ಆರೆಸ್ಸೆಸ್ನಲ್ಲಿರುವವರೆಲ್ಲರೂ ಕೆಟ್ಟವರಲ್ಲ: ಮಮತಾ ಬ್ಯಾನರ್ಜಿ ಶ್ಲಾಘನೆ, ಪ್ರತಿಪಕ್ಷಗಳ ಆಕ್ರೋಶ
ಕೋಲ್ಕತ್ತಾ: ಆರೆಸ್ಸೆಸ್ನಲ್ಲಿರುವವರೆಲ್ಲರೂ "ಕೆಟ್ಟವರಲ್ಲ" ಹಾಗೂ "ಬಿಜೆಪಿಯನ್ನು ಬೆಂಬಲಿಸದ" ಅನೇಕರು ಅಲ್ಲಿದ್ದಾರೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (TMC chief Mamata Banerjee's)ಬುಧವಾರ ಪ್ರತಿಪಾದಿಸಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ' ಎಬ್ಬಿಸಿದೆ.
ಎಐಎಂಐಎಂ, ಕಾಂಗ್ರೆಸ್ ಹಾಗೂ ಸಿಪಿಎಂ ಗುರುವಾರ ಮಮತಾ ಬ್ಯಾನರ್ಜಿ ಹೇಳಿಕೆಗೆ ವಾಗ್ದಾಳಿ ನಡೆಸಿದರೆ, ಮಮತಾರಿಂದ ಪ್ರಮಾಣಪತ್ರಗಳ ಅಗತ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಈ ಕುರಿತು ಪ್ರತಿಕ್ರಿಯಿಸಿ "2003 ರಲ್ಲಿ ಮಮತಾ ಅವರು ಆರೆಸ್ಸೆಸ್ ಅನ್ನು 'ದೇಶಭಕ್ತರು' ಎಂದು ಕರೆದಿದ್ದರು, ಪ್ರತಿಯಾಗಿ ಆರೆಸ್ಸೆಸ್ ಅವರನ್ನು "ದುರ್ಗಾ" ಎಂದು ಕರೆದಿದೆ ಎಂದು ಹೇಳಿದರು. ಅವರ ಪ್ರಾಮಾಣಿಕತೆ ಹಾಗೂ ಸ್ಥಿರತೆಗಾಗಿ "ಟಿಎಂಸಿಯ 'ಮುಸ್ಲಿಂ ಮುಖಗಳು' ಅವರನ್ನು ಹೊಗಳುತ್ತವೆ ಎಂದು ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದರು.
ಉವೈಸಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಟಿಎಂಸಿ, ಪಕ್ಷವು ತನ್ನ ಜಾತ್ಯತೀತ ರುಜುವಾತುಗಳನ್ನು ಅವರಿಗೆ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಹೇಳಿದೆ.
"ಪ್ರತಿಯೊಂದು ಸಂಸ್ಥೆಯಲ್ಲಿಯೂ ಒಳ್ಳೆಯವರು ಹಾಗೂ ಕೆಟ್ಟವರು ಇದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಲು ಪ್ರಯತ್ನಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿ- ಆರೆಸ್ಸೆಸ್ ಅನ್ನು ಸೋಲಿಸಿದ ನಂತರ ನಾವು ನಮ್ಮ ಜಾತ್ಯತೀತ ರುಜುವಾತುಗಳನ್ನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ" ಎಂದು ಟಿಎಂಸಿ ಸಂಸದ ಸೌಗತ ರಾಯ್ ಹೇಳಿದ್ದಾರೆ.
ಮಮತಾ ಅವರು ಆರೆಸ್ಸೆಸ್ ಅನ್ನು ಹೊಗಳಿರುವುದು ಇದೇ ಮೊದಲಲ್ಲ. ದಿವಂಗತ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಎನ್ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದರು ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಗುರುವಾರ ಹೇಳಿದ್ದಾರೆ.
"ಮಮತಾ ಈ ಹಿಂದೆ RSS ನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಅವರು ಎಡರಂಗದ ಸರಕಾರವನ್ನು ಉರುಳಿಸಲು ಅವರ ಬೆಂಬಲವನ್ನು ಕೋರಿದ್ದರು. ಬಿಜೆಪಿಯ ಸೈದ್ಧಾಂತಿಕ ಪೋಷಕ ಎಂದು ಪರಿಗಣಿಸಲ್ಪಟ್ಟಿರುವ ನಾಗ್ಪುರ ಮೂಲದ ಆರೆಸ್ಸೆಸ್ ಗೆ ಬ್ಯಾನರ್ಜಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರು’’ ಎಂದು ಚೌಧರಿ ಹೇಳಿದ್ದಾರೆ.
"ಕಮ್ಯುನಿಸ್ಟರು ಬ್ಯಾನರ್ಜಿಯವರನ್ನು ಸೋಲಿಸುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಮಮತಾ ಹೇಳಿಕೆಗಳು ಆಕೆ ಆರೆಸ್ಸೆಸ್ ನ "ಉತ್ಪನ್ನ" ಎಂಬ ಎಡಪಕ್ಷದ ನಿಲುವನ್ನು ಸಮರ್ಥಿಸುತ್ತವೆ. ಬಿಜೆಪಿ ವಿರುದ್ಧ ಹೋರಾಟದಲ್ಲಿ ಟಿಎಂಸಿ ವಿಶ್ವಾಸಾರ್ಹವಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ''ಎಂದು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಪ್ರತಿಪಾದಿಸಿದ್ದಾರೆ.