ಜಾಗತಿಕ ತಾಪಮಾನ ಹ್ತೆಚ್ಚಳಕ್ಕೆ ಕಾರಣವಾದ ರಾಷ್ಟ್ರಗಳ ಸಾಲಿನಲ್ಲಿ ಭಾರತ

Update: 2022-09-14 17:39 GMT

ಹೊಸದಿಲ್ಲಿ, ಸೆ.15: 2022ರ ಮೊದಲ ಐದು ತಿಂಗಳುಗಳಲ್ಲಿ ಇಂಗಾಲದ ಡಯಾಕ್ಸೈಡ್‌ನ ಹೊರಸೂಸುವಿಕೆಯಲ್ಲಿ ಜಾಗತಿಕ ಮಟ್ಟದ ಹೆಚ್ಚಳಕ್ಕೆ ಕಾರಣವಾದ ದೇಶಗಳ ಸಾಲಿನಲ್ಲಿ ಭಾರತ ಕೂಡಾ ಸೇರಿದಂತೆ ಎಂದು ಮಂಗಳವಾರ ಪ್ರಕಟವಾದ ವಿಶ್ವ ಹವಾಮಾನ ಸಂಘಟನೆ ಸಮನ್ವಯದ ಬಹುಏಜೆನ್ಸಿ ವರದಿಯೊಂದು ಬಹಿರಂಗಪಡಿಸಿದೆ.

2022ರ ಮೇ ತಿಂಗಳಲ್ಲಿ ಭಾರತದಲ್ಲಿ ಇಂಗಾಲದ ಹೊರಸೂಸುವಿಕೆಯು ಶೇ.7.5 ಶೇಕಡದಷ್ಟು ಏರಿಕೆಯಾಗಿದೆ. ಇದಕ್ಕೆ ಹೋಲಿಸಿದರೆ ಇದೇ ಅವಧಿಯಲ್ಲಿ ಅಮೆರಿಕದಲ್ಲಿ ಇಂಗಾಲದ ಹೊರಸೂಸುವಿಕೆಯಲ್ಲಿ ಶೇ.5.7 ಶೇಕಡದಷ್ಟು ಏರಿಕೆಯಾಗಿದೆ. ಬಹುತೇಕ ಯುರೋಪಿಯನ್ ರಾಷ್ಟ್ರಗಳಲ್ಲಿಯೂ ಇಂಗಾಲದ ಹೊರಸೂಸುವಿಕೆ ಹೆಚ್ಚಳವಾಗಿದೆಯೆಂದು ಯುನೈಟೆಡ್ ಇನ್ ಸಯನ್ಸ್  ಸಂಘಟನೆಯ  ವರದಿ ತಿಳಿಸಿದೆ.

ಭೂಮಿಯ ತಾಪಮಾನ ಏರಿಕೆಯಿಂದಾಗಿ ಭವಿಷ್ಯದಲ್ಲಿ ಭಾರತದ ಮುಂಗಾರು ಮಳೆಯು ತೀವ್ರತೆ ಹಾಗೂ ವೈವಿಧ್ಯತೆಯನ್ನು ಪಡೆಯಲಿದೆ ಎಂದು ವರದಿಯು ಎಚ್ಚರಿಕೆ ನೀಡಿದೆ. ಭಾರತದಲ್ಲಿ ಮುಂಗಾರಿನ ಅವಧಿಯು ಅಲ್ಪದ್ದಾಗಿದ್ದರೂ, ಅಗಾಧವಾದ ಮಳೆ ಸುರಿಯಲಿದೆಯೆಂದು ವರದಿ ತಿಳಿಸಿದೆ.

ಜಾಗತಿಕ ತಾಪಮಾನದ ಪರಿಣಾಮವು ಬೃಹತ್ ನಗರ ಪ್ರದೇಶಗಳಲ್ಲಿ ಮಳೆ ಸುರಿಯುವಿಕೆಯು ಹೆಚ್ಚಾಗಲಿದೆಯೆಂಬುದನ್ನು ಕೂಡಾ ಅದು ಬೆಟ್ಟು ಮಾಡಿ ತೋರಿಸಿದೆ.  ಈ ವರ್ಷದ ಮಾರ್ಚ್ ಹಾಗೂ ಮೇ ತಿಂಗಳ ನಡುವೆ ದಿಲ್ಲಿ ಐದು ಉಷ್ಣಮಾರುತಗಳನ್ನು ಎದುರಿಸಿದ್ದು, ತಾಪಮಾನವು ದಾಖಲೆಯ 49.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿತ್ತು. ಇಂತಹ ಅತಿರೇಕದ ಹವಾಮಾನದ ಸನ್ನಿವೇಶಗಳು ಹಾಗೂ ಹವಾಮಾನ ಬದಲಾವಣೆಯು ಕಡಿಮೆ ಆದಾಯದ ಹಾಗೂ ಸುವ್ಯವಸ್ಥಿತವಲ್ಲದ ವಸತಿಪ್ರದೇಶಗಳಲ್ಲಿ ವಾಸಿಸುವ ದಿಲ್ಲಿಯ ಅರ್ಧದಷ್ಟು ನಿವಾಸಿಗಳ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ವರದಿ ತಿಳಿಸಿದೆ.

ಪ್ರಸಕ್ತ ಮಾನವರಿಂದಾಗಿ ಉಂಟಾಗುವ ಇಂಗಾಲದ ಡಯಾಕ್ಸೈಡ್‌ನ ಹೊಸಸೂಸುವಿಕೆಯ ಶೇ.70ರಷ್ಟು ಪ್ರಮಾಣಕ್ಕೆ ನಗರಪ್ರದೇಶಗಳು ಕಾರಣವಾಗಿವೆ. ಇದರಿಂದಾಗಿ ಹವಾಮಾನದ ಅತಿರೇಕದ ಬದಲಾವಣೆಗಳುಂಟಾಗುತ್ತವೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News