ಕಾಸರಗೋಡು : ಬಸ್ಸಿನಲ್ಲಿ ಸಾಗಿಸುತ್ತಿದ್ದ ಹವಾಲ ಹಣ ವಶಕ್ಕೆ; ಆರೋಪಿ ಸೆರೆ
Update: 2022-09-16 16:29 GMT
ಕಾಸರಗೋಡು : ಬಸ್ಸಿನಲ್ಲಿ ಸಾಗಿಸುತ್ತಿದ್ದ ಸುಮಾರು 30 ಲಕ್ಷ ರೂ. ಹವಾಲ ಹಣವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಶರದ್ ದಾಬಡೆ ( 22) ಬಂಧಿತ ಆರೋಪಿ.
ಶುಕ್ರವಾರ ಬೆಳಗ್ಗೆ ಮಂಗಳೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸನ್ನು ಮಂಜೇಶ್ವರ ಅಬಕಾರಿ ದಳ ಸಿಬ್ಬಂದಿ ತಪಾಸಣೆ ನಡೆಸಿದಾಗ ಅಕ್ರಮ ಹಣ ಪತ್ತೆಯಾಗಿದೆ. ಹಣಕ್ಕೆ ಯಾವುದೇ ದಾಖಲೆ ಪತ್ರಗಳಿರಲಿಲ್ಲ. ಮಲಪ್ಪುರಂ ಮಂಜೇರಿಯ ಜುವೆಲ್ಲರಿಗೆ ಹಣ ಕೊಂಡೊಯ್ಯುತ್ತಿದ್ದುದಾಗಿ ಈತ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಹೆಚ್ಚಿನ ತನಿಖೆಗಾಗಿ ಶರದ್ ದಾಬಡೆಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಬಗ್ಗೆ ಆದಾಯ ಇಲಾಖೆಯೂ ತನಿಖೆ ನಡೆಸುತ್ತಿದೆ.