ಜೆಪಿ ಚಳವಳಿಯಿಂದ ಅಡ್ವಾಣಿ ರಥಯಾತ್ರೆವರೆಗೆ; ರಾಷ್ಟ್ರ ರಾಜಕಾರಣದ ಮೇಲೆ ಬಿಹಾರ ರಾಜಕೀಯ ಪ್ರಭಾವ ಹೀಗೆ..

Update: 2022-08-11 05:04 GMT

ಹೊಸದಿಲ್ಲಿ: ಪ್ರಾದೇಶಿಕ ಪಕ್ಷಗಳಿಂದ ಚಾಲಿತವಾಗಿ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಬದಲಾವಣೆಗಳಿಗೆ ಬಿಹಾರ ಕಾರಣವಾಗುತ್ತಿರುವುದು ಹೊಸದೇನೂ ಅಲ್ಲ. ಮಂಗಳವಾರದ ದಿಢೀರ್ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡು ಮಹಾಘಟಬಂಧನವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದ ಬಳಿಕ ರಾಜಕೀಯದ ಸಂಕೀರ್ಣ ಮ್ಯಾಟ್ರಿಕ್ಸ್ ಹಾಗೂ ಬಿಹಾರದ ಪಾತ್ರ ಮತ್ತೆ ಮುನ್ನಲೆಗೆ ಬಂದಿದೆ.

1970ರ ದಶಕದ ಬಿಹಾರ ವಿದ್ಯಾರ್ಥಿ ಚಳವಳಿಯಿಂದ ಹಿಡಿದು, ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂಪ್ರಸಾದ್ ಯಾದವ್ ಅವರು ಸಮಷ್ಟಿಪುರದಲ್ಲಿ ಲಾಲ್‍ಕೃಷ್ಣ ಅಡ್ವಾಣಿಯವರ ರಥಯಾತ್ರೆಯನ್ನು ತಡೆದ ಘಟನೆಯವರೆಗೆ ರಾಷ್ಟ್ರ ರಾಜಕಾರಣದ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಬೀರುವ ಘಟನಾವಳಿಗಳು ಬಿಹಾರದಲ್ಲಿ ಸಂಭವಿಸಿವೆ. ಇಂಥ ಘಟನೆಗಳು ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಬಿರುಕುಗಳಿಗೆ ಕಾರಣವಾಗಿರುವ, ಆಡಳಿತ ಪಕ್ಷಗಳನ್ನು ಅಧಿಕಾರದಿಂದ ಕಿತ್ತೆಸೆದಿರುವ ಅಥವಾ ಅನಿರೀಕ್ಷಿತ ಮತ್ತು ಅಸ್ಥಿರ ಮೈತ್ರಿಗಳ ಉದಯಕ್ಕೆ ಕಾರಣವಾದ ನಿದರ್ಶನಗಳಿವೆ.

ಬಿಹಾರದಲ್ಲಿ ವಿದ್ಯಾರ್ಥಿ ಚಳವಳಿಯಾಗಿ ಹುಟ್ಟಿಕೊಂಡು ಬಳಿಕ ಜೆಪಿ ಚಳವಳಿ ಎಂದು ಹೆಸರಾದ ಚಳವಳಿಯಲ್ಲಿ ಬಿಹಾರ ರಾಜಧಾನಿಯ ಗಾಂಧಿ ಮೈದಾನದಲ್ಲಿ ಜೆಪಿ ಮಾಡಿದ ಭಾಷಣ, ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲೂ ಪ್ರತಿಧ್ವನಿಸಿತ್ತು. ಈ ಚಳವಳಿ ಬಳಿಕ 1975-77ರ ಅವಧಿಯಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಲು ಕಾರಣವಾಯಿತು. ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಜೆಪಿ ಚಳವಳಿಯಲ್ಲಿ ಲಾಲೂ ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಬೆಸುಗೆ ಕುಡಿಯೊಡೆದಿತ್ತು ಎನ್ನುವುದು ಗಮನಾರ್ಹ.

ಇದೀಗ ನಿತೀಶ್ ಕುಮಾರ್ ಅವರ ನಡೆ 2024ರ ಲೋಕಸಭಾ ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಈ ಬೆಳವಣಿಗೆಗಳು ಪ್ರಾದೇಶಿಕ ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಪಾಟ್ನಾದ ಬಹುತೇಕ ವಿದ್ಯಾರ್ಥಿ ಮುಖಂಡರ ಅಭಿಮತ.

ಬಿಹಾರದ ಮುಖ್ಯಮಂತ್ರಿಯಾಗಿದ್ದ ಬಿ.ಪಿ.ಮಂಡಲ್ ನೇತೃತ್ವದ ಮಂಡಲ್ ಆಯೋಗದ ವರದಿ ಕೂಡಾ ರಾಷ್ಟ್ರ ರಾಜಕಾರಣದ ಮೇಲೆ ಭಾರಿ ಪರಿಣಾಮ ಬೀರಿತ್ತು. ವರದಿ ವಿರುದ್ಧ ಪ್ರತಿಭಟನೆಗಳು, ಆತ್ಮಾಹುತಿ ಪ್ರಯತ್ನಗಳೂ ನಡೆದಿದ್ದವು.

ಬಿಜೆಪಿ ಮುತ್ಸದ್ಧಿ ಲಾಲ್‍ಕೃಷ್ಣ ಆಡ್ವಾಣಿ ಗುಜರಾತ್‌ನ ಸೋಮನಾಥದಿಂದ ರಥಯಾತ್ರೆ ಆರಂಭಿಸಿ ಅಯೋಧ್ಯೆಯಲ್ಲಿ ಮುಕ್ತಾಯಗೊಳಿಸಿದ ಘಟನೆ ಇಂಥ ಮತ್ತೊಂದು ನಿದರ್ಶನ. ಮಂದಿರ ನಿರ್ಮಿಸುತ್ತೇವೆ ಎಂಬ ಘೋಷಣೆಯೊಂದಿಗೆ ಬಿಹಾರಕ್ಕೆ ಯಾತ್ರೆ ಆಗಮಿಸುತ್ತಿದ್ದಾಗಲೇ ಕೋಮು ಸಾಮರಸ್ಯಕ್ಕೆ ಧಕ್ಕೆ ಬರುವ ಸೂಚನೆ ಕಂಡ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರು ಅಡ್ವಾಣಿ ಬಂಧನಕ್ಕೆ ಐಎಎಸ್ ಅಧಿಕಾರಿ ಅರ್.ಕೆ.ಸಿಂಗ್‍ಗೆ ಸೂಚನೆ ನೀಡಿದ್ದರು. ಇದನ್ನು ಪ್ರತಿಭಟಿಸಿ ಬಿಜೆಪಿ ವಿ.ಪಿ.ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದು ಸರ್ಕಾರ ಪತನಕ್ಕೆ ಕಾರಣವಾಗಿತ್ತು ಎಂದು newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News