ಜೈಲಿನಿಂದ ಹೊರನಡೆದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್
Update: 2022-09-03 16:40 GMT
ಅಹಮದಾಬಾದ್: 2002ರ ಗುಜರಾತ್ ಗಲಭೆಗೆ ಸಂಬಂಧಿಸಿ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿಬಂಧನಕ್ಕೊಳಗಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ ಒಂದು ದಿನದ ಬಳಿಕ, ಶನಿವಾರ ಇಲ್ಲಿನ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೂನ್ 26 ರಂದು ಅವರನ್ನು ಬಂಧಿಸಿದಾಗಿನಿಂದ ಇಲ್ಲಿನ ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇರಿಸಲಾಗಿತ್ತು.
ಸುಪ್ರೀಂ ಆದೇಶದ ಪ್ರಕಾರ, ಜಾಮೀನು ಔಪಚಾರಿಕತೆಗಾಗಿ ಅವರನ್ನು ಸೆಷನ್ಸ್ ನ್ಯಾಯಾಧೀಶ ವಿ ಎ ರಾಣಾ ಅವರ ಮುಂದೆ ಹಾಜರುಪಡಿಸಲಾಯಿತು.
"ಸೆಷನ್ಸ್ ನ್ಯಾಯಾಲಯವು ಸುಪ್ರೀಂ ಕೋರ್ಟ್ ವಿಧಿಸಿದ ಷರತ್ತುಗಳ ಮೇಲೆ ಎರಡು ಷರತ್ತುಗಳನ್ನು ವಿಧಿಸಿದೆ. ಸೆಷನ್ಸ್ ನ್ಯಾಯಾಲಯವು ಅವರಿಗೆ 25,000 ರೂಪಾಯಿಗಳ ವೈಯಕ್ತಿಕ ಬಾಂಡ್ ಅನ್ನು ಒದಗಿಸುವಂತೆ ಮತ್ತು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಭಾರತವನ್ನು ತೊರೆಯದಂತೆ ಕೇಳಿದೆ" ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಮಿತ್ ಪಟೇಲ್ ಹೇಳಿದರು.