ಉಡುಪಿ: ಭಕ್ತ ಜನ ಸಾಗರದ ಮಧ್ಯೆ ವೈಭವದ ವಿಟ್ಲಪಿಂಡಿ ಸಂಪನ್ನ

Update: 2022-08-20 15:43 GMT

ಉಡುಪಿ : ಉಡುಪಿ ಶ್ರೀಕೃಷ್ಣ ಮಠದಲ್ಲಿ ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಸೀಮಿತ ಭಕ್ತರ ಸಮ್ಮುಖದಲ್ಲಿ ನಡೆದ ಶ್ರೀಕೃಷ್ಣನ ಜನ್ಮ ಹಾಗೂ ಬಾಲಲೀಲೆಗಳನ್ನು ನೆನಪಿಸುವ ವಿಟ್ಲಪಿಂಡಿಯು ಈ ಬಾರಿ ಶನಿವಾರ ಭಕ್ತ ಜನ ಸಾಗರದ ಮಧ್ಯೆ ವೈಭವದಿಂದ ಸಂಪನ್ನಗೊಂಡಿತು.

ಅಪರಾಹ್ಣ 3 ಗಂಟೆ ಸುಮಾರಿಗೆ ವಿಟ್ಲಪಿಂಡಿ ಉತ್ಸವ ಆರಂಭಗೊಂಡಿದ್ದು, ಶ್ರೀಕೃಷ್ಣ ಲೀಲೋತ್ಸವದ ವೈಭವದ ಶೋಭಾ ಯಾತ್ರೆಯಲ್ಲಿ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಪಾಲ್ಗೊಂಡರು.

ಈ ಉತ್ಸವಕ್ಕೆಂದು ವಿಶೇಷವಾಗಿ ತಯಾರಿಸಲಾದ ಮೃಣ್ಮಯಿ(ಮಣ್ಣಿನಲ್ಲಿ ತಯಾರಿಸಿದ ನೀಲಿ ಬಣ್ಣದ ಶ್ರೀಕೃಷ್ಣನ ಮೂರ್ತಿ) ಮೂರ್ತಿಯನ್ನು ಚಿನ್ನದ ರಥದಲ್ಲಿರಿಸಿ ರಥಬೀದಿಯ ಸುತ್ತ ಮೆರವಣಿಗೆ ನಡೆಸಲಾಯಿತು. ಇನ್ನೊಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ಉತ್ಸವ ಮೂರ್ತಿನ್ನಿರಿಸಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಸಲುವಾಗಿ ಮಣ್ಣಿನ ಮಡಕೆಯಲ್ಲಿ ಮೊಸರು, ಹಾಲು, ಓಕುಳಿಗಳನ್ನು ತುಂಬಿ ರಥಬೀದಿಯ ಸುತ್ತಲೂ ವಿಶೇಷವಾಗಿ ನಿರ್ಮಿಸಿದ ೧೩ ಗುರ್ಜಿಗಳಿಗೆ ಅವುಗಳನ್ನು ಕಟ್ಟಿ ಯಾದವ ವೇಷ ಧಾರಿಗಳಾದ ಉಡುಪಿಯ ಗೊಲ್ಲರು ಉದ್ದನೆಯ ಕೋಲುಗಳಿಂದ ಮಡಕೆಗಳನ್ನು ಒಡೆಯುವ ಆಟವನ್ನು ಆಡಿದರು.

ರಥಬೀದಿಯ ಅದಮಾರು ಮತ್ತು ಪುತ್ತಿಗೆ ಮಠದ ಮಧ್ಯಭಾಗದಲ್ಲಿ ಹಾಕ ಲಾದ ವೇದಿಕೆಯಲ್ಲಿ ಹುಲಿವೇಷ ಪ್ರದರ್ಶನವನ್ನು ಪರ್ಯಾಯ ಸ್ವಾಮೀಜಿ ಹಾಗೂ ಕಾಣಿಯೂರು ಸ್ವಾಮೀಜಿ ವೀಕ್ಷಿಸಿದರು. ಬಳಿಕ ಸ್ವಾಮೀಜಿಗಳು ಉಂಡೆ, ಚಕ್ಕುಲಿ ಹಾಗೂ ಹಣ್ಣು ಹಂಪಲುಗಳನ್ನು ಭಕ್ತ ಸಮೂಹದ ಮಧ್ಯೆ ಎಸೆದರು. ಸ್ವಾಮೀಜಿ ಎಸೆದ ಪ್ರಸಾದವನ್ನು ಸ್ವೀಕರಿಸಲು ಭಕ್ತರು ಮುಗಿ ಬಿದ್ದರು.  

ಮೆರವಣಿಗೆಯ ಕೊನೆಯಲ್ಲಿ ಚಿನ್ನದ ರಥದಲ್ಲಿರಿಸಿದ ಕೃಷ್ಣನ ಮಣ್ಣಿನ ಮೂರ್ತಿ ಯನ್ನು ಮಧ್ವ ಸರೋವರದಲ್ಲಿ ವಿಸರ್ಜಿಸುವುದರೊಂದಿಗೆ ಈ ಬಾರಿಯ ಕೃಷ್ಣ ಜನ್ಮ್ಟಾಮಿ ವಿಧಿಗಳು ಸಂಪನ್ನಗೊಂಡವು. ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಶೃದ್ಧೆ, ಭಕ್ತಿಗಳಿಂದ ವೈವಿಧ್ಯಮಯ ಕಾರ್ಯ ಕ್ರಮಗಳನ್ನು ವೀಕ್ಷಿಸಿ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಮೆರವಣಿಗೆಯಲ್ಲಿ ಹುಲಿವೇಷ, ಚಂಡೆ, ತಟ್ಟಿರಾಯ, ವಾದ್ಯ, ಕೃಷ್ಣ ವೇಷ, ರಕ್ಕಸ ವೇಷ, ಗಾಂಧೀಜಿ ವೇಷಗಳು ಕಂಡುಬಂದವು. ರಾಜಾಂಗಣದಲ್ಲಿ ಸಂಜೆ ಹುಲಿವೇಷ, ಜಾನಪದ ಕುಣಿತ ಸ್ಪರ್ಧೆಗಳು ನಡೆದವು. ಮಠದಲ್ಲಿ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.

ಶೋಭಾಯಾತ್ರೆ ಆರಂಭದಲ್ಲಿ ತಿಳಿ ಮಳೆಯು ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿಯಾಗಲಿಲ್ಲ. ಸಂಜೆ ವೇಳೆ ಸುರಿದ ಭಾರೀ ಮಳೆಯಿಂದಾಗಿ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತುಸು ತೊಂದರೆ ಅನುಭವಿಸಬೇಕಾಯಿತು.

ರಥಬೀದಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ವಿಟ್ಲಪಿಂಡಿಯಲ್ಲಿ ಸಹಸ್ರಾರು ಸಂಖ್ಯೆಯ ಭಕ್ತರು ಭಾಗಿಯಾಗಲಿದ್ದ ಹಿನ್ನೆಲೆ ಯಲ್ಲಿ ರಥಬೀದಿ, ರಾಜಾಂಗಣ ಪಾರ್ಕಿಂಗ್ ಪ್ರದೇಶ ಹಾಗೂ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಹಿರಿಯ ಪೊಲೀಸರು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆ ಯನ್ನು ಪರಿಶೀಲಿಸಿದರು. ಪೊಲೀಸ್ ಇಲಾಖೆಯಿಂದ ಕಿಸೆಗಳ್ಳರ ಬಗ್ಗೆ ಎಚ್ಚರ ವಹಿಸುವ ಕುರಿತು ಬ್ಯಾನರ್‌ಗಳನ್ನು ಅಲ್ಲಲ್ಲಿ ಅಳವಡಿಸಲಾಗಿತ್ತು. ನಗರದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕಂಡುಬಂತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News