ಕುರ್‌ಆನ್‌ನಲ್ಲಿರುವ ವಾಕ್ಯಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ: ಸಚಿವೆ ಶಶಿಕಲಾ ಜೊಲ್ಲೆ ಲಿಖಿತ ಉತ್ತರ

Update: 2022-09-15 15:31 GMT

ಬೆಂಗಳೂರು: ಕುರ್‌ಆನ್ ಮತ್ತು ಮದ್ರಸಾಗಳಲ್ಲಿನ ಪಾಠಗಳು ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದಿಲ್ಲ ಎಂದು ರಾಜ್ಯ ಬಿಜೆಪಿ ಸರಕಾರವೇ ಇದೀಗ ಅಧಿಕೃತವಾಗಿ ಉತ್ತರಿಸಿದೆ.

ವಿಧಾನಪರಿಷತ್‌ನ ಅಧಿವೇಶನದಲ್ಲಿ ಈ ಕುರಿತು ಸದಸ್ಯ ಎನ್.ರವಿಕುಮಾರ್ ಅವರು ಕೇಳಿದ್ದ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗೆ ಉತ್ತರಿಸಿರುವ ಮುಜುರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಲಿಖಿತ ಉತ್ತರ ನೀಡಿದ್ದಾರೆ.

ರಾಜ್ಯದ ಮದ್ರಸಾಗಳ ಶಿಕ್ಷಣದ ಚಟುವಟಿಕೆಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಮದ್ರಸಾಗಳ ಶಿಕ್ಷಣ ವ್ಯವಸ್ಥೆಗಾಗಿ ವಿಶೇಷ ಮಂಡಳಿ ರಚನೆಗೆ ರಾಜ್ಯ ಸರಕಾರವು ಸಮಿತಿ ನಿರ್ಧರಿಸಿರುವ ಬೆನ್ನಲ್ಲೇ ಕುರ್‌ಆನ್ ಮತ್ತು ಮದ್ರಸಾಗಳ ಬಗ್ಗೆ ಸರಕಾರವು ನೀಡಿರುವ ಉತ್ತರವು ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಂಪೂರ್ಣ ಮದ್ರಸಾಗಳ ಮಾಹಿತಿ ಪಡೆಯಲು ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ರಾಜ್ಯದ ಮದ್ರಸಾಗಳ ಕುರಿತು ೧೫ ದಿನಗಳಲ್ಲಿ ವರದಿ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ಸೂಚನೆ ನೀಡಿದ್ದರು. ಅಧಿಕಾರಿಗಳ ವರದಿ ಬಳಿಕ ಮುಂದಿನ ತೀರ್ಮಾನ ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿತ್ತು.  ಮದ್ರಸಾ ಶಿಕ್ಷಣದ ಬಗ್ಗೆ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಸಂಘಪರಿವಾರದ ಕೆಲವರು ಸಿಡಿದೆದ್ದಿದ್ದರು. ಮದ್ರಸಾದಲ್ಲಿ ಭಯೋತ್ಪಾದನೆಯ ಪಾಠ ಹೇಳಲಾಗುತ್ತಿದೆ. ಇಸ್ಲಾಂ ಮೂಲಭೂತವಾದ ಕಲಿಸಿ ಕೊಡಲಾಗುತ್ತದೆ. ಅಂಕುಶ ಹಾಕಿ ಇಲ್ಲವೇ ಬ್ಯಾನ್ ಮಾಡಿ ಎನ್ನುವ ಕೂಗು ದೊಡ್ಡದಾಗಿ ಕೇಳಿಬಂದಿತ್ತು. ಬಿಜೆಪಿ ಮುಖಂಡ ಸಿ.ಟಿ.ರವಿ ಟ್ವೀಟ್ ಮಾಡಿ ಮದ್ರಸಾ ಶಿಕ್ಷಣದ ಬಗ್ಗೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಸ್ಮರಿಸಬಹುದು.

ಮಂಡಳಿ ರಚನೆಗೆ ಕಾರಣ ಏನು?

ಕರ್ನಾಟಕದಲ್ಲಿ 900 ಮದ್ರಸಾಗಳು ವಕ್ಫ್ ಬೋರ್ಡ್ ಅಡಿ ನೋಂದಣಿಯಾಗಿದ್ದು ಪ್ರತೀ ವರ್ಷ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಈ ಅನುದಾನ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಮದ್ರಸಾಗಳಲ್ಲಿ ಶಿಕ್ಷಣದ ಬದಲಾಗಿ ಧರ್ಮ ಬೋಧನೆಯ ಕೆಲಸ ಆಗುತ್ತಿದೆ ಎಂಬ ಆರೋಪ ಬಂದಿತ್ತು. ಅಷ್ಟೇ ಅಲ್ಲದೇ ರಾಷ್ಟ್ರಗೀತೆ, ರಾಷ್ಟ್ರ ಭಾವೈಕ್ಯತೆಯ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಮದ್ರಸಾಗಳಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಕಂಪ್ಯೂಟರ್ ತರಬೇತಿ, ವಿಜ್ಞಾನದ ಲ್ಯಾಬ್‌ಗಳು, ನೈತಿಕ ಶಿಕ್ಷಣದಂತಹ ಶೈಕ್ಷಣಿಕ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಹಿನ್ನೆಲೆಯಲ್ಲಿ ಮಂಡಳಿ ರಚನೆಗೆ ಸರಕಾರ ಮುಂದಾಗಿತ್ತು.

ಸಮಿತಿ ಕೆಲಸ ಏನು?

ಮದ್ರಸಾಗಳಲ್ಲಿ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ? ಸರಕಾರದ ಅನುದಾನದ ಸಮರ್ಪಕ ಬಳಕೆ , ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆಯಾ? ಮದ್ರಸಾಗಳಲ್ಲಿ ಧರ್ಮ ಬೋಧನೆ ಆರೋಪದ ಬಗ್ಗೆ ವರದಿ ಸಂಗ್ರಹಿಸಬೇಕು.

ಪಠ್ಯಗಳ ಸಿಲೆಬಸ್ ಹೇಗಿದೆ?

ಈ ಮಕ್ಕಳ ಕಲಿಕೆಗೂ ಬೇರೆ ಮಕ್ಕಳ ಕಲಿಕೆಗೂ ಇರುವ ವ್ಯತ್ಯಾಸ, ಸರಕಾರದ ಅನುದಾನ ಹೊರತು ಪಡಿಸಿ ಖಾಸಗಿಯಾಗಿ ನಡೆಯುತ್ತಿರೋ ಮದ್ರಸಾಗಳ ಕಾರ್ಯಚಟುವಟಿಕೆಗಳು ಏನು? ಖಾಸಗಿ ಮದ್ರಸಾಗಳ ಅನುದಾನ ಮೂಲ ಏನು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮಗಳು, ಮೂಲಭೂತ ಕರ್ತವ್ಯಗಳ ಪಾಲನೆ ಆಗುತ್ತಿದೆಯಾ ಎಂಬ ವರದಿ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯದಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ: ಸಿಎಂ ಬೊಮ್ಮಾಯಿ ಘೋಷಣೆ

ಉತ್ತರ ಪ್ರದೇಶದಲ್ಲಿ ಶಿಕ್ಷಕರು ಬಿ.ಎಡ್ ಪದವಿ ಜೊತೆಗೆ ಟಿಇಟಿ ಪರೀಕ್ಷೆ ಉತ್ತೀರ್ಣ ಕಡ್ಡಾಯ. ಮದ್ರಸಾಗಳಲ್ಲಿ ಪೂರ್ಣ ಪ್ರಮಾಣದಲ್ಲಿ ನೀಡುತ್ತಿರುವ ಧಾರ್ಮಿಕ ಶಿಕ್ಷಣಕ್ಕೆ ಕಡಿವಾಣ. ಶೇ.20 ಮಾತ್ರ ಧಾರ್ಮಿಕ ಶಿಕ್ಷಣ, ಶೇ.80ರಷ್ಟು ಹೊಸ ಶಿಕ್ಷಣ ನೀಡಬೇಕಾಗುತ್ತದೆ. ಶಿಕ್ಷಣ ಇಲಾಖೆಯ ಮೇಲುಸ್ತುವಾರಿಯಲ್ಲಿ ಪಠ್ಯಕ್ರಮ ರಚನೆಯಾಗುತ್ತದೆ. ಮದ್ರಸಾಗಳಲ್ಲಿ ಒಬ್ಬ ಶಿಕ್ಷಕರು, 5ನೇ ತರಗತಿಯಲ್ಲಿ ನಾಲ್ವರು ಶಿಕ್ಷಕರು, 6-8ನೇ ತರಗತಿಗೆ ಇಬ್ಬರು ಶಿಕ್ಷಕರು, 9-10ನೇ ತರಗತಿಗೆ ಆಧುನಿಕ ಶಿಕ್ಷಣವನ್ನು ಕಲಿಸಲು ಮೂವರು ಶಿಕ್ಷಕರ ನೇಮಕ ಮಾಡಲಾಗುತ್ತದೆ. ರಾಷ್ಟ್ರಗೀತೆಯನ್ನು ಪ್ರತಿನಿತ್ಯ ಹಾಡುವುದು ಕಡ್ಡಾಯ. ಅನಧಿಕೃತ ಮದ್ರಸಾಗಳನ್ನು ಮುಚ್ಚಲಾಗುತ್ತದೆ.

ಲಿಖಿತ ಉತ್ತರದಲ್ಲೇನಿದೆ?

ಕುರ್‌ಆನ್‌ನಲ್ಲಿರುವ ವಾಕ್ಯಗಳು ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದಿಲ್ಲ. ಕುರ್‌ಆನ್‌ನಲ್ಲಿನ ವಾಕ್ಯಗಳನ್ನು ಅವುಗಳ ಹಿನ್ನೆಲೆಯೊಂದಿಗೆ ಧಾರ್ಮಿಕ ವಿದ್ವಾಂಸರು ಮಾತ್ರ ಅರ್ಥೈಯಿಸಬಹುದಾಗಿದೆ. ಮದ್ರಸಾಗಳಲ್ಲಿ ೩ರಿಂದ ೧೦ ವರ್ಷಗಳ ಒಳಗಿನ ಮಕ್ಕಳಲ್ಲಿ ಸಮಾಜದ ಇತರ ಧರ್ಮಗಳ ವಿರುದ್ಧವಾದ ದ್ವೇಷ ಭಾವನೆಗಳನ್ನು ತುಂಬುವ ಇಂತಹ ಪಾಠಗಳನ್ನು ಮದ್ರಸಾಗಳಲ್ಲಿ ಮಾಡುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗವುಂಟಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿಲ್ಲ ಎಂದೂ ಉತ್ತರ ಒದಗಿಸಿದೆ. ಮದ್ರಸಾಗಳಲ್ಲಿ ಇಂತಹ ಶಿಕ್ಷಣ ಅತೀ ಸಣ್ಣ ವಯಸ್ಸಿನಲ್ಲೇ ಪಡೆಯುವ ಮಕ್ಕಳು ಸಮಾಜ ಕಂಟಕರಾಗಿ ದೇಶದ ಆಸ್ತಿ ಪಾಸ್ತಿಗಳನ್ನು ನಾಶಪಡಿಸುವುದರಲ್ಲಿ ಪ್ರಮುಖರಾಗಿರುವುದು ಕೂಡ ಸರಕಾರದ ಗಮನಕ್ಕೆ ಬಂದಿಲ್ಲ ಎಂದು ಲಿಖಿತ ಉತ್ತರ ನೀಡಿದೆ.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News