ಕೇಂದ್ರೀಯ ತೆರಿಗೆಗಳಲ್ಲಿ ಪಾಲು, ಓಂಬುಡ್ಸ್ಮನ್ ಪಾತ್ರಕ್ಕಾಗಿ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿಗಳ ಆಗ್ರಹ

Update: 2022-08-07 16:07 GMT

ಹೊಸದಿಲ್ಲಿ, ಆ.7: ರವಿವಾರ ಇಲ್ಲಿ ನೀತಿ ಆಯೋಗದ ಏಳನೇ ಆಡಳಿತ ಮಂಡಳಿ ಸಭೆಯಲ್ಲಿ ರಾಜ್ಯದ ಸಂಪನ್ಮೂಲಗಳ ಮೇಲೆ ಹೆಚ್ಚುತ್ತಿರುವ ಹೊರೆಯನ್ನು ಉಲ್ಲೇಖಿಸಿದ ಛತ್ತೀಸ್ಗಡ ಮುಖ್ಯಮಂತ್ರಿ ಭೂಪೇಶ್ ಬೇಲ್ ಅವರು, ಕೇಂದ್ರೀಯ ತೆರಿಗೆಗಳು ಮತ್ತು ಸುಂಕಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವಂತೆ ಕೇಂದ್ರವನ್ನು ಆಗ್ರಹಿಸಿದರು. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರೂ ಸಭೆಯಲ್ಲಿ ಉಪಸ್ಥಿತರಿದ್ದು, ನೀತಿ ಆಯೋಗವು ಒಂಬುಡ್ಸ್ಮನ್ ಪಾತ್ರವನ್ನು ವಹಿಸಿಕೊಳ್ಳಬಹುದು ಮತ್ತು ಕೇಂದ್ರೀಯ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯಗಳು ಮತ್ತು ಕೇಂದ್ರದ ನಡುವಿನ ವಿವಾದಗಳನ್ನು ಬಗೆಹರಿಸಬಹುದು ಎಂದು ಹೇಳಿದರು.

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಿದ್ದರು. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಹೊರತುಪಡಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದು ಜುಲೈ 2019ರ ಬಳಿಕ ಆಡಳಿತ ಮಂಡಳಿಯ ಮೊದಲ ಭೌತಿಕ ಸಭೆಯಾಗಿದೆ.

ಜಿಎಸ್ಟಿ ಪರಿಹಾರ ಕುರಿತಂತೆ, ನೂತನ ತೆರಿಗೆ ವ್ಯವಸ್ಥೆಯಿಂದಾಗಿ ರಾಜ್ಯವು ಆದಾಯ ಕೊರತೆಯನ್ನು ಎದುರಿಸುತ್ತಿದೆ ಎಂದು ಪ್ರತಿಪಾದಿಸಿದ ಬೇಲ್, ರಾಜ್ಯಗಳಿಗೆ ಪಾವತಿಸಲಾಗುವ ಪರಿಹಾರವನ್ನು ಜೂನ್ 2022 ರಾಚೆಗೆ ಐದು ವರ್ಷಗಳ ಅವಧಿಗೆ ವಿಸ್ತರಿಸುವಂತೆ ಕೋರಿದರು. ಕಲ್ಲಿದ್ದಲು ಸೇರಿದಂತೆ ಪ್ರಮುಖ ಖನಿಜಗಳ ಮೇಲಿನ ರಾಯಧನ ದರವನ್ನು ಪರಿಷ್ಕರಿಸುವಂತೆಯೂ ಅವರು ಕೇಂದ್ರವನ್ನು ಆಗ್ರಹಿಸಿದರು.

ರಾಜ್ಯ ಸರಕಾರವು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್)ಯಡಿ ನವಂಬರ್ 2004ರಿಂದ ಠೇವಣಿಯಿರಿಸಿರುವ ಹಣವನ್ನು ಸರಕಾರಿ ನೌಕರರ ಹಿತಾಸಕ್ತಿಯಲ್ಲಿ ಬಡ್ಡಿ ಸಂಚಯಗಳೊಡನೆ ಮರಳಿಸುವಂತೆಯೂ ಬೇಲ್ ಕೋರಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜಕೀಯ ಸಂಸ್ಥೆಗಳಾಗಿವೆ ಮತ್ತು ಕೆಲವೊಮ್ಮೆ ಕೇಂದ್ರೀಯ ಯೋಜನೆಗಳ ಅನುಷ್ಠಾನದಲ್ಲಿ ವಿವಾದಗಳು ಸೃಷ್ಟಿಯಾಗುತ್ತವೆ ಎನ್ನುವುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ನೀತಿ ಆಯೋಗವು ಓಂಬುಡ್ಸ್ಮನ್ ಪಾತ್ರವನ್ನು ವಹಿಸಿ ಈ ವಿವಾದಗಳನ್ನು ಬಗೆಹರಿಸಬಹುದಾಗಿದೆ ಎಂದು ಪಟ್ನಾಯಕ್ ಪ್ರತಿಪಾದಿಸಿದರು.

ದೂರಸಂಪರ್ಕ,ರೈಲ್ವೆ ಮತ್ತು ಬ್ಯಾಂಕಿಂಗ್ ನಂತಹ ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಒಡಿಶಾವನ್ನು ಐತಿಹಾಸಿಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಹೇಳಿದ ಅವರು, ಒಡಿಶಾಕ್ಕೆ ವಿಶೇಷ ಗಮನ ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು. ಒಡಿಶಾ ಹೆಚ್ಚುಕಡಿಮೆ ಪ್ರತಿವರ್ಷವೂ ನೈಸರ್ಗಿಕ ವಿಕೋಪಗಳಿಗೆ ತುತ್ತಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯನ್ನು ಪ್ರಸ್ತಾಪಿಸಿದ ಪಟ್ನಾಯಕ್, ಯೋಜನೆಯು ಕ್ಷೇತ್ರ ಮಟ್ಟದಲ್ಲಿ ಕೆಲವು ಅನುಷ್ಠಾನ ಸಮಸ್ಯೆಗಳನ್ನು ಹೊಂದಿದೆ ಮತ್ತು ಇದರಿಂದಾಗಿ ಕೆಲವು ಪ್ರಕರಣಗಳಲ್ಲಿ ನಿಜವಾದ ರೈತರು ವಂಚಿತರಾಗುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News