mumbai would not be able to remain the financial capital of the country: Maharashtra Governor Bhagat Singh Koshyari pic.twitter.com/l3SlOFMc0v
— ANI (@ANI) July 30, 2022