ಬಿಹಾರ: ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ; 13 ಮಂದಿಯ ಬಂಧನ
Update: 2022-08-22 17:14 GMT
ಪಾಟ್ನಾ, ಆ. 21: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಗಾಲು ವಾಹನಕ್ಕೆ ಪಾಟ್ನಾದಲ್ಲಿ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಬಿಹಾರ ಪೊಲೀಸರು ರವಿರಾರ 13 ಮಂದಿಯನ್ನು ಬಂಧಿಸಿದ್ದಾರೆ.
ನಿತೀಶ್ ಕುಮಾರ್ ಅವರು ಆಗಸ್ಟ್ 22ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಅಂದಾಜಿಸಲು ಗಯಾದತ್ತ ತೆರಳುತ್ತಿದ್ದ ಭದ್ರತಾ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಶನಿವಾರ ಸಂಭವಿಸಿತ್ತು.
ನಾಪತ್ತೆಯಾಗಿದ್ದ ಬಾಲಕನೋರ್ವನ ಮೃತದೇಹ ಚರಂಡಿಯಲ್ಲಿ ಪತ್ತೆಯಾದ ಬಳಿಕ ಸೋಹ್ಗಿ ಗ್ರಾಮದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ರಸ್ತೆ ತಡೆ ನಡೆಸಿದ್ದರು. ಇದೆ ಸಂದರ್ಭ ಅದೇ ರಸ್ತೆಯಲ್ಲಿ ಆಗಮಿಸಿದ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಸುನ್ನಿ ಕುಮಾರ್ ಎಂದು ಗುರುತಿಸಲಾಗಿರುವ ಬಾಲಕ ಆಗಸ್ಟ್ 7ರಂದು ನಾಪತ್ತೆಯಾಗಿದ್ದಾನೆ ಎಂದು ಇಲ್ಲಿನ ಪೊಲೀಸ್ ಠಾಣೆ ಉಸ್ತುವಾರಿ ಕೃಷ್ಣ ಕುಮಾರ್ ಅವರು ಹೇಳಿದ್ದಾರೆ.