ಸರಕಾರಿ ಗೋಮಾಳದ 35 ಎಕರೆ ಜಮೀನು ಆರೆಸ್ಸೆಸ್ ಅಂಗಸಂಸ್ಥೆಗೆ ಮಂಜೂರು: ಸರಕಾರದ ಅನುಮೋದನೆ

Update: 2022-08-17 02:38 GMT

ಬೆಂಗಳೂರು, ಆ.17: ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರ ಸಾರ್ವಜನಿಕ ಉದ್ದೇಶಗಳಿಗೆಂದು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆ ಎಂದು ಹೇಳಲಾಗಿರುವ  ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ.

ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರಾಷ್ಟ್ರೋತ್ಥಾನ ಪರಿಷತ್, ರಾಷ್ಟ್ರೋತ್ಥಾನ ಟ್ರಸ್ಟ್‌ಗೆ ಗೋಮಾಳ, ಸರಕಾರಿ ಜಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿರುವುದು ಮುನ್ನೆಲೆಗೆ ಬಂದಿದೆ.

ಸದ್ಯ ಜನಸೇವಾ ಟ್ರಸ್ಟ್‌ಗೆ ಮಂಜೂರಾಗಲಿರುವ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಕೃಷಿ  ಜಮೀನು ಎಕರೆಯೊಂದಕ್ಕೆ  ಸರಕಾರಿ ಮಾರ್ಗಸೂಚಿ ಬೆಲೆಯು 1.20 ಕೋಟಿ ರೂ. ಇದೆ.  ಇದರ ಪ್ರಕಾರ 35.33 ಎಕರೆಗೆ 42.09 ಕೋಟಿ ರೂ. ಆಗಲಿದೆ. ಹಾಗೆಯೇ ಮುಕ್ತ ಮಾರುಕಟ್ಟೆಯಲ್ಲಿ ಒಂದು ಎಕರೆಗೆ  2 ಕೋಟಿ ರೂ. ಎಂದು ಅಂದಾಜಿಸಿದರೂ 35.33 ಗುಂಟೆಗೆ 70.66  ಕೋಟಿ ರೂ. ಮೌಲ್ಯವಿದೆ. 40 ಎಕರೆ ವಿಸ್ತೀರ್ಣದ ಗೋಮಾಳದಲ್ಲಿ ಆಶ್ರಯ ಯೋಜನೆಗಾಗಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಶಾಶ್ವತ ಪುನರ್ ವಸತಿ ಉದ್ದೇಶಕ್ಕೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಗೂ ಜಮೀನು ಕಾಯ್ದಿರಿಸಿದೆ. ಅಲ್ಲದೆ ಈ ಎರಡೂ ನಿಗಮಗಳು ಈ ಜಮೀನಿನಲ್ಲಿ ಸ್ವಾಧೀನ ಹೊಂದಿರುವುದು 2020ರಲ್ಲಿಮ ಮ್ಯುಟೇಷನ್ ದಾಖಲಾತಿಯಿಂದ ತಿಳಿದು ಬಂದಿದೆ.

ಜನಸೇವಾ ಟ್ರಸ್ಟ್ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ  ಜನಸೇವಾ ವಿಶ್ವಸ್ಥ ಮಂಡಳಿಗೆ 2009ರಲ್ಲಿ ಯಡಿಯೂರಪ್ಪ ಮೊದಲ ಬಾರಿ  ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ 6 ಎಕರೆ ಜಮೀನನ್ನು ನೀಡಲಾಗಿತ್ತು. ಈ ಕುರಿತು ಮಹಾಲೇಖಪಾಲರು (ಸಿಎಜಿ) ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರದಿ ಅಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ 
ರಾಮಲಿಂಗಾರೆಡ್ಡಿ ಅವರು ಪರಿಶೀಲನೆಗೆ ಕೈಗೆತ್ತಿಕೊಂಡಿದ್ದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈ  ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿರುವ ಬೆನ್ನಲ್ಲೇ  ಇದೀಗ ಜನಸೇವಾ ಟ್ರಸ್ಟ್‌ಗೆ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿರುವುದು ಸಿಎಜಿ ಆಕ್ಷೇಪಣೆಗೆ ಒಳಗಾಗುವ ಸಾಧ್ಯತೆಗಳಿವೆ.

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳ,  ಬೈಯಪ್ಪನಹಳ್ಳಿ, ಕಲುಬರಗಿಯಲ್ಲಿ   17 ಎಕರೆ , ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಸಿಎ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್ ಈಗಾಗಲೇ ಮಂಜೂರು ಮಾಡಿಸಿಕೊಂಡಿದೆ. ಹೊಸಪೇಟೆಯ ಜಂಬೂನಾಥನಹಳ್ಳಿಯಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು  ಸಲ್ಲಿಸಿರುವ  ಪ್ರಸ್ತಾವ ಸದ್ಯ ಚಾಲನೆಯಲ್ಲಿದೆ.  ಈ ಮಧ್ಯೆ  ಹಾವೇರಿಯಲ್ಲಿಯೂ 10 ಎಕರೆ ಮಂಜೂರಾತಿ ಸಂಬಂಧ ಪ್ರಸ್ತಾವೆ ಸಲ್ಲಿಸಬೇಕು  ಎಂದು ಹಾವೇರಿ ಜಿಲ್ಲಾಧಿಕಾರಿಗೆ 2022ರ ಆಗಸ್ಟ್  8ರಂದು ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿರುವುದನ್ನು ಸ್ಮರಿಸಬಹುದು.

ಬೆಂಗಳೂರಿನ ದಕ್ಷಿಣ ತಾಲೂಕಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿಶ್ವಸ್ಥ ಮಂಡಳಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ 2009ರ ಫೆಬ್ರುವರಿಯಲ್ಲಿ 6 ಎಕರೆಯನ್ನು ಮಂಜೂರು ಮಾಡಿತ್ತು. ಶೇ.50ರ ರಿಯಾಯಿತಿ ನೀಡಲಾಗಿದ್ದ ಮೂಲ ಆದೇಶವನ್ನು ಮಾರ್ಪಡಿಸಿದ್ದ ಅಂದಿನ ಸರಕಾರವು ಶೇ.75ರ ರಿಯಾಯಿತಿಯನ್ನಾಗಿ ಮಾರ್ಪಡಿಸಿತ್ತು. ಹಂಚಿಕೆಯನ್ನು ಪಡೆದವರ ಕೋರಿಕೆ ಮೇರೆಗೆ ರಿಯಾಯಿತಿ ನೀಡಲಾಗಿತ್ತು ಎಂದು ಸರಕಾರ ಹೇಳಿತ್ತಾದರೂ ಅಂತಹ ಕೋರಿಕೆ ಪತ್ರವು ದಾಖಲೆಗಳಲ್ಲಿ ಇರಲಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯವು ಒಂದು ಎಕರೆಗೆ 45 ಲಕ್ಷ ರೂ. ಆಗಿತ್ತು. ಆದರೆ ಹೆಚ್ಚುವರಿಯಾಗಿ ನೀಡಿದ್ದ ರಿಯಾಯಿತಿಯು 67.50 ಲಕ್ಷ ರೂ.ಯಾಗಿತ್ತು ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News